ಮೈಸೂರು: ಕಿಡಿಗೇಡಿಗಳ ಕುಕೃತ್ಯಕ್ಕೆ ಭಸ್ಮವಾದ ಗ್ರಂಥಾಲಯದ ಬದಲಿಗೆ ರಾಜೀವ್ ನಗರದಲ್ಲಿ ನಿರ್ಮಾಣವಾಗಲಿರುವ ನೂತನ ಗ್ರಂಥಾಲಯದಲ್ಲಿ ಕನ್ನಡಪ್ರೇಮಿ ಸೈಯದ್ ಇಸಾಕ್ ಅವರಿಗೆ ಪ್ರತಿ ತಿಂಗಳು ಸಂಭಾವನೆ ನೀಡಲು ತೀರ್ಮಾನಿಸಲಾಗಿದೆ. ನಗರಪಾಲಿಕೆಯಲ್ಲಿ ನಡೆದ ಪ್ರಾಧಿಕಾರದ ನೂತನ ಆಯ-ವ್ಯಯ ಮಂಡನೆ ಹಾಗೂ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ರಾಜೀವ್ ನಗರ ಗ್ರಂಥಾಲಯ ಕಟ್ಟಡ ನಿರ್ಮಾಣವನ್ನು ಏ.23ರೊಳಗಾಗಿ ಪ್ರಾರಂಭಿಸಲು ತೀರ್ಮಾನಿಸಲಾಯಿತು. ದಾನಿಗಳಿಂದ ಸಂಗ್ರಹವಾಗುವ ಮೊತ್ತವನ್ನು ಬ್ಯಾಂಕ್ನಲ್ಲಿ ಜಮಾ ಮಾಡಲು ಪ್ರತ್ಯೇಕ ಜಂಟಿ ಖಾತೆ ತೆರೆದಿರುವ ಬಗ್ಗೆ ಚರ್ಚಿಸಲಾಯಿತು. ಈ ಖಾತೆಗೆ ಈಗಾಗಲೇ ಸೈಯದ್ ಅವರಿಗೆ ದಾನಿಗಳು ನೀಡಿರುವ ಮೊತ್ತವನ್ನು ಮತ್ತು ಮುಂದೆ ದಾನಿಗಳು ನೀಡುವ ಮೊತ್ತವನ್ನು ಜಮಾ ಮಾಡಬೇಕು. ಸೈಯದ್ ಇಸಾಕ್ ಅವರಿಗೆ ಗ್ರಂಥಾಲಯ ಪ್ರಾರಂಭವಾದ ನಂತರ ಪ್ರತಿ ತಿಂಗಳು ನೀಡುವುದು, ಅದೇ ಗ್ರಂಥಾಲಯದಲ್ಲಿ ಗೌರವ ಸಂಭಾವನೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ಸೈಯದ್ ಅವರ ಪುತ್ರ ಅಥವಾ ಪುತ್ರಿಗೆ ಅವಕಾಶ ನೀಡುವುದು, ಮುಡಾದಿಂದ ಕನಿಷ್ಠ 5 ಸಾವಿರ ಚದರ ಅಡಿ ನಿವೇಶನ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ನಿರ್ಮಿತಿ ಕೇಂದ್ರ ವತಿಯಿಂದ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಲ್ಲಿವರೆಗೆ ದಾನಿಗಳಿಂದ ಸ್ವೀಕರಿಸಲಾಗುವ ಪುಸ್ತಕ, ಪೀಠೋಪಕರಣ, ಇತ್ಯಾದಿಗಳನ್ನು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರ ಕಚೇರಿಯಲ್ಲಿ ಸಂಗ್ರಹಿಸಿಡಲು ತೀರ್ಮಾನಿಸಲಾಯಿತು. ಮೇಯರ್ ರುಕ್ಮಿಣಿ ಮಾದೇಗೌಡ, ಆಯುಕ್ತೆ ಶಿಲ್ಪಾನಾಗ್, ಮುಡಾ ಆಯುಕ್ತ ಡಿ.ಬಿ.ನಟೇಶ್, ನಗರ ಗ್ರಂಥಾಲಯ ಉಪ ನಿರ್ದೇಶಕ ಡಿ.ಮಂಜುನಾಥ್ ಇದ್ದರು.
from India & World News in Kannada | VK Polls https://ift.tt/2RC95U5