ತೇಜಶ್ರೀ.ಶೆಟ್ಟಿ. ಬೇಳ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಅನಾದಿ ಕಾಲದಿಂದಲೂ ಹೆಣ್ಣಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲವಾದರೂ ಗೌರವ ನೀಡುತ್ತಾ ಬಂದ ದೇಶ ನಮ್ಮದು. ಆದರೆ ಇಂದು ಒಂದು ಕಡೆ ಹೆಣ್ಣಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷ ಸಮಾನ ಸ್ವಾತಂತ್ರ್ಯ ಸ್ವಲ್ಪ ಮಟ್ಟಿಗಾದರೂ ಸಿಗುತ್ತಾ ಬಂದರೆ ಇನ್ನೊಂದೆಡೆ ಆಕೆಗೆ ರಕ್ಷಣೆಯೇ ಇಲ್ಲದಂತಾಗಿದೆ. 'ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾಃ' ಎಂಬ ಮಾತಿದೆ. ಆದರೆ ಇಂದು ಮಮತಾಮಯಿಯಾದ ಆಕೆಯೇ ಮಮತೆಯನ್ನು ಅರಸುವಂತಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೆಣ್ಣಿನ ಬದುಕು ಕಟ್ಟಿ ಹಾಕಲ್ಪಟ್ಟಿತ್ತು. , ಸತಿಪದ್ಧತಿಗಳಂತಹ ಆಚಾರಗಳಿಗೆ ಆಕೆ ಬಲಿಪಶುವಾಗುತ್ತಿದ್ದಳು. ಮನೆಯಿಂದ ಹೊರಗಿಳಿದು ಕೆಲಸಕ್ಕೆ ಹೋಗುವ ಅವಕಾಶವನ್ನೇ ಪುರುಷ ಪ್ರಧಾನ ಸಮಾಜ ಆಕೆಯಿಂದ ಕಿತ್ತುಕೊಂಡಿತ್ತು. ಸ್ವಾತಂತ್ರ್ಯಾ ನಂತರ ಸಾಮಾಜಿಕ ಪಿಡುಗುಗಳು ಕೊನೆಗೊಂಡು ಹೆಣ್ಣಿಗೂ ಸ್ವಾತಂತ್ರ್ಯ ಲಭಿಸಲಾರಂಭವಾಯಿತು. ಆದರೇನಂತೆ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿಗೆ ಹೆದರಿ ಹೆರಲು ಭಯಪಡುವ ಕಾಲವಿತ್ತು. ಅದೇ ಈಗ ಆಕೆಯ ರಕ್ಷಣೆಯ ಕುರಿತು ಹೆದರಿ ಹೆಣ್ಣು ಹೆರಲು ಭಯಪಡುವ ಕಾಲ ಒದಗಿ ಬಂದಿದೆ. ದಿನೇ ದಿನೇ ಹೆಣ್ಣಿನ ಮೇಲಿನ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಅತ್ಯಾಚಾರದಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಲ್ಲದೆ ಕಡಿಮೆಯಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಿದ ಹೆತ್ತವರು ಅವರು ಮರಳಿ ಮನೆಗೆ ತಲುಪುವವರೆಗೂ ದಾರಿ ನೋಡುವಂತಾಗಿದೆ. ದೊಡ್ಡವರಿಂದ ಹಿಡಿದು ಎಳೆ ಕಂದಮ್ಮನ ಮೇಲೆಯೂ ಅತ್ಯಾಚಾರದಂತಹ ಕೃತ್ಯಗಳು ನಡೆಯುತ್ತಿವೆ. ಇಂತಹ ಪಾಶವೀ ಕೃತ್ಯಗಳನ್ನು ನಡೆಸಿದ ಆರೋಪಿಗಳು ಸುಲಭವಾಗಿ ತಲೆಮರೆಸಿಕೊಳ್ಳುತ್ತಿದ್ದಾರೆ ಎನ್ನುವುದು ಆತಂಕಕರ ವಿಚಾರ. ಎಷ್ಟೋ ಕುಟುಂಬಗಳು ಇಂದಿಗೂ ನ್ಯಾಯ ಸಿಗದೆ ಕೋರ್ಟಿನ ಮೆಟ್ಟಿಲೇರುತ್ತಿವೆ .ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ ಇನ್ನು ಕೆಲವು ತೆರೆಯ ಮರೆಯಲ್ಲಿಯೇ ಕಣ್ಮರೆಯಾಗಿವೆ. ಎಲ್ಲರಿಗೂ ಗೊತ್ತಾಗಿಬಿಡುತ್ತದೆ ಎಂದು ಹೆದರಿ ಅದೆಷ್ಟೋ ಹೆಣ್ಣು ಮಕ್ಕಳು ತಾವು ಅನುಭವಿಸಿದ ದೌರ್ಜನ್ಯವನ್ನು ಹೊರ ಜಗತ್ತಿಗೆ ಹೇಳದೆ ಸುಮ್ಮನಿದ್ದಾರೆ. ಅತ್ಯಾಚಾರದಂತಹ ಕೃತ್ಯಗಳು ಒಂದೆಡೆಯಾದರೆ ಪ್ರೀತಿ, ಪ್ರೇಮವನ್ನು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಹೆಣ್ಮಕ್ಕಳ ಮುಖಕ್ಕೆ ಆ್ಯಸಿಡ್ ಎರಚಿ ಆಕೆಯನ್ನು ಕುರೂಪಿಯನ್ನಾಗಿಸುವ ಘಟನೆಗಳು ಕೂಡಾ ಹೆಚ್ಚುತ್ತಿವೆ. ಈ ಕೃತ್ಯದಿಂದಾಗಿ ನೊಂದ ಹೆಣ್ಣು ಮಕ್ಕಳು ಮನೆಯಿಂದ ಹೊರಬರದೆ ನಾಲ್ಕು ಗೋಡೆಯೊಳಗಡೆಯೇ ತಮ್ಮನ್ನು ಬಂಧಿಗಳನ್ನಾಗಿಸಿದ್ದಾರೆ .ಹೀನ ಕೃತ್ಯವನ್ನೆಸಗಿದ ಆರೋಪಿಗಳು ಯಾವುದೇ ಮುಲಾಜಿಲ್ಲದೆ ಹೊರಗಡೆ ಓಡಾಡುವಾಗ ಯಾವುದೇ ತಪ್ಪು ಮಾಡದ ಹೆಣ್ಣು ಮಕ್ಕಳೇಕೆ ಮನೆಯಲ್ಲಿ ಅವಿತುಕೊಳ್ಳಬೇಕು? ಪೌರಾಣಿಕ ಕಥೆಗಳಲ್ಲಿ ಬರುವ ದುರುಳ ರಕ್ಕಸರು ಕೂಡ ಇಂತಹಾ ಕೃತ್ಯವನ್ನೆಸಗುತ್ತಿರಲಿಲ್ಲ. ಇಂದು ಮನುಷ್ಯನು ರಾಕ್ಷಸನಿಗಿಂತಲೂ ಕಡೆಯಾಗಿ ಪರಿವರ್ತನೆಗೊಂಡಿದ್ದಾನೆ. ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಘಟನೆಯೇ ಇರಬಹುದು, ಅಥವಾ ಹಿಂದಿನ ನಿರ್ಭಯಾ, ಪ್ರಿಯಾಂಕಾ ರೆಡ್ಡಿ, ಸೌಮ್ಯಾ ಭಟ್ ಮೊದಲಾದ ಹಲವಾರು ಅತ್ಯಾಚಾರ ಪ್ರಕರಣಗಳು ನಮ್ಮ ಮುಂದಿವೆ. ಆದರೆ ಇಲ್ಲಿ ಎಷ್ಟು ಜನರಿಗೆ ನ್ಯಾಯ ಲಭಿಸಿದೆ ಎಂಬುದು ಚಿಂತಿಸಬೇಕಾದ ವಿಷಯವಾಗಿದೆ. ಆರೋಪಿಗಳಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಎಷ್ಟೋ ಜನರು ವಾದಿಸುತ್ತಾರೆ. ಕ್ಯಾಂಡಲ್ ಉರಿಸಿ ಪ್ರತಿಭಟಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯ ಬೇಕು ಎಂಬುದಾಗಿ ಸ್ಟೇಟಸ್ ಹಾಕುತ್ತಾರೆ.ಆದರೆ ಇದರಿಂದೇನು ಪ್ರಯೋಜನ? ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತಹ ಕಾನೂನು ಜಾರಿಯಾಗಬೇಕು.ಈ ಕಾನೂನಿನಿಂದಲೇ ಮುಂದೆ ಇಂತಹ ಕೃತ್ಯವೆಸಗುವವರು ಭಯಪಡುವಂತಾಗಬೇಕು. ಪರಿವರ್ತನೆಯು ಮನೆ ಮನೆಯಲ್ಲೂ ನಡೆಯಬೇಕು. ಗಂಡು ಮಕ್ಕಳ ಪಾಲಿಗೆ ತಾಯಂದಿರೇ ಮಾರ್ಗದರ್ಶಕರಾಗಬೇಕು. ಹೆಣ್ಣಿಗೆ ಚಿಕ್ಕಂದಿನಿಂದಲೂ ಹೇಗೆ ಸಂಸ್ಕಾರ,ಸಂಪ್ರದಾಯ ಹೇಳಿಕೊಟ್ಟು ಆಕೆಯನ್ನು ಬೆಳೆಸುತ್ತಾರೋ ಅದೇ ರೀತಿ ಗಂಡು ಮಕ್ಕಳನ್ನೂ ಬೆಳೆಸಬೇಕು. ತಮ್ಮ ಸ್ವಂತ ಸಹೋದರಿಯನ್ನು ಮುದ್ದಿನಿಂದ ನೋಡಿಕೊಳ್ಳುವ ಸೋದರರೇಕೆ ದಾರಿಯಲ್ಲಿ ಹೋಗುವ ಹೆಣ್ಣನ್ನು ಚುಡಾಯಿಸುವರು? ಆಕೆಯೂ ಒಬ್ಬ ಅಣ್ಣನ ಮುದ್ದಿನ ತಂಗಿಯಲ್ಲವೇ? ಎಂಬುದನ್ನು ಯೋಚಿಸುವಂತಾಗಬೇಕು. ಇಂದು ದಾರಿಯಲ್ಲಿ ಹೋಗುವ ಹೆಣ್ಣನ್ನು ನಾವು ಅಗೌರವದಿಂದ ಕಂಡರೆ ನಾಳೆ ನಮ್ಮ ಸಹೋದರಿಗೂ ಅದೇ ಸ್ಥಿತಿ ಬರಬಹುದು ಎಂಬುದನ್ನು ಪ್ರತಿಯೊಬ್ಬ ಪುರುಷನೂ ಅರಿಯುವಂತಾಗಬೇಕು. ದೇಶವನ್ನು ಹೆಣ್ಣಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಇಂತಹ ಸಂಸ್ಕಾರಯುತ ದೇಶದಲ್ಲಿ ಇನ್ನಾದರೂ ಹೆಣ್ಣಿಗೆ ರಕ್ಷಣೆ ಸಿಗುವುದೇ? ಯಾವುದೇ ಭಯವಿಲ್ಲದೆ ಹೆಣ್ಣೊಬ್ಬಳು ಹೊರಗಡೆ ನಡೆದಾಡುವ ದಿನಗಳು ಬರಬಹುದೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
from India & World News in Kannada | VK Polls https://ift.tt/36xfKEz