ಕಟಪಾಡಿ: ಮುಂಬಯಿಯಲ್ಲಿ ಉದ್ಯಮಿಯಾಗಿದ್ದ ಕ್ರೈಸ್ತ ಧರ್ಮೀಯರಾದ ಗ್ಯಾಬ್ರಿಯಲ್ ಫೇಬಿಯನ್ ನಜ್ರತ್ ಅವರು ತನ್ನ ಹುಟ್ಟೂರು ಶಿರ್ವದಲ್ಲಿ ಸಿದ್ಧಿವಿನಾಯಕ ದೇವಸ್ಥಾನ ನಿರ್ಮಿಸಿ ಸಾಮರಸ್ಯಕ್ಕೊಂದು ಮಾದರಿಯಾಗಿದ್ದಾರೆ. ಐದು ದಶಕಗಳ ಕಾಲ ಮುಂಬಯಿಯ ದಾದರ್ನ ಸಿದ್ಧಿ ವಿನಾಯಕ ದೇವಸ್ಥಾನದ ಬಳಿ ಉದ್ಯಮ ಸ್ಥಾಪಿಸಿದ ಅವರು, ತನ್ನ ಏಳಿಗೆಗೆ ಗಣೇಶನೇ ಕಾರಣ ಎಂಬುದಾಗಿ ನಂಬಿ ತನ್ನೂರಿನಲ್ಲಿ ಗುಡಿ ನಿರ್ಮಿಸಿ ಧರ್ಮ ಬೇರೆಬೇರೆಯಾದರೂ ಎಲ್ಲರಿಗೂ ದೇವರು ಒಬ್ಬನೇ ಎಂಬುದನ್ನು ಪ್ರತಿಪಾದಿಸುತ್ತಾರೆ. ಶಿರ್ವದ ನ್ಯಾರ್ಮ ಹಳೆಹಿತ್ಲು ಎಂಬಲ್ಲಿ ತನ್ನ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಎರಡು ಮೂರು ಎಕರೆ ಜಾಗದಲ್ಲಿಒಂದಿಷ್ಟು ಸೈಟ್ ನಿರ್ಮಿಸಿ ವಿಕ್ರಯಿಸಿದ್ದು, ಅದರಲ್ಲಿ 15 ಸೆಂಟ್ಸ್ ಜಾಗ ಉಳಿಸಿ ದೇವಾಲಯ ನಿರ್ಮಿಸಿದ್ದಾರೆ. ಜಾಗ ಸಹಿತ ಒಟ್ಟು ಎರಡು ಕೋಟಿ ರೂ. ಮೌಲ್ಯ ವ್ಯಯಿಸಿರುವ ಅವರು, ಮೇ 4 ರಂದು ಉಡುಪಿಯ ಸ್ವಾಮೀಜಿಯೊಬ್ಬರ ಮಾರ್ಗದರ್ಶನದಲ್ಲಿ ಕಪ್ಪು ಶಿಲೆಯ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೆ ದಿನ ನಿಗದಿಪಡಿಸಿದ್ದಾರೆ. ಹಿಂದೂ ಧರ್ಮದ ಬಗ್ಗೆ ಒಂದಿಷ್ಟು ಒಲವು, ಗೌರವ ಹೊಂದಿರುವ ಇವರು ಈ ಹಿಂದೆ ಬಂಟಕಲ್ಲು ಹೇರೂರಿನಲ್ಲಿ ತಮಗೆ ಸಂಬಂಧಪಟ್ಟ ಜಾಗದಲ್ಲಿ ನಾಗಬನ ಕೂಡಾ ನಿರ್ಮಿಸಿದ್ದರು. ಏಸುವಿನೊಂದಿಗೆ ಗಣಪತಿಯನ್ನೂ ಪೂಜಿಸುವ ಅವರು ಸ್ವತಃ ಡೈವರ್ಕ್ಸ್ ಉದ್ದಿಮೆ ಹೊಂದಿದ್ದು, ತಾನೇ ಸ್ವತಃ ನಿರ್ಮಿಸಿರುವ ಸಿದ್ಧಿವಿನಾಯಕನ ಮೂರ್ತಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ದೇವರಿದ್ದಾರೋ ಇಲ್ಲವೂ ಎನ್ನುವುದಕ್ಕಿಂತ ನಮ್ಮ ಪರಿಶುದ್ಧ ನಡೆ ನುಡಿಯಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳ ಬೇಕು ಎನ್ನುತ್ತಾರೆ ಅವರು. ಪರರ ಸೇವೆಯಲ್ಲಿ ಖುಷಿ! ಶಿರ್ವದಲ್ಲಿ 10ನೇ ತರಗತಿಯ ವಿದ್ಯಾಭ್ಯಾಸ ಮುಗಿಸಿ ಬಳಿಕ ಮುಂಬಯಿ ಸೇರಿದ್ದ ಗ್ಯಾಬ್ರಿಯಲ್ ಸಾಕಷ್ಟು ಕಷ್ಟಪಟ್ಟು ದುಡಿದು ಬಳಿಕ ಉದ್ಯಮಿಯಾಗಿ ಬೆಳೆದು 60 ವರ್ಷದಲ್ಲಿ 3 ಕಡೆ ಉದ್ಯಮ ಸ್ಥಾಪಿಸಿ ಯಶಸ್ಸು ಗಳಿಸಿದ್ದರು. ತನ್ನ ಸಂಪಾದನೆಯಿಂದ 13 ಮಂದಿ ಒಡಹುಟ್ಟಿದವರ ಬದುಕು ಕಟ್ಟಲು ನೆರವಾಗಿದ್ದರು. ಸಹೋದರ ಸಹೋದರಿಯರ ಸಹಿತ 21 ಮಂದಿ ಕುಟುಂಬ ಸದಸ್ಯರಿಗೆ ಮುಂದೆ ನಿಂತು ಮದುವೆ ಮಾಡಿಸಿದ್ದ ಅವರು ಸ್ವತಃ ಅವಿವಾಹಿತರಾಗಿಯೇ ಉಳಿದಿದ್ದಾರೆ. 60ಕ್ಕೂ ಹೆಚ್ಚು ಮಂದಿಗೆ ಧರ್ಮಾತೀತವಾಗಿ ಮನೆ ಕಟ್ಟಲು, ಮದುವೆಗೆ ನೆರವು ನೀಡಿದ್ದಾರೆ. ಮುಂಬಯಿಯ ಉದ್ದಿಮೆಯನ್ನು ಮಾರಿ ಆ ಹಣವನ್ನು ಅಲ್ಲಿನ ಸಿಬ್ಬಂದಿಗೆ ಹಂಚಿ ಬಂದಿರುವ ಅವರು ಪ್ರಸ್ತುತ ಶಿರ್ವದಲ್ಲಿ ಸಣ್ಣ ಮನೆಯೊಂದರಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದಾರೆ. ದೇವಸ್ಥಾನ ನಿರ್ಮಿಸುವುದು ನನ್ನ ವೈಯಕ್ತಿಕ ಇಚ್ಛೆ ಮತ್ತು ನಿರ್ಧಾರ. ಯಾರಿಂದಲೂ ಹಣ ವಂತಿಗೆ ಪಡೆಯುವುದಿಲ್ಲ. ನನ್ನ ಹೆತ್ತವರ ನೆನಪಿಗೆ ಅವರಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಶಾಶ್ವತ ನೆನಪಾಗಿ ಈ ದೇವಸ್ಥಾನ ಇರಬೇಕು ಎಂಬುವುದೇ ನನ್ನಾಸೆ. ಮುಂದೆ ದೇವರು ತನಗೆ ಬೇಕಾದಂತೆ ಇದನ್ನು ನಡೆಸಿಕೊಂಡು ಹೋಗುತ್ತಾನೆ ಎಂಬ ನಂಬಿಕೆಯಿದೆ.
from India & World News in Kannada | VK Polls https://ift.tt/3glg7a5