ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದ ಶಾಸನ ವಿರುದ್ಧ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಡಿಯಲ್ಲಿ ಸೂಕ್ತ ಕ್ರಮ ಜರಗಲಿದೆ ಎಂಬ ನಿರೀಕ್ಷೆಇತ್ತು. ಆದರೆ ಅದು ಹುಸಿಯಾಗಿದೆ. ಹೇಳಿಕೆ ನೀಡಿ ಆರು ದಿನ ಕಳೆದರೂ ಕ್ರಮ ಬಿಡಿ ಕನಿಷ್ಠ ನೋಟಿಸ್ ಕೂಡಾ ಜಾರಿಯಾಗಿಲ್ಲ. ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಉಳಿಯೋದಿಲ್ಲ ಎಂದು ಸೋಮವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು. ಅಷ್ಟೇ ಯಾಕೆ, ಬಿಎಸ್ವೈ ವಿರುದ್ಧ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂದಿದ್ದರು. ಜೊತೆಗೆ ಮುಂದಿನ ಸಿಎಂ ಉತ್ತರ ಕರ್ನಾಟಕ ಭಾಗದವರೇ ಎಂದು ಭವಿಷ್ಯ ನುಡಿದಿದ್ದರು. ಶಾಸಕ ಯತ್ನಾಳ್ ಈ ಹೇಳಿಕೆ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟುಮಾಡಿತ್ತು. ಹೇಳಿಕೆಯಿಂದ ಕೆಂಡಾಮಂಡಲಾಗಿದ್ದ ಬಿಎಸ್ವೈ ಆಪ್ತರು ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ಆಗ್ರಹ ಮಾಡಿದ್ದರು.ಎಂಪಿ ರೇಣುಕಾಚಾರ್ಯ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿ, ಬಸನಗೌಡ ಪಾಟೀಲ್ ವಿರುದ್ಧ ಕ್ರಮ ಖಂಡಿತಾ ಇದರಲ್ಲಿ ಯಾವುದೇ ಅನುಮಾನ ಬೇಡಾ ಎಂದಿದ್ದರು. ಜೊತೆಗೆ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕೂಡಾ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಿಎಂ ಬಿಎಸ್ವೈ ವಿರುದ್ಧ ಇಂತಹ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ನೋಟಿಸ್ ನೀಡದೆ ಕೂಡಲೇ ಕ್ರಮ ಜರಗಿಸಬೇಕು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಅವರು ಆಗ್ರಹಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧಿಕೃತ ಟ್ವೀಟ್ ಮಾಡುವ ಮೂಲಕ ಉಳಿದ ಮೂರು ವರ್ಷಗಳ ಅವಧಿಯಲ್ಲಿ ಬಿಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿ ಇರುತ್ತಾರೆ. ಹಾಗೂ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಆದರೆ ಸದ್ಯ ಎಲ್ಲವೂ ತಣ್ಣಗಾಗಿದೆ. ಯಾವುದೇ ನೋಟಿಸ್ ಜಾರಿಯಾಗಿಲ್ಲ, ಯಾರ ವಿರುದ್ಧ ಕ್ರಮವೂ ಜರಗಿಲ್ಲ. ಹೇಳಿಕೆ ನೀಡಿರುವ ಯತ್ನಾಳ್ ಕೂಡಾ ಸುಮ್ಮನಾಗಿದ್ದಾರೆ. ಕ್ರಮ ಜರಗಲೇ ಬೇಕು ಎಂದು ಆಗ್ರಹಿಸಿದ್ದ ಬಿಎಸ್ವೈ ಆಪ್ತರು ತೆಪ್ಪಗಿದ್ದಾರೆ. ಆದರೆ ಇದಕ್ಕೆಲ್ಲಾ ಕಾರಣ ಏನು ಎಂಬುವುದು ಮಾತ್ರ ಸದ್ಯಕ್ಕೆ ಕಾಡುವ ಕುತೂಹಲ. ಶಿಸ್ತಿನ ಪಕ್ಷ ಎಂದು ಕರೆಯಲ್ಪಡುವ ಬಿಜೆಪಿಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರಗುತ್ತಾ ಎಂಬುವುದು ಸದ್ಯದ ಪ್ರಶ್ನೆ.
from India & World News in Kannada | VK Polls https://ift.tt/3jou70V