ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ: ಕಾಯಿದೆ ಜಾರಿಯತ್ತ ಬಿಜೆಪಿ ಧೃಢ ನಿರ್ಧಾರ

ಶಶಿಧರ ಹೆಗಡೆ ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣವಾಗಿ ಸಂಬಂಧ 1964ರ ಗೋವಧೆ ಪ್ರತಿಬಂಧಕ ಬರಖಾಸ್ತುಗೊಳಿಸಲು ಸರಕಾರ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ 2010ರಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ಸೂಕ್ತ ತಿದ್ದುಪಡಿಯೊಂದಿಗೆ ಮರು ಜೀವ ನೀಡಲು ಯತ್ನಿಸಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗಲೂ(2008-2013) ಈ ಕುರಿತ ಪ್ರಯತ್ನ ನಡೆದಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಗೋಹತ್ಯೆ ನಿಷೇಧಕ್ಕೆ ಕಾಯಿದೆ ಜಾರಿಗೊಳಿಸುವ ಬಿಜೆಪಿಯ ಉತ್ಸಾಹಕ್ಕೆ ಅಂದಿನ ರಾಜ್ಯಪಾಲರೇ ಕಡಿವಾಣ ಹಾಕಿದ್ದರು. ಹಾಗಾಗಿ 1964ರ ಕಾಯಿದೆಯೇ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಈ ಕಾಯಿದೆ ಗೋಸಂರಕ್ಷಣೆಗೆ ಬೇಕಾದಷ್ಟು ಬಲಾಢ್ಯವಾಗಿಲ್ಲ. ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ಈ ಕಾಯಿದೆಯಲ್ಲಿ ಅವಕಾಶ ಇಲ್ಲ ಎನ್ನುವುದು ಬಿಜೆಪಿಯ ವಾದ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ 2010ರ ವಿಧೇಯಕ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ಈ ಪ್ರಸ್ತಾವಕ್ಕೆ ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್‌ ವಿರೋಧಿಸಿದೆ. 'ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾ ವಿಧೇಯಕ-2010' ಅನ್ನು ತನ್ನ ಹಿಂದಿನ ಅವಧಿಯಲ್ಲಿ ಬಿಜೆಪಿ ಸರಕಾರ ಮಂಡಿಸಿತ್ತು. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಈ ವಿಧೇಯಕಕ್ಕೆ ಅಂದಿನ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅಂಕಿತ ಹಾಕಿರಲಿಲ್ಲ. ಬದಲಾಗಿ ರಾಷ್ಟ್ರಪತಿಗೆ ಕಳುಹಿಸಿ ಕೊಟ್ಟಿದ್ದರು. ನಂತರ ವಿಧೇಯಕದಲ್ಲಿ ಕೆಲ ಬದಲಾವಣೆಗೆ (ಎಮ್ಮೆ, ಕೋಣಗಳ ಹತ್ಯೆ ನಿಷೇಧ ಕೈಬಿಡಲು) ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು. ಅದರಂತೆ 2012ರಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲಾಯಿತು. ಆದರೆ, ಅದಕ್ಕೂ ರಾಜ್ಯಪಾಲ ಭಾರದ್ವಾಜ್‌ ಅಂಕಿತ ಹಾಕಿರಲಿಲ್ಲ. ಅದಾದ ಬಳಿಕ ಸಾರ್ವತ್ರಿಕ ಚುನಾವಣೆ ನಡೆದು ಕಾಂಗ್ರೆಸ್‌ ಸರಕಾರ ರಚನೆಯಾಯಿತು. ಬಿಜೆಪಿ ಪಾಸು ಮಾಡಿಕೊಂಡಿದ್ದ ವಿಧೇಯಕ ಹಿಂಪಡೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ 1964ರ ಕಾಯಿದೆ ಮುಂದುವರಿಸುವ ನಿರ್ಧಾರ ಪ್ರಕಟಿಸಿತು. ಇದರಿಂದಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸಬೇಕೆಂಬ ಬಿಜೆಪಿ ಹಾಗೂ ಸಂಘ ಪರಿವಾರದ ಆಶಯ ಈಡೇರಲಿಲ್ಲ. ಈ ಸಂಬಂಧ 2008ರ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಬಳಿಕ 2018ರ ಪ್ರಣಾಳಿಕೆಯಲ್ಲೂಈ ಅಂಶ ಸೇರಿಸಲಾಗಿತ್ತು. 2010ರ ವಿಧೇಯಕದಲ್ಲಿಏನಿತ್ತು?
  • ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸುವುದು 2010ರ ವಿಧೇಯಕದ ಉದ್ದೇಶವಾಗಿತ್ತು. ಈ ಸಂಬಂಧ 1964ರ ಗೋವಧೆ ಪ್ರತಿಬಂಧಕ ಕಾಯಿದೆಗೆ ತಿದ್ದುಪಡಿ ತರಲಾಗಿತ್ತು.
  • ಗೋವಧೆ(ಹಸು, ಕರು, ಎತ್ತು, ಹೋರಿ ಸೇರಿ) ಸಂಪೂರ್ಣ ನಿಷೇಧ.
  • ಜತೆಗೆ ಎಮ್ಮೆ, ಕೋಣಗಳ ಹತ್ಯೆಯೂ ನಿಷೇಧ.
  • 1964ರ ಕಾಯಿದೆ ಅನುಸಾರ ಜಾನುವಾರುಗಳ ಗರಿಷ್ಠ ಅವಧಿ 15 ವರ್ಷ. ಅದರಂತೆ ಹಾಲು ಕೊಡದ, ಉಪಯೋಗಕ್ಕೆ ಬಾರದ ಮುದಿಯಾದ ಗೋವುಗಳ ವಧೆ ಮಾಡುವುದಿದ್ದರೆ ನಿರ್ದಿಷ್ಟ ಪ್ರಾಧಿಕಾರದ ಅನುಮತಿ ಅಗತ್ಯ.
  • ಗೋಹತ್ಯೆ ಮಾಡುವವರು ಹಾಗೂ ಗೋಹತ್ಯೆಗೆ ಪ್ರೇರೇಪಿಸುವವರಿಗೆ 1 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ. ಜತೆಗೆ 25 ಸಾವಿರ ರೂ. ದಿಂದ 50 ಸಾವಿರ ರೂ. ದಂಡ. ಒಮ್ಮೆ ದಂಡ ಶಿಕ್ಷೆಯಾದ ಬಳಿಕ ಪುನಃ ಈ ಕೃತ್ಯವೆಸಗಿದರೆ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶ.
1964ರ ಕಾಯಿದೆಯಲ್ಲೇನಿದೆ?
  • ಗೋವು ಎಂದರೆ ಹಾಲು ಕರೆಯುವ ಅರ್ಥಕ್ಕೆ ಸೀಮಿತ.
  • ಹೋರಿ, ಎತ್ತು, ಎಮ್ಮೆ, ಕೋಣಗಳು ಇದರ ವ್ಯಾಪ್ತಿಗೆ ಬಾರದು.
  • ಹಾಲು ಕರೆಯುವ ಹಸುವನ್ನು 12 ವರ್ಷದ ವರೆಗೆ ಹತ್ಯೆ ಮಾಡುವಂತಿಲ್ಲ.
  • ಗೋವಧೆ ಪ್ರಕರಣದಲ್ಲಿ ವಿಧಿಸುವ ದಂಡ ಅತ್ಯಲ್ಪ.
ರಾಜ್ಯಪಾಲರ ಆಕ್ಷೇಪವೇನಿತ್ತು? 2010ರಲ್ಲಿ ವಿಧೇಯಕ ಪಾಸು ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಾಗ ಅಂದಿನ ರಾಜ್ಯಪಾಲ ಭಾರದ್ವಾಜ್‌ ಕಿಡಿಕಿಡಿಯಾಗಿದ್ದರು. ''ಐ ಆ್ಯಮ್‌ ಎ ಬ್ರಾಹ್ಮಿನ್‌. ಈ ನೋ ಹೌ ಟು ಪ್ರೊಟೆಕ್ಟ್ ಕೌ,'' ಎಂದಿದ್ದರು. ನಂತರ ಈ ವಿಧೇಯಕವನ್ನು ರಾಷ್ಟ್ರಪತಿ ಅಂಗಳಕ್ಕೆ ಕಳುಹಿಸಿದ್ದರು. ಆಗ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಈ ವಿಧೇಯಕದ ವಿಚಾರದಲ್ಲಿ ಸ್ಪಷ್ಟೀಕರಣ ಬಯಸಿತು. ನಂತರ 2010ರ ವಿಧೇಯಕದಲ್ಲಿದ್ದ ಎಮ್ಮೆ, ಕೋಣ ಪದಗಳನ್ನು ಕೈಬಿಟ್ಟ ಅಂದಿನ ಬಿಜೆಪಿ ಸರಕಾರ 2012ರ ಡಿಸೆಂಬರ್‌ನಲ್ಲಿ ಪುನಃ ಈ ಸಂಬಂಧ ತಿದ್ದುಪಡಿ ವಿಧೇಯಕ ಮಂಡಿಸಿತು. ಇದನ್ನು ಕೂಡ ಆಗಿನ ರಾಜ್ಯಪಾಲ ಭಾರಧ್ವಾಜ್‌ ರಾಷ್ಟ್ರಪತಿ ಭವನಕ್ಕೆ ದಾಟಿಸಿದ್ದರು. ಹಳೆ ಕಾಯಿದೆಯೇ ಜಾರಿಯಲ್ಲಿ ಸದ್ಯಕ್ಕೆ ರಾಜ್ಯದಲ್ಲಿ 1964ರ ಕಾಯಿದೆಯೇ ಜಾರಿಯಲ್ಲಿದೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಬಂದ ಬಳಿಕ ಹಿಂದಿನ ಬಿಜೆಪಿ ಸರಕಾರದ ವಿಧೇಯಕ ವಾಪಸ್‌ ಪಡೆಯಲಾಯಿತು. 1964ರ ಕಾಯಿದೆ ಮುಂದುವರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದನ್ನು ವಿರೋಧಿಸಿದ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟಿಸಿದ್ದರು. ಉತ್ತರ ಪ್ರದೇಶ ಮಾದರಿ ಉತ್ತರ ಪ್ರದೇಶದಲ್ಲಿ ತಂದಿರುವ ವಿಧೇಯಕ 2010ರಲ್ಲಿ ಕರ್ನಾಟಕದ ಬಿಜೆಪಿ ಸರಕಾರ ತಂದಿರುವ ಬಹುತೇಕ ಅಂಶ ಉಳಿಸಿಕೊಂಡಿದೆ. ಹಾಲು ಕರೆಯುವ ಎಮ್ಮೆಯ ಹತ್ಯೆ ನಿಷೇಧ(12 ವರ್ಷದವರೆಗೆ) ಎಂಬ ಅಂಶ ಉತ್ತರ ಪ್ರದೇಶದ ಕಾಯಿದೆಯಲ್ಲಿಅಡಕವಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಮಂಡಿಸಲಾಗುವುದು. ಅದರ ಸ್ವರೂಪದ ಬಗ್ಗೆ ಅಧ್ಯಯನ ಕೈಗೊಳ್ಳಲಾಗುತ್ತಿದೆ. ಪ್ರಭು ಚೌಹಾಣ್‌, ಪಶು ಸಂಗೋಪನಾ ಸಚಿವ ಯೋಗಿ ಜತೆ ಚವ್ಹಾಣ್‌ ಚರ್ಚೆ ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗಿದ್ದು, ಕರ್ನಾಟಕದಲ್ಲಿಯೂ ಇದರ ಜಾರಿಗೆ ಉದ್ದೇಶಿಸಿರುವುದಕ್ಕೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಉತ್ತರಪ್ರದೇಶದಲ್ಲಿ ಸಿಎಂ ಆದಿತ್ಯನಾಥ ಅವರನ್ನು ಭೇಟಿ ಮಾಡಿ ಗೋಹತ್ಯೆ ನಿಷೇಧ ಕುರಿತು ಸುದೀರ್ಘವಾಗಿ ಸಮಾಲೋಚಿಸಿದರು. ಗೋಹತ್ಯೆ ಕಾಯಿದೆ ಉತ್ತರಪ್ರದೇಶದಲ್ಲಿ ಅನುಷ್ಠಾನವಾದ ರೀತಿಯ ಬಗ್ಗೆ ಚವ್ಹಾಣ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗೋಶಾಲೆ ನಿರ್ವಹಣೆ ಮತ್ತು ಗೋವುಗಳ ಆರೈಕೆಯ ಬಗ್ಗೆಯೂ ಮಾಹಿತಿ ಪಡೆದರು.


from India & World News in Kannada | VK Polls https://ift.tt/33DSC52

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...