ಹೊಸದಿಲ್ಲಿ: ಜೈಪುರ್ ಗೋಲ್ಡನ್ ಹಾಸ್ಪಿಟಲ್ನಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ಶುಕ್ರವಾರ ರಾತ್ರಿ 25 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸ್ವತಃ ಆಸ್ಪತ್ರೆಯ ಉನ್ನತ ಅಧಿಕಾರಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಕೊರತೆ ಮೇರೆ ಮೀರಿದ್ದು, ಇದರ ಪರಿಣಾಮಗಳು ಕಾಣಿಸಿಕೊಳ್ಳಲು ಆರಂಭಿಸಿವೆ. “ನಮಗೆ ಸರಕಾರದಿಂದ 3.5 ಮೆಟ್ರಿಕ್ ಟನ್ ಆಮ್ಲಜನಕ ನಿಗದಿಯಾಗಿತ್ತು. ಅಂಜೆ 5 ಗಂಟೆ ಸುಮಾರಿಗೆ ಇದು ತಲುಪಬೇಕಾಗಿತ್ತು. ಆದರೆ ಇದು ತಲುಪುವಾಗ ಮಧ್ಯ ರಾತ್ರಿಯಾಗಿತ್ತು. ಅಷ್ಟೊತ್ತಿಗಾಗಲೇ 25 ರೋಗಿಗಳು ಸಾವನ್ನಪ್ಪಿದ್ದರು," ಎಂದು ಜೈಪುರ್ ಗೋಲ್ಡನ್ ಹಾಸ್ಪಿಟಲ್ ವೈದ್ಯಕೀಯ ನಿರ್ದೇಶ ಡಾ.ಡಿ.ಕೆ.ಬಲುಜಾ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಕನಿಷ್ಠ 215 ಕೊರೊನಾ ಸೋಂಕಿತರು ಐಸಿಯುನಲ್ಲಿದ್ದು, ಕೃತಕ ಆಕ್ಸಿಜನ್ನ್ನು ಆಶ್ರಯಿಸಿದ್ದಾರೆ. ಇದೀಗ ಆಸ್ಪತ್ರೆ ನೆರವಿಗಾಗಿ ಹೈಕೋರ್ಟ್ ಮೊರೆ ಹೋಗಿದೆ. “ನಮ್ಮ ಆಸ್ಪತ್ರೆಯಲ್ಲಿ ಮುಂದಿನ ಕೆಲವು ನಿಮಿಷಗಳಲ್ಲಿ ದೊಡ್ಡ ಮಾನವ ದುರಂತ ಸಂಭವಿಸಲಿದೆ. ನಾವು ಈಗಾಗಲೇ 25 ಜೀವಗಳನ್ನು ಕಳೆದುಕೊಂಡಿದ್ದೇವೆ. ನಾವು ಆಮ್ಲಜನಕಕ್ಕಾಗಿ ಒದ್ದಾಡುತ್ತಿದ್ದೇವೆ. ನಿಮ್ಮ ಮುಂದೆ ನಮ್ಮ ವೈದ್ಯರು ಇದ್ದಾರೆ. ದಯವಿಟ್ಟು ಜೀವಗಳನ್ನು ಉಳಿಸಿ," ಜೈಪುರ ಗೋಲ್ಡನ್ ಹಾಸ್ಪಿಟಲ್ ಕೋರ್ಟ್ಗೆ ಮನವಿ ಮಾಡಿಕೊಂಡಿದೆ. ಶನಿವಾರದಿಂದ ಆಮ್ಲಜನಕಕ್ಕಾಗಿ ಈ ರೀತಿ ಬೇಡಿಕೆ ಸಲ್ಲಿಸುತ್ತಿರುವ ಎರಡನೇ ಆಸ್ಪತ್ರೆ ಜೈಪುರ್ ಗೋಲ್ಡನ್ ಹಾಸ್ಪಿಟಲ್ ಆಗಿದೆ. ಈಗಾಗಲೇ ಮೂಲ್ಚಂದ್ ಹಾಸ್ಪಿಟಲ್ ಟ್ಟೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ಗೆ ಆಮ್ಲಜನಕಕ್ಕಾಗಿ ಮನವಿ ಮಾಡಿಕೊಂಡಿದೆ. ನಮ್ಮ ಆಸ್ಪತ್ರೆಯಲ್ಲಿ 130 ರೋಗಿಗಳು ಆಮ್ಲಜನಕದ ನೆರವಿನಲ್ಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
from India & World News in Kannada | VK Polls https://ift.tt/3dJZ2F8