ಪಡುಮಲೆ ಕುರಿತು ಅಪಪ್ರಚಾರ ಮಾಡುವವರಿಗೆ ಕೋಟಿ ಚೆನ್ನಯರೇ ಒಳ್ಳೆ ಬುದ್ಧಿ ಕೊಡಲಿ; ಹರಿಕೃಷ್ಣ ಬಂಟ್ವಾಳ್

ಮಂಗಳೂರು: ಚರಿತ್ರೆ ಯಾವತ್ತೂ ಸುಳ್ಳಾಗಲ್ಲ ಮತ್ತು ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೋಟಿ- ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನ ಎನ್ನುವುದಕ್ಕೆ ಪಾಡ್ದನ, ವಿದೇಶಿಯರ ಸಹಿತ ವಿವಿಧ ವಿದ್ವಾಂಸರು ಬರೆದ ಪುಸ್ತಕ ಹಾಗೂ ಸ್ಥಳದಲ್ಲಿನ ಐತಿಹ್ಯಗಳು ಸಾಕ್ಷಿ, ದಾಖಲೆಯಾಗಿ ಉಳಿದಿದೆ. ಆದುದರಿಂದ ನಕಲಿ ಇತಿಹಾಸ ಸೃಷ್ಟಿಸುವ ಕೆಲಸ ಯಾರೂ ಮಾಡಬೇಡಿ ಎಂದು ಬಿಜೆಪಿ ಮುಖಂಡ, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಟ್ರಸ್ಟ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌ ಹೇಳಿದ್ದಾರೆ. ಕೋಟಿ ಚೆನ್ನಯರ ಜನ್ಮಸ್ಥಾನ-ಮೂಲಸ್ಥಾನವಾದ ಪಡುಮಲೆಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಪ್ರಸಿದ್ಧ ಮೂರು ಕ್ಷೇತ್ರಗಳಲ್ಲೊಂದಾದ ಐತಿಹಾಸಿಕ ಪಡುಮಲೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ದೇಶಕ್ಕೆ ಅರ್ಪಣೆಗೊಳಿಸಲಾಗುವುದು. ಕೋಟಿ-ಚೆನ್ನಯ ಜನ್ಮಸ್ಥಾನ ದೇಶದ ಐತಿಹಾಸಿಕ ಪ್ರವಾಸಿ ತಾಣವಾಗಬೇಕೆಂಬುದೇ ನಮ್ಮ ಉದ್ದೇಶ ಎಂದರು. ಇದೇ ವೇಳೆ ತುಳುನಾಡಿನಲ್ಲಿ ಸತ್ಯ, ಧರ್ಮ, ನಿಷ್ಠೆಯಲ್ಲಿ ಬೆಳೆದು ಐತಿಹಾಸಿಕ ಪುರುಷರಾದವರು ಕೋಟಿ ಚೆನ್ನಯರು. ಅವರು ಕಾಲ್ಪನಿಕ ವ್ಯಕ್ತಿಗಳಲ್ಲ, ಪುರಾಣ ಪುರುಷರೂ ಅಲ್ಲ. ಮಾನವರಾಗಿ ಹುಟ್ಟಿ, ಸತ್ಯ-ಧರ್ಮದ ಬದುಕು ನಡೆಸಿ, ದೈವತ್ವಕ್ಕೇರಿದವರು. ಕೋಟಿ ಚೆನ್ನಯರು ಜನುಮ ಪಡೆದ ಪಡುಮಲೆ ಕ್ಷೇತ್ರ 550 ವರ್ಷಗಳಿಂದ ಕತ್ತಲೆಯಲ್ಲಿತ್ತು. ಅದಕ್ಕೆ ಸತ್ಯವನ್ನು ಮರೆಮಾಚಿ ಇತಿಹಾಸ ತಿರುಚಿದ ವ್ಯಕ್ತಿಗಳ ಕುಮ್ಮಕ್ಕು ಕಾರಣ. ಕೋಟಿ-ಚೆನ್ನಯರ ಜನ್ಮಸ್ಥಾನವನ್ನು ಅಭಿವೃದ್ಧಿಪಡಿಸಿ ನಾಡಿಗೆ ಅರ್ಪಿಸುವ ದೊಡ್ಡ ಕೈಂಕರ್ಯಕ್ಕೆ ನಾವು ಕೈ ಹಾಕಿದ್ದೇವೆ ಎಂದರು. ಇನ್ನು ಕೂವೆತೋಟದ ಮನೆ, ಕಂಬಳ ಗದ್ದೆ, ಅರಮನೆ, ಚಾವಡಿ ಸಹಿತ ಅನೇಕ ಕುರುಹುಗಳು ಕೋಟಿ-ಚೆನ್ನಯರ ಇರುವಿಕೆಯನ್ನು ಕಣ್ಣಿಗೆ ಕಟ್ಟುತ್ತಿವೆ. ಪಡುಮಲೆ ಶಾಪಗ್ರಸ್ಥ ಭೂಮಿ. ಅಲ್ಲಿಗೆ ಯಾರೂ ತೆರಳಬಾರದು ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಪಡುಮಲೆ ಶಾಪಗ್ರಸ್ಥ ಭೂಮಿಯಲ್ಲ. ಅದು ಅದ್ಭುತ ಧಾರ್ಮಿಕ ಚೈತನ್ಯ ಇರುವ ಭೂಮಿ. ಪಡುಮಲೆಗೆ ಭೇಟಿ ನೀಡಿದಾಗ ಈ ಸತ್ಯ ನಮ್ಮ ಅರಿವಿಗೆ ಬರುತ್ತದೆ. ಪಡುಮಲೆ ಕುರಿತಾದ ಅಪಪ್ರಚಾರ ಮಾಡುವವರಿಗೆ ಕೋಟಿ ಚೆನ್ನಯರೇ ಒಳ್ಳೆಯ ಬುದ್ಧಿ ಕೊಡಲಿ. ಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸ್ಥಳವಾಗಿರದೇ ಎಲ್ಲ ಸಮುದಾಯದ ಜನರಿಗೆ ಸಂಬಂಧಿಸಿದ ಆರಾಧನಾ ಕೇಂದ್ರವಾಗಲಿದೆ ಎಂದು ಹರಿಕೃಷ್ಣ ಬಂಟ್ವಾಳ್‌ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಟ್ರಸ್ಟ್‌ ಆಡಳಿತ ಮೊಕ್ತೇಸರ ವಿನೋದ್‌ ಆಳ್ವ, ಗೌರವಾಧ್ಯಕ್ಷರಾದ ರುಕ್ಮಯ ಪೂಜಾರಿ, ರಂಜನ್‌ ಮಿಜಾರು, ಉಪಾಧ್ಯಕ್ಷರಾದ ಪದ್ಮನಾಭ ಕೋಟ್ಯಾನ್‌ ಪಡು, ವಿಜಯಕುಮಾರ್‌ ಸೊರಕೆ, ಸಂಚಾಲಕ ರತನ್‌ ನಾಯಕ್‌ ಕರ್ನೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು, ಉಪಾಧ್ಯಕ್ಷ ಬಿ.ಪಿ. ದಿವಾಕರ್‌, ಸಹಸಂಚಾಲಕ ಸದಸ್ಯ ಸುರೇಶ್ಚಂದ್ರ ಕೋಟ್ಯಾನ್‌ ಉಪಸ್ಥಿತರಿದ್ದರು. ಮಾರ್ಗಸೂಚಿ ಪಾಲಿಸಿ ಬ್ರಹ್ಮಕಲಶೋತ್ಸವ ಪಡುಮಲೆ ಕೋಟಿ -ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ ನೇತೃತ್ವದಲ್ಲಿ ಪಡುಮಲೆಯಲ್ಲಿ ಏ.22ರಿಂದ 24ರವರೆಗೆ ನಾಗಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆದಿ ಸಾನ್ನಿಧ್ಯ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಸರಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಬ್ರಹ್ಮಕಲಶೋತ್ಸವ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಉತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳು ಎಲ್ಲರೂ ಕೋವಿಡ್‌ ನಿಯಮ ಪಾಲಿಸಿ ಭಾಗವಹಿಸಬೇಕು ಎಂದರು.


from India & World News in Kannada | VK Polls https://ift.tt/32zPYwq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...