ವಿಶ್ವ ಪರಿಸರ ದಿನ: ಭರವಸೆ ತರುವ ಹಸಿರು ವರ್ತಮಾನ, ಒಂದಷ್ಟು ಪಾಸಿಟಿವ್‌ ಸುದ್ದಿಗಳು

ಪರಿಸರ ದಿನ ಎಂದರೆ ಎಷ್ಟು ಜೀವಪ್ರಭೇದಗಳು ಅಳಿದವು, ಭೂಮಿಯ ತಾಪಮಾನ ಎಷ್ಟು ಹೆಚ್ಚಾಗಿದೆ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ನಮ್ಮ ಸುತ್ತಮುತ್ತಲೂ ಇರಬಹುದಾದ ಪರಿಸರ ಸಂಬಂಧಿ ಶುಭ ಸುದ್ದಿಗಳನ್ನು ನಾವು ಮರೆತೇಬಿಡುತ್ತೇವೆ. ಅಂಥ ಒಂದಷ್ಟು ಪಾಸಿಟಿವ್‌ ಸುದ್ದಿಗಳು ಇಲ್ಲಿವೆ.ಪರಿಸರಕ್ಕಾಗಿ ಸಮಯ2020ರ ವಿಶ್ವ ಪರಿಸರ ದಿನದ ಆಶಯ, 'ಸೆಲೆಬ್ರೇಟ್‌ ಬಯೋಡೈವರ್ಸಿಟಿ' ಅಥವಾ 'ಜೀವವೈವಿಧ್ಯವನ್ನು ಸಂಭ್ರಮಿಸೋಣ.' ಪರಿಸರ ಸಂರಕ್ಷಣೆ, ಜೀವವೈವಿಧ್ಯದ ಸಂರಕ್ಷಣೆಯ ಆಶಯದ ಬಗ್ಗೆ ಜನಮನದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವುದಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಆಶಯದ ತಿರುಳು. 1972ರಷ್ಟು ಹಿಂದಿನಿಂದಲೇ ವಿಶ್ವ ಸಂಸ್ಥೆಯ ವತಿಯಿಂದ ಈ ದಿನವನ್ನು ಆಚರಿಸಲಾಗುತ್ತಾ ಇದೆ. ಕಳೆದ ವರ್ಷದ ಆಶಯ 'ವಾಯುಮಾಲಿನ್ಯ' ಆಗಿತ್ತು. ಈ ವರ್ಷದ ಆತಿಥೇಯ ರಾಷ್ಟ್ರಗಳು ಕೊಲಂಬಿಯಾ ಮತ್ತು ಜರ್ಮನಿ. ಕೋವಿಡ್‌ ಕಾರಣದಿಂದ ಜನ ಸೇರುವ ಸಂಭ್ರಮಾಚರಣೆಗಳನ್ನು ರದ್ದುಪಡಿಸಲಾಗಿದೆ. ಆದರೆ ಆನ್‌ಲೈನ್‌ ಕಾರ್ಯಕ್ರಮಗಳು ನಡೆಯಲಿವೆ.ಸಾವಯವ ಬ್ರಾಂಡ್‌ಗಳಿಗೆ ಬೇಡಿಕೆಕಳೆದೆರಡು ವರ್ಷಗಳಿಂದ ಸಾವಯವ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದೆ. ಕ್ರಿಮಿನಾಶಕ ಬಳಸದ, ರಾಸಾಯನಿಕ ಗೊಬ್ಬರ ಉಪಯೋಗಿಸದ ಹಣ್ಣು, ತರಕಾರಿ, ಆಹಾರ ಧಾನ್ಯಗಳನ್ನು ಹೆಚ್ಚಿನ ಜನ ಅಪೇಕ್ಷಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ, ಆನ್‌ಲೈನ್‌ ಮಾರಾಟ ಮಳಿಗೆಗಳಲ್ಲಿ ಕೂಡ ಸಾವಯವ ಆಹಾರ ಪದಾರ್ಥಗಳ ಬೇಡಿಕೆ ದುಪ್ಪಟ್ಟಾಗಿದೆ ಎಂದು ಆನ್‌ಲೈನ್‌ ಮಾರಾಟ ಸಂಸ್ಥೆಗಳು ತಿಳಿಸಿವೆ. ಆರೋಗ್ಯ ಕುರಿತು ಹೆಚ್ಚಿದ ಕಾಳಜಿ ಹಾಗೂ ಸೋಂಕಿನ ಬಗ್ಗೆ ಇರುವ ಭೀತಿ ಇದಕ್ಕೆ ಕಾರಣ ಇರಬಹುದು. ಬೆಂಗಳೂರಿನಂಥ ನಗರಗಳಲ್ಲಿ ಸಾವಯವ ಆಹಾರ ಪದಾರ್ಥಗಳ ಮಳಿಗೆಗಳು ಹೆಚ್ಚುತ್ತಿವೆ. ಇವು ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿವೆ; ಅಥವಾ ರೈತರೇ ಮಳಿಗೆ ನಡೆಸುತ್ತಿದ್ದಾರೆ.

ಕೊರೊನಾ ವೈರಸ್‌ ಹರಡುವಿಕೆಯಿಂದ ಆದ ಒಂದು ಪರಿಣಾಮವೆಂದರೆ, ಚೀನಾ, ಹಾಂಕಾಂಗ್‌, ಸಿಂಗಾಪುರ, ಥಾಯ್ಲೆಂಡ್‌ ಮುಂತಾದ ಕಡೆ ಕಾರ್ಯಾಚರಿಸುತ್ತಿದ್ದ ವೆಟ್‌ ಮಾರ್ಕೆಟ್‌ಗಳು ಬಂದ್‌ ಆಗಿರುವುದು. ಇಲ್ಲಿ ಸಾಮಾನ್ಯ ಮಾಂಸಾಹಾರಿಗಳು ಸೇವಿಸದ ಕೆಲವು ಪ್ರಾಣಿಗಳ ಮಾಂಸವೂ ಮಾರಾಟವಾಗುತ್ತದೆ. ವುಹಾನ್‌ನ ಇಂಥ ಮಾರುಕಟ್ಟೆಯಿಂದಲೇ ವೈರಾಣು ಹುಟ್ಟಿ ಹರಡಿದ್ದು. ಇವು ವೈರಾಣು ಸೃಷ್ಟಿಗೆ ಹುಲುಸಾದ ನೆಲ. ಇವುಗಳು ಬಂದ್‌ ಆಗಿರುವುದರಿಂದ, ವನ್ಯಜೀವಿಗಳ ಬೇಟೆಯೂ ತಹಬಂದಿಗೆ ಬಂದಿತ್ತು. ಇಲ್ಲಿಗೆ ಭಾರತ, ಬಾಂಗ್ಲಾ ಮುಂತಾದ ದೇಶಗಳಿಂದಲೂ ಹಲವು ಬಗೆಯ ಮಾಂಸ ರಫ್ತಾಗುತ್ತದೆ. ಸದ್ಯ ಇವುಗಳನ್ನು ತೆರೆಯಲಾಗುತ್ತಿದೆ; ಆದರೆ ಮಾರುಕಟ್ಟೆಯ ಬಿಗಿ ಸ್ವಚ್ಛತೆ, ಮಾಂಸ ಮಾರಾಟಕ್ಕೆ ಕಠಿಣ ಶರತ್ತು, ಅನುಮತಿ ಪಡೆದ- ಕಳ್ಳಬೇಟೆಯಲ್ಲದ ಪ್ರಾಣಿಗಳ ಮಾಂಸ ಮಾತ್ರ ಮಾರಾಟ ಇತ್ಯಾದಿ ನಿಯಮಗಳನ್ನು ವಿಧಿಸಲಾಗಿದೆ.

ಲಾಕ್‌ಡೌನ್‌ಗೆ ಮುನ್ನ ಇದ್ದ ಪರಿಸ್ಥಿತಿಗೆ ಹೋಲಿಸಿದರೆ, ಬೃಹತ್‌ ಕೈಗಾರಿಕೆಗಳ ಮುಚ್ಚಗಡೆಯಿಂದಾಗಿ ವಾತಾವರಣದಲ್ಲಿಕಾರ್ಬನ್‌ ಡಯಾಕ್ಸೈಡ್‌, ಕಾರ್ಬನ್‌ ಮೋನಾಕ್ಸೈಡ್‌ಗಳ ಪ್ರಮಾಣ ಇಳಿದಿದೆ. ಇಂಗಾಲದ ಡಯಾಕ್ಸೈಡ್‌ ಕಳೆದ ನಾಲ್ಕು ತಿಂಗಳಲ್ಲಿಶೇ.17ರಷ್ಟು ಇಳಿದಿದೆ ಎಂದು ಈಸ್ಟ್‌ ಆಂಗ್ಲಿಯಾ ಯೂನಿವರ್ಸಿಟಿಯ ಅಧ್ಯಯನ ತಿಳಿಸಿದೆ. ನಾಲ್ಕು ತಿಂಗಳ ಹಿಂದಿನ ಮತ್ತು ಈಗಿನ ಯುರೋಪ್‌ನ ಸ್ಯಾಟ್‌ಲೈಟ್‌ ಇಮೇಜ್‌ಗಳನ್ನು ಹೋಲಿಸಿ ನೋಡಿದಾಗ, ಓಜೋನ್‌ ಪದರದ ಛಿದ್ರಗಳು ಕೂಡಿಕೊಂಡಿರುವುದು ಕಂಡುಬಂದಿದೆ. ಶೇ.85ರಷ್ಟು ತೂತುಗಳು ಮುಚ್ಚಿಕೊಂಡಿರುವುದು ಕಂಡುಬಂದಿದೆ. ವಾಯುಮಾಲಿನ್ಯದಿಂದ ಜಗತ್ತಿನಲ್ಲಿ ಪ್ರತಿವರ್ಷ 41 ಲಕ್ಷ ಅಕಾಲಿಕ ಮೃತ್ಯುಗಳು ಸಂಭವಿಸುತ್ತವೆ. ಲಾಕ್‌ಡೌನ್‌ ಪರಿಣಾಮ ಇದರಲ್ಲಿ ಅರ್ಧದಷ್ಟು ಜೀವಗಳು ಉಳಿದಿವೆ.

ಬೃಹತ್‌ ಆನ್‌ಲೈನ್‌ ಮಾರಾಟ ಸಂಸ್ಥೆ ಅಮೆಜಾನ್‌ನ ಒಡೆಯ ಜೆಪ್‌ ಬೆಜೋಸ್‌ ಇತ್ತೀಚೆಗೆ ತಮ್ಮ ಕಂಪನಿಯ ವತಿಯಿಂದ 10 ಶತಕೋಟಿ ಡಾಲರ್‌ ನೆರವನ್ನು ಜಾಗತಿಕ ತಾಪಮಾನ ತಡೆಗೆ ವಿನಿಯೋಗಿಸುವುದಾಗಿ ವಾಗ್ದಾನ ನೀಡಿದರು. ತಮ್ಮ ಇಂಧನ ಮೂಲವನ್ನು ಸಂಪೂರ್ಣ ಸೋಲಾರ್‌ ಶಕ್ತಿಗೆ ಪರಿವರ್ತಿಸುವುದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ಶೂ ತಯಾರಿಕಾ ಸಂಸ್ಥೆ ಅಡಿದಾಸ್‌, ಪಾರ್ಲೆ ಸಂಸ್ಥೆಯ ಜೊತೆಗೆ ಸೇರಿ, ಸಮುದ್ರದಿಂದ ತೆಗೆದ ತ್ಯಾಜ್ಯ ಪ್ಲಾಸ್ಟಿಕ್‌ನಿಂದ 7000 ಸೀಮಿತ ಎಡಿಷನ್‌ ಶೂಗಳನ್ನು ತಯಾರಿಸಿ ಮಾರಾಟ ಮಾಡಿತು.

ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಳಕೆಯನ್ನು ಭಾರತದಲ್ಲಿ 2022ರೊಳಗೆ ಪೂರ್ತಿಯಾಗಿ ಕೈಬಿಡಬೇಕು ಎಂಬುದು ಪ್ರಧಾನಿ ಮೋದಿ ಆಗ್ರಹ. ಇದನ್ನು ಅವರು ಜಾಗತಿಕ ವೇದಿಕೆಗಳಲ್ಲೂ ಪ್ರತಿಪಾದಿಸುತ್ತಿದ್ದಾರೆ. ಬಳಸಿ ಬಿಸುಡುತ್ತಿರುವ ಪ್ಲಾಸ್ಟಿಕ್‌ ಪರಿಸರಕ್ಕೆ ಉಂಟುಮಾಡುತ್ತಿರುವ ಹಾನಿಯನ್ನು ತಡೆಗಟ್ಟಿ, ಜೀವಜಾಲವನ್ನು ಸಮಸ್ಥಿತಿಯಲ್ಲಿಉಳಿಸಿಕೊಳ್ಳು್ಳವುದು ಆದ್ಯತೆ.

ಕೇಂದ್ರ ಸರಕಾರ ಪೆಟ್ರೋಲಿಯಂ ಅವಲಂಬನೆಯನ್ನು ತಗ್ಗಿಸಲು ಹಾಗೂ ಎಲೆಕ್ಟ್ರಿಕ್‌ ವಾಹನ ಬಳಕೆಯನ್ನು ಉತ್ತೇಜಿಸಲು ಒತ್ತು ನೀಡಿದ್ದು, ಈ ಸಲದ ಬಜೆಟ್‌ನಲ್ಲಿಎಲೆಕ್ಟ್ರಿಕ್‌ ಕಾರುಗಳನ್ನು ಖರೀದಿಸುವವರಿಗೆ ಸಾಲದ ಬಡ್ಡಿಯಲ್ಲಿಹೆಚ್ಚುವರಿ 1.5 ಲಕ್ಷ ರೂ.ಗಳ ಆದಾಯ ತೆರಿಗೆ ವಿನಾಯಿತಿ ಪ್ರಕಟಿಸಲಾಗಿತ್ತು. ಎಲೆಕ್ಟ್ರಿಕ್‌ ಕಾರುಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿತ್ತು. ಪೆಟ್ರೋಲ್‌-ಡೀಸೆಲ್‌ ಮೇಲಿನ ಕಸ್ಟಮ್ಸ್‌ ಸುಂಕವನ್ನು ಲೀಟರ್‌ಗೆ 2.5, ನಂತರ 5 ರೂ. ಏರಿಸಿರುವುದು ಇವುಗಳ ಬಳಕೆಯನ್ನು ನಿರುತ್ತೇಜನಗೊಳಿಸಲು ತೆಗೆದುಕೊಂಡಿರುವ ಕ್ರಮಗಳಲ್ಲೊಂದು. ಹಲವಾರು ಪ್ರಮುಖ ಆಟೊಮೊಬೈಲ್‌ ಕಂಪನಿಗಳು ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸುವ ಘಟಕಗಳನ್ನು ಭಾರತದಲ್ಲಿತೆರೆದಿದ್ದು, ಲಾಕ್‌ಡೌನ್‌ ನಂತರದ ಸನ್ನಿವೇಶದಲ್ಲಿಇವು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಬಹುದು. ಇ-ಕಾರುಗಳ ಬ್ಯಾಟರಿ ಚಾರ್ಜಿಂಗ್‌ ಯುನಿಟ್‌ಗಳ ಸ್ಥಾಪನೆಗೆ ಪ್ರೋತ್ಸಾಹ, ಸಬ್ಸಿಡಿ ಘೋಷಿಸಲಾಗಿದೆ. ಭವಿಷ್ಯದಲ್ಲಿಭಾರತ ಎಲೆಕ್ಟ್ರಿಕ್‌ ಕಾರುಗಳ ಜಾಗತಿಕ ಮಟ್ಟದ ಉತ್ಪಾದಕ ತಾಣವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. 2030ರ ಬಳಿಕ ಭಾರತದ ಬೀದಿಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಮಾತ್ರ ಇರಬೇಕು ಎಂಬುದು ಕೇಂದ್ರ ಸರಕಾರದ ಕನಸು. 2023ರ ಏಪ್ರಿಲ್‌ನಿಂದ ಪೆಟ್ರೋಲ್‌ ಚಾಲಿತ ತ್ರಿಚಕ್ರ ವಾಹನಗಳನ್ನು ಮಾರುವಂತಿಲ್ಲ; 2025ರ ಬಳಿಕ ಪೆಟ್ರೋಲ್‌ ಚಾಲಿತ, 150 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನೂ ಮಾರುವಂತಿಲ್ಲ.

ಎರಡೇ ತಿಂಗಳ ಹಿಂದೆ ವಾರಾಣಸಿಯಲ್ಲಿಗಂಗಾನದಿಯ ನೀರು ಅತ್ಯಂತ ಕಲುಷಿತ ಎನಿಸಿತ್ತು. ಈಗ ರೂರ್ಕಿ ಐಐಟಿಯ ಸಂಶೋಧಕರ ತಂಡ ನಡೆಸಿದ ಗಂಗಾ ನದಿಯ ನೀರಿನ ಅಧ್ಯಯನ ಫಲಿತಾಂಶದ ಪ್ರಕಾರ, ಗಂಗೆಯ ನೀರು ಕುಡಿಯಲು ಅರ್ಹವಾಗಿದೆ. ಭಾರತೀಯ ಮಾನಕಗಳ ಬ್ಯೂರೋ ನಿಗದಿಡಪಡಿಸಿರುವ 28 ಮಾನದಂಡಗಳನ್ನು ಗಂಗಾನದಿಯ ನೀರು ಉತ್ತೀರ್ಣವಾಗಿದೆ. ಗಂಗೆಗೆ ಬಂದು ಸೇರುವ 22 ಚರಂಡಿಗಳನ್ನು ಬಂದ್‌ ಮಾಡಿರುವುದು ಇದಕ್ಕೆ ಕಾರಣ.

ಒಡಿಶಾದ ರೂರ್ಕಿ ಸೇರಿದಂತೆ ಹಲವಾರು ಸಮುದ್ರತೀರಗಳಲ್ಲಿಆಲಿವರ್‌ ರಿಡ್ಲೆಆಮೆಗಳು ಬಂದು ತತ್ತಿಯಿಡುತ್ತಿದ್ದವು. ಆದರೆ ಮನುಷ್ಯರ ಹೆಚ್ಚಿನ ಓಡಾಟದಿಂದ ಇವುಗಳ ಸಂತಾನೋತ್ಪಾದನೆಗೆ ಸಂಕಷ್ಟ ಉಂಟಾಗಿತ್ತು. ಕಳೆದ ಎರಡು ತಿಂಗಳಲ್ಲಿಮನುಷ್ಯರ ಓಡಾಟವಿಲ್ಲದ ಬೀಚ್‌ಗಳಲ್ಲಿ ಲಕ್ಷಾಂತರ ಆಮೆಗಳು ಆಗಮಿಸಿ ತತ್ತಿಯಿಟ್ಟು ಮರಿಗಳು ಸಮುದ್ರದತ್ತ ಸಾಗುತ್ತಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.



from India & World News in Kannada | VK Polls https://ift.tt/3cGHAhi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...