ವಿನಯ್ ಕೂಡುರಸ್ತೆ (ಸಕಲೇಶಪುರ ತಾ.) ಹಾಸನ: ವ್ಯಾಪಕ ಮಳೆಯಿಂದಾಗಿ ಸಕಲೇಶಪುರ ತಾಲೂಕು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯ ಹೆತ್ತೂರು, ವಣಗೂರು ಮತ್ತಿತರ ಗ್ರಾಮಗಳ ಜನ ಆತಂಕದಲ್ಲಿದ್ದಾರೆ. ವರುಣನ ಅಬ್ಬರ ರೈತರನ್ನು ಕಂಗೆಡಿಸಿದ್ದು, ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದೆ. ಲಕ್ಷಾಂತರ ರೂ. ನಷ್ಟ ಅನುಭವಿಸಿರುವ ರೈತರು, ಕಾಫಿ ಏಲಕ್ಕಿ ಬೆಳೆಗಾರರು ಸರಕಾರದ ಬೆಳೆ ಪರಿಹಾರ ನಿರೀಕ್ಷೆಯಲ್ಲಿದ್ದಾರೆ. ಇನ್ನು ಯಾವುದೇ ಪರಿಹಾರ ರೈತರಿಗೆ ತಲುಪಿಲ್ಲ. ಸಕಲೇಶಪುರ ತಾಲೂಕಿನ ಹೆತ್ತೂರು ಭಾಗದ ಕೆಲ ಬೆಳಗಾರರಿಗೆ ಅಲ್ಪ ಬೆಳೆ ಪರಿಹಾರ ಹಣ ಬಂದಿದ್ದು, ಶೇ.90ರಷ್ಟು ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ. ಅಧಿಕಾರಿಗಳು ಹಾಗೂ ಬೆಳೆಗಾರರ ಸಂಘದ ಪದಾಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಕಾಫಿ, ಶುಂಠಿ ಏಲಕ್ಕಿ ಬೆಳೆ ನಷ್ಟಸತತವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಏಲಕ್ಕಿ, ಕಾಫಿ, ಶುಂಠಿ, ಕಾಳುಮೆಣಸು ನೀರು ಪಾಲಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ. ಕಾಫಿಗೆ ಕೊಳೆರೋಗ, ಏಲಕ್ಕಿಗೆ ಕಾಂಡ ರೋಗ ಭೀತಿ ಉಂಟಾಗಿದೆ. ಮೊದಲೇ ಕಾಡುಪ್ರಾಣಿ ಹಾವಳಿಯಿಂದ ಹಾಗೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಇರುವುದರಿಂದ ಬೆಳೆ ನಷ್ಟದ ಜತೆಗೆ ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕಾರ್ಮಿಕರಿಗೆ ಕೆಲಸವಿಲ್ಲ ಸಕಲೇಶಪುರ ಭಾಗದಲ್ಲಿ ಬಹುತೇಕ ಸಣ್ಣ ಹಿಡುವಳಿದಾರರು ಇದ್ದಾರೆ. ಪ್ರಕೃತಿ ವಿಕೋಪ ಸತತ ಮಳೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಇದರಿಂದ ತೋಟದಲ್ಲಿ ಕಾರ್ಮಿಕರಿಗೆ ಹಣ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟದ ಮಾಲೀಕರನ್ನೇ ನಂಬಿರುವ ಸಾವಿರಾರು ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸೋದ್ಯಮಕ್ಕೂ ಪೆಟ್ಟುಲಾಕ್ಡೌನ್ ಬಳಿಕ ಪ್ರವಾಸೋದ್ಯಮ ಚೇತರಿಕೆ ಹಾದಿಯಲ್ಲಿತ್ತು. ಆದರೆ ಈಗ ಭಾರಿ ಮಳೆಯಿಂದ ಪ್ರವಾಸಿಗರು ಮಲೆನಾಡಿಗೆ ಪ್ರವಾಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಕಲೇಶಪುರ ಭಾಗದ ಪ್ರಮುಖ ಪ್ರವಾಸಿ ತಾಣಗಳಾದ ಬಿಸಿಲೆ, ಮೂಕನಮನೆ ಜಲಪಾತ, ಹೊಸಳ್ಳಿ ಬೆಟ್ಟ, ಗವಿಬೆಟ್ಟ, ಪಟ್ಲಬೆಟ್ಟ, ಅಭಿ ಫಾಲ್ಸ್, ಕಾಡುಮನೆ ಟೀ ಎಸ್ಟೇಟ್, ಮಂಜರಾಬಾದ್ ಕೋಟೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಇಲ್ಲಿನ ನೂರಾರು ಹೋಂಸ್ಟೇ, ರೆಸಾರ್ಟ್, ಹೋಟೆಲ್ ಉದ್ಯಮ ಮತ್ತೆ ಸಂಕಷ್ಟ ಎದುರಾಗಿದ್ದು, ಸತತ ಮಳೆ ನಷ್ಟಕ್ಕೆ ಕಾರಣವಾಗಿದೆ. ಮಲೆನಾಡಿನಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ರೈತರ ಬದುಕು ಶೋಚನೀಯವಾಗಿದೆ. ಸರಕಾರ ಸೂಕ್ತ ಮಳೆಹಾನಿ ಪ್ಯಾಕೇಜ್ ಘೋಷಿಸಬೇಕು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಗಮನ ಸೆಳೆಯಬೇಕು. ಆನಂದ್ ಗ್ರಾಮ ಪಂಚಾಯಿತಿ ಅಧ್ಯಕ್ಷ, ವನಗೂರು
from India & World News in Kannada | VK Polls https://ift.tt/34oUS0G