ಬೆಂಗಳೂರು: ರಾಜ್ಯದಲ್ಲಿ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಗರಿಗೆದರಿದೆ. ಎರಡು ಮೇಲ್ಮನೆಗಳಿಗೆ ಸ್ಥಾನ ಪಡೆದುಕೊಳ್ಳಲು ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು ಬಿಜೆಪಿಯಲ್ಲೂ ಟಿಕೆಟ್ ಪೈಪೋಟಿ ಚುರುಕು ಪಡೆದುಕೊಂಡಿದೆ. ರಾಜ್ಯಸಭೆ ಹಾಗೂ ವಿಧಾನಪರಿಷತ್ಗೆ ಕಮಲ ಪಾಳಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಲಾಬಿ ನಡೆಸುತ್ತಿದ್ದಾರೆ. ತನ್ನ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆಯಲ್ಲಿ ಸ್ಥಾನ ಕೊಡಿಸಿಲು ಉಮೇಶ್ ಕತ್ತಿ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಗುರುವಾರವೂ ಬಿಎಸ್ವೈ ಅವರನ್ನು ಉಮೇಶ್ ಕತ್ತಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಚ್.ವಿಶ್ವನಾಥ್ ಅವರು ಕೂಡಾ ಬಿಎಸ್ವೈ ಜೊತೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯಸಭೆಗೆ ಕಾಲಿಡಲು ಕಾದುಕುಳಿತಿರುವವರ ಪಟ್ಟಿ ಬಿಜೆಪಿಯಲ್ಲಿ ದೊಡ್ಡದಿದೆ. ಮರಳೀಧರ ರಾವ್, ಪ್ರಕಾಶ್ ಶೆಟ್ಟಿ, ಪ್ರಭಾಕರ್ ಕೋರೆ, ತೇಜಸ್ವಿನಿ ಅನಂತ್ ಕುಮಾರ್, ರಮೇಶ್ ಕತ್ತಿ, ಕೆ.ವಿ ಕಾಮತ್, ಪ್ರೊ.ನಾಗರಾಜ್ ಹೆಸರುಗಳು ಚಾಲ್ತಿಯಲ್ಲಿವೆ. ಈ ನಡುವೆ ಶಂಕರ್ ಬಿದರಿಯವರನ್ನು ರಾಜ್ಯಸಭೆ ಅಥವಾ ವಿಧಾನಪರಿಷತ್ಗೆ ಪರಿಗಣಿಸುವಂತೆ ಉತ್ತರ ಕರ್ನಾಟಕ ಭಾಗದ ನಿಯೋಗ ಬಿಎಸ್ವೈ ಅವರನ್ನು ಭೇಟಿ ಮಾಡಿ ವಿನಂತಿಸಿದೆ. ಪರಿಷತ್ ಸ್ಥಾನಕ್ಕೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಬಿಎಸ್ವೈಗೂ ತಲೆನೋವಾಗಿ ಮಾರ್ಪಟ್ಟಿದೆ. ಸುನಿಲ್ ವಲ್ಯಾಪುರೆ, ಮಾಲಿಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಲಾಬಿ ಮುಂದುವರಿಸಿದ್ದಾರೆ. ಈ ನಡುವೆ ಎಂಟಿಬಿ ನಾಗರಾಜ್, ಆರ್. ಶಂಕರ್ ಹೆಸರುಗಳು ಪರಿಷತ್ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಸದ್ಯ ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಮೂಲಕ ಒತ್ತಡ ಹೇರುತ್ತಿದ್ದಾರೆ. ಅಂತಿಮವಾಗಿ ಬಿಎಸ್ವೈ ಆಯ್ಕೆ ಯಾರು ಎಂಬುವುದು ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/36ZMPaD