ಹೊಸದಿಲ್ಲಿ: ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ತಂಡವನ್ನು ಬಿಟ್ಟು ಹೋಗುವುದು ಸುನಿಶ್ಚಿತವೆನಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ () 2018 ಹಾಗೂ 2019ನೇ ಸಾಲಿನಲ್ಲಿ ಕಿಂಗ್ಸ್ ಇಲೆವೆನ್ ತಂಡವನ್ನು ಅಶ್ವಿನ್ ಮುನ್ನಡೆಸಿದ್ದರು. ಇದು ಅಶ್ವಿನ್ ಹಾಗೂ ಪಂಜಾಬ್ ಫ್ರಾಂಚೈಸಿಗಳ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವಂತಿದೆ. ಕಳೆದ ಕೆಲವು ಸಮಯಗಳಿಂದ ಅಶ್ವಿನ್ ಮಾರಾಟ ಸಂಬಂಧ ಅನೇಕ ಫ್ರಾಂಚೈಸಿಗಳ ಜತೆಗೆ ಪಂಜಾಬ್ ತಂಡವು ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದೆ. ಕೊನೆಗೂ ಅಶ್ವಿನ್ ಬಿಟ್ಟು ಹೋಗುವುದಂತೂ ಖಚಿತವೆನಿಸಿದೆ. ಅಶ್ವಿನ್ ಹಾಗೂ ಪಂಜಾಬ್ ತಂಡಗಳು ಅನ್ಯೋನ್ಯ ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಕಿಂಗ್ಸ್ ಸಹ ಮಾಲಿಕ ನೆಸ್ ವಾಡಿಯಾ ತಿಳಿಸಿದ್ದಾರೆ. ಬಹಳಷ್ಟು ಊಹಾಪೋಹಾಗಳಿದ್ದು, ಸಮಾಲೋಚನೆಗಳು ಈಗಲೂ ಜಾರಿಯಲ್ಲಿದೆ. ಅಶ್ವಿನ್ ಒಳ್ಳೆಯ, ಸರ್ವತೋಮುಖ ಆಟಗಾರ. ಯಾವುದೇ ತಂಡವು ಅವರನ್ನು ಹೊಂದಲು ಬಯಸುತ್ತದೆ. ನಾವು ವಿಭಿನ್ನ ತಂಡಗಳೊಂದಿಗೆ (ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ) ಸಮಾಲೋಚನೆಯಲ್ಲಿದ್ದು, ಸ್ಪಷ್ಟವಾದ ತಕ್ಷಣ ಪ್ರಕಟಿಸಲಿದ್ದೇವೆ ಎಂದಿದ್ದಾರೆ. ನಾವು ಹಾಗೂ ಅಶ್ವಿನ್ ಸೌಹಾರ್ದಯುತವಾಗಿ ಬೇರ್ಪಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಈಗ ಎಲ್ಲರಿಗೂ ಉತ್ತಮವಾದ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಾವೀಗ ಕೆಲವು ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಶ್ವಿನ್ ಹಾಗೂ ನಮಗೆ ಉತ್ತಮ ಮೌಲ್ಯ ಸಿಗಲು ನೋಡುತ್ತಿದ್ದೇವೆ. ಎಲ್ಲರಿಗೂ ಉತ್ತಮ ವ್ಯವಹಾರವನ್ನು ಬಯಸುತ್ತಿದ್ದೇವೆ ಎಂದರು. ಈ ಮೊದಲು ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೋಚ್ ಆಗಿ ನೇಮಕಗೊಂಡಾಗ ಅಶ್ವಿನ್ರನ್ನು ಪಂಜಾಬ್ ತಂಡದಲ್ಲೇ ಉಳಿಸಿಕೊಳ್ಳುವ ಬಗ್ಗೆ ಹೇಳಿಕೆಯನ್ನು ಕೊಟ್ಟಿದ್ದರು. ಅಶ್ವಿನ್ರನ್ನು ಉಳಿಸಿಕೊಳ್ಳಲು ಕುಂಬ್ಳೆ ಕೂಡಾ ಉತ್ಸುಕತೆ ತೋರಿದ್ದರು ಎಂಬುದು ತಿಳಿದು ಬಂದಿತ್ತು. ಆದರೆ ಇದೀಗ ಪಂಜಾಬ್ ತಂಡ ಬಿಟ್ಟು ಹೋಗುವುದು ಖಚಿತವೆನಿಸಿದೆ. ಅಶ್ವಿನ್ ಮುಂದಾಳತ್ವದಲ್ಲಿ ಎರಡೂ ಆವೃತ್ತಿಗಳಲ್ಲಿ ಪಂಜಾಬ್ ತಂಡವು ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ದ್ವಿತಿಯಾರ್ಧದಲ್ಲಿ ವೈಫಲ್ಯ ಅನುಭವಿಸಿತ್ತು. ಅಲ್ಲದೆ 2018 ಹಾಗೂ 2019ನೇ ಸಾಲಿನಲ್ಲಿ ಅನುಕ್ರಮವಾಗಿ ಏಳು ಹಾಗೂ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದವು. ಅಶ್ವಿನ್ ಪಂಜಾಬ್ ತಂಡವನ್ನು ಬಿಟ್ಟು ಹೋದರೆ ಕರ್ನಾಟಕದ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಲಿದ್ದಾರೆ ಎಂಬುದು ತಿಳಿದು ಬಂದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NNCllj