ಬೆಂಗಳೂರು: ನಗರದ ಮತ್ತಿಕೆರೆ ನಿವಾಸಿಯೊಬ್ಬರು ತಂದೆಯ ಅಂತ್ಯ ಸಂಸ್ಕಾರಕ್ಕೆ ತಾಳಿ ಮಾರಲು ಮುಂದಾದ ಘಟನೆ ನಡೆದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ತಂದೆಯು ಬದುಕಿರಬಹುದೆಂದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅದರೆ, ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಅದೇ ಆ್ಯಂಬುಲೆನ್ಸ್ನಲ್ಲಿ ಸಿಬ್ಬಂದಿ ಮೃತದೇಹ ತರಲು 60 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದಾರೆ. ಈ ಸಮಯದಲ್ಲಿ ಮಹಿಳೆ ತಾಳಿ ಮಾರಲು ಮುಂದಾಗಿದ್ದಾರೆ. ನಂತರ 13 ಸಾವಿರ ರೂ. ಕಟ್ಟಿಸಿಕೊಂಡು ಮೃತದೇಹ ನೀಡಿದ್ದಾರೆ ಎನ್ನಲಾಗಿದೆ. ಆಕ್ಸಿಜನ್ ಸಿಗದೆ ಟೆಕ್ಕಿ ಸಾವು! ಆಕ್ಸಿಜನ್ ಸಿಗದ ಕೊರೊನಾ ಸೋಂಕಿತ ಟೆಕ್ಕಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟ ಘಟನೆ ನಗರದಲ್ಲಿನಡೆದಿದೆ. ಸುಬ್ರಹ್ಮಣ್ಯ (35) ಮೃತರು. ಆರಂಭದಲ್ಲಿ ಮೃತರ ಪತ್ನಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರು ಚೇತರಿಸಿಕೊಂಡಿದ್ದರು. ಬಳಿಕ ಸುಬ್ರಹ್ಮಣ್ಯ ಅವರಿಗೆ ಸೋಂಕು ತಗಲಿದ್ದು, ಅವರನ್ನು ಬನಶಂಕರಿಯ ದೇವಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಬ್ರಹ್ಮಣ್ಯ ಅವರಿಗೆ ಆಮ್ಲಜನಕ ಪೂರೈಕೆ ಅನಿವಾರ್ಯವಾದ ಕಾರಣ ವೈದ್ಯರು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದ್ದರು. ''ಸಾಕಷ್ಟು ಆಸ್ಪತ್ರೆಗಳಿಗೆ ಕರೆ ಮಾಡಿ ಆಕ್ಸಿಜನ್ ಇರುವ ಹಾಸಿಗೆಗಾಗಿ ಪ್ರಯತ್ನಿಸಿದ್ದೆ. ನೋಡಲ್ ಅಧಿಕಾರಿ, ಸ್ಥಳೀಯ ಅಧಿಕಾರಿ, ಸಚಿವ ಸುಧಾಕರ್ ಅವರ ಕಚೇರಿ, ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ದರೂ ಸಹಾಯ ಸಿಗಲಿಲ್ಲ,'' ಎಂದು ಸುಬ್ರಹ್ಮಣ್ಯ ಅವರ ಕುಟುಂಬ ಸ್ನೇಹಿತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಆಶಾ ಸೂರ್ಯನಾರಾಯಣ ಹೇಳಿದರು. ''ಬರೋಬ್ಬರಿ 60 ದೂರವಾಣಿ ಕರೆಗಳನ್ನು ಮಾಡಿದ್ದೆ. ಕೊನೆಗೆ, ಪ್ರಶಾಂತ್ ಆಸ್ಪತ್ರೆಯ ವೈದ್ಯ ಡಾ.ವಿಶ್ವನಾಥ್ ರೆಡ್ಡಿ ದಾಖಲು ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ, ಆಸ್ಪತ್ರೆ ಬೊಮ್ಮನಹಳ್ಳಿಯಲ್ಲಿತ್ತು. ಬನಶಂಕರಿಯಿಂದ ಬೊಮ್ಮನಹಳ್ಳಿಗೆ ತಲುಪುವಷ್ಟರಲ್ಲಿ ಸುಬ್ರಮಣ್ಯ ಅವರ ಆಮ್ಲಜನಕ ಪ್ರಮಾಣ ಶೇ.65ಕ್ಕೆ ಇಳಿದಿತ್ತು. ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪಲಾಗದ್ದರಿಂದ ಸುಬ್ರಹ್ಮಣ್ಯ ಕೊನೆಯುಸಿರೆಳೆದರು,'' ಎಂದು ಆಶಾ ಬೇಸರದಿಂದ ನುಡಿದರು.
from India & World News in Kannada | VK Polls https://ift.tt/3dG6n8Y