ಫಾಲಲೋಚನ ಆರಾಧ್ಯಚಾಮರಾಜನಗರ: ಜಿಲ್ಲೆಯ ಉದ್ದಗಲಕ್ಕೂ ಇದೀಗ ಅರಿಶಿನ ಕಟಾವು ನಡೆದಿದೆಯಾದರೂ ಬೆಳೆಗಾರರ ಮುಖದಲ್ಲಿ ಖುಷಿ ಇಲ್ಲ. ಅರಿಶಿನಕ್ಕೆ ಉತ್ತಮ ಧಾರಣೆ ಇಲ್ಲಎಂಬುದು ಇದಕ್ಕೆ ಕಾರಣ. ಸರಕಾರವು ‘ಒಂದು ಜಿಲ್ಲೆಒಂದು ಉತ್ಪನ್ನ ಅಥವಾ ಬೆಳೆ’ ಯೋಜನೆಯಡಿ ಜಿಲ್ಲೆಗೆ ಅರಿಶಿನವನ್ನು ನಿಗದಿ ಮಾಡಿದೆ. ಸದ್ಯ ಸರಕಾರದ ಪ್ರಕಾರ ಅರಿಶಿನ ಜಿಲ್ಲೆಯ ಸಾಂಪ್ರದಾಯಿಕ ಹಾಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಬೆಳೆ ಅಥವಾ ಉತ್ಪನ್ನವಾಗಿದೆ. ಆದರೆ, ಸರಕಾರದ ಯೋಜನೆಯಡಿ ಆಯ್ಕೆಯಾಗಿರುವ ಬೆಳೆಗೆ ಇದೀಗ ಸೂಕ್ತ ಬೆಲೆಯೇ ಇಲ್ಲ ಎಂಬುದು ದುರದೃಷ್ಟಕರ ಸಂಗತಿ. ರೈತ ಅರಿಶಿನ ಬಿತ್ತನೆ ಖರೀದಿಸಿ, ಅದನ್ನು ನಾಟಿ ಮಾಡಿಸಿ, ನಂತರ ಉಪಚಾರ ಮಾಡಿ, ಕಟಾವು ಮಾಡುವುದು, ಬೇಯಿಸುವುದು, ಪಾಲಿಶ್ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸುವವರೆಗೆ ಆಗುವ ವೆಚ್ಚ ಕ್ವಿಂಟಾಲ್ವೊಂದಕ್ಕೆ 6 ಸಾವಿರ ರೂ. ಇದೀಗ ಅರಿಶಿನಕ್ಕೆ ಧಾರಣೆಯೇ ಕ್ವಿಂಟಾಲ್ಗೆ 5500ರಿಂದ 5800 ರೂ. ಮಾತ್ರ. ಇದಕ್ಕೆ ಕಾರಣ ಹೊರ ದೇಶಗಳಿಗೆ ಅರಿಶಿನ ರಫ್ತಾಗುತ್ತಿಲ್ಲ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡ ರಫ್ತು ಇನ್ನು ಆರಂಭಗೊಂಡಿಲ್ಲ. ಹೀಗಾಗಿ ಧಾರಣೆ ಮೇಲಕ್ಕೇರುತ್ತಿಲ್ಲ ಎನ್ನುತ್ತಾರೆ ಖರೀದಿದಾರರು. ಹೀಗಿರುವಾಗ ವರ್ಷವಿಡಿ ಬೆಳೆದ ರೈತನ ಕೈಗೆ ಸಿಗುವ ಲಾಭವೇನು? ಲಾಭ ಇರಲಿ ಮಾಡಿದ ಖರ್ಚಿನಲ್ಲೂ ಖೋತಾ ಆಗುತ್ತಿದೆ ಎಂದು ನೊಂದು ನುಡಿಯುತ್ತಾರೆ ರೈತರು. ಹಾಗೆ ನೋಡಿದರೆ ಜಿಲ್ಲೆಯಲ್ಲಿ 8500 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಅರಿಶಿನವನ್ನು ಬೆಳೆಯಲಾಗಿದೆ. ದಶಕದ ಹಿಂದೆ ಇದೇ ಜಿಲ್ಲೆಯಲ್ಲಿ10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯಲಾಗುತ್ತಿತ್ತು. ಆದರೆ, ಉತ್ತಮ ಧಾರಣೆ ಇಲ್ಲ. ಮಾಡಿದ ಖರ್ಚು ಸಿಗುವುದಿಲ್ಲ ಎಂಬ ಕಾರಣಕ್ಕೆ ಅರಿಶಿನ ಬೆಳೆಯಿಂದ ಸಾಕಷ್ಟು ವಿಮುಖರಾಗಿದ್ದಾರೆ. ಸದ್ಯ ಜಿಲ್ಲೆಯ ಎಲ್ಲಭಾಗದಲ್ಲೂ ಅರಿಶಿನ ಕಟಾವು ಕಾರ್ಯ ನಡೆದಿದೆ. ಇನ್ನು ಕೆಲ ಕಡೆ ಕಟಾವು ಮುಗಿದು ಅರಿಶಿನವನ್ನು ಬೇಯಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂಥ ವೇಳೆಯಲ್ಲಿ ರೈತರ ಮುಖದಲ್ಲಿ ಖುಷಿ ಇರಬೇಕು. ಬೆಳೆಯನ್ನು ಮಾರಾಟ ಮಾಡಿ ಕೈ ತುಂಬ ಹಣ ಕಾಣಬಹುದೆಂಬ ಹರ್ಷ ಇರಬೇಕು. ಆದರೆ, ಆ ಜಾಗದಲ್ಲಿ ಬೇಸರವೇ ಮನೆ ಮಾಡಿದೆ. ಎಪಿಎಂಸಿಯಲ್ಲಿ ಖರೀದಿ ಇಲ್ಲ: ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡ ಅರಿಶಿನ ಖರೀದಿ ಇನ್ನು ಚಾಮರಾಜನಗರದ ಎಪಿಎಂಸಿಯಲ್ಲಿ ಪ್ರಾರಂಭವಾಗಿಲ್ಲ. ಚಾಮರಾಜನಗರದ ಎಪಿಎಂಸಿಯಲ್ಲಿ ಖರೀದಿ ಕೇಂದ್ರ ತೆರೆದು ಉತ್ತಮ ಬೆಲೆ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೀಗ ಕೊರೊನಾ ಸಂದರ್ಭದಲ್ಲಿ ಮುಚ್ಚಿದ ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ರೈತರ ತೋಟದ ಬಳಿಗೆ ಖರೀದಿದಾರರು ಹೋಗುತ್ತಾರೆ, ರೈತರು ತಮಗಿಷ್ಟ ಬಂದವರಿಗೆ ಮಾರಾಟ ಮಾಡಬಹುದು ಎಂಬ ಹೊಸ ಕೃಷಿ ಕಾಯಿದೆ ಪ್ರಕಾರ ನೋಡುವುದಾದರೆ ಸ್ಪರ್ಧಾತ್ಮಕ ಬೆಲೆ ಇಲ್ಲದ ಕಾರಣ ಖರೀದಿದಾರರು ಹೇಳಿದ ಬೆಲೆಗೆ ರೈತರು ಅರಿಶಿನವನ್ನು ಮಾರಾಟ ಮಾಡಬೇಕಾದ ಅನಿವಾರ್ಯ ಸಂದರ್ಭ ಬಂದೊದಗಿದೆ. ಎಪಿಎಂಸಿ ಖರೀದಿ ಕೇಂದ್ರ ತೆರೆದು ಸ್ಪರ್ಧಾತ್ಮಕ ಬೆಲೆ ನೀಡಿದರೆ, ಹೊರ ಭಾಗದ ಖರೀದಿದಾರರು ಸಹ ಬೆಲೆ ಏರಿಕೆ ಮಾಡುತ್ತಾರೆ. ಹಾಗಾಗಿ ಎಪಿಎಂಸಿ ಖರೀದಿಗೆ ಮುಂದಾಗಬೇಕಿದ್ದು, ಸರಕಾರ ಗಮನಹರಿಸಬೇಕಿದೆ ಎಂಬುದು ರೈತರ ಆಗ್ರಹ. ಒಂದು ಜಿಲ್ಲೆ, ಒಂದು ಉತ್ಪನ್ನಸರಕಾರದ ಒಂದು ಜಿಲ್ಲೆಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಅರಿಶಿನ ಆಯ್ಕೆ ಆಗಿರುವುದೇನೋ ನಿಜ. ಆದರೆ, ಈ ಯೋಜನೆಯಡಿ ಬೆಳೆ ಖರೀದಿಗೆ ಯಾವುದೇ ಉತ್ತೇಜನ ಇಲ್ಲ. ಬದಲಿಗೆ ಅರಿಶಿನ ಸಂಸ್ಕರಣೆ, ಅದರ ಮೌಲ್ಯವರ್ಧನೆ ಅಂಶಗಳ ಬಗ್ಗೆ ತಿಳಿಸಲಾಗಿದೆ. ಅದನ್ನಾದರೂ ಬೇಗ ಆರಂಭಿಸಿದರೆ, ಬೆಳೆಯ ಮೌಲ್ಯವರ್ಧನೆಗೊಂಡರೆ ಆಗಲಾದರೂ ಮಾರುಕಟ್ಟೆಯಲ್ಲಿ ಅರಿಶಿನಕ್ಕೆ ಉತ್ತಮ ಧಾರಣೆ ಸಿಗಬಹುದೇನೋ? ಹಾಗಾಗಿ ಆದಷ್ಟು ಬೇಗ ಸರಕಾರದ ಯೋಜನೆ ಜಾರಿಗೊಳ್ಳಲಿ ಎಂಬುದು ರೈತರ ಆಶಯ.
from India & World News in Kannada | VK Polls https://ift.tt/3cBBfao