ಬಾಂಗ್ಲಾ ವಿರುದ್ದ ಸರಣಿ ಸೋಲಿನ ಮುಖಭಂಗದ ಭೀತಿಯಲ್ಲಿ ಟೀಮ್ ಇಂಡಿಯಾ

ರಾಜ್‌ಕೋಟ್: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟ್ವೆಂಟಿ-20 ಪಂದ್ಯವು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನವೆಂಬರ್ 7 ಗುರುವಾರದಂದು ನಡೆಯಲಿದೆ. ಆಗಲೇ ದಿಲ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲನುಭವಿಸಿರುವ ಟೀಮ್ ಇಂಡಿಯಾಗೆ ಸರಣಿ ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದರೊಂದಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಯಾಕೆ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತೀವ್ರ ಒತ್ತಡಕ್ಕೊಳಗಾಗಿದ್ದು, ಬಾಂಗ್ಲಾ ವಿರುದ್ಧ ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಬೇಕಿದೆ. ಪ್ರಸಕ್ತ ಸಾಲಿನಲ್ಲಿ ಟೆಸ್ಟ್ ಹಾಗೂ ಏಕದಿನಕ್ಕೆ ಹೋಲಿಸಿದಾಗ ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ರನ್ ಬರವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಭಾರತದ ದೃಷ್ಟಿಕೋನದಲ್ಲಿ ರೋಹಿತ್ ಫಾರ್ಮ್‌ಗೆ ಮರಳಬೇಕಾಗಿರುವುದು ಅತಿ ಅಗತ್ಯವೆನಿಸಿದೆ. ಇದು ರೋಹಿತ್ ಪಾಲಿಗೆ 100ನೇ ಪಂದ್ಯ ಎಂಬ ವಿಶೇಷತೆಯನ್ನು ಪಡೆದಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ. ಶ್ರೇಯಸ್ ಅಯ್ಯರ್ ತಪ್ಪುಗಳಿಂದ ಪಾಠಗಳನ್ನು ಕಲಿಯಬೇಕಿದೆ. ಯಂಗ್ ರಿಷಬ್ ಪಂತ್ ಸಾಕಷ್ಟು ಎಡವಟ್ಟುಗಳನ್ನು ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಹಾಗಾಗಿ ಮಗದೊಂದು ಅವಕಾಶ ಪಡೆಯುವರೇ ಅಥವಾ ಸಂಜು ಸ್ಯಾಮ್ಸನ್‌ರಿಗೆ ಬುಲಾವ್ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಆಲ್‌ರೌಂಡರ್‌ಗಳಾದ ಕುೃಣಾಲ್ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ನಿರ್ವಹಣೆಯನ್ನು ಮುಂದುವರಿಸಬೇಕಿದೆ. ಕಳೆದ ಪಂದ್ಯದಲ್ಲಿ ಡೆಬ್ಯು ಮಾಡಿರುವ ಶಿವಂ ದುಬೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಅನುಭವಿ ಮನೀಷ್ ಪಾಂಡೆ ಅವರತ್ತ ಮೊರೆ ಹೋಗುವುದು ಅನಿವಾರ್ಯವೆನಿಸಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ನಿಲುವು ನಿರ್ಣಾಯಕವೆನಿಸಲಿದೆ. ಸ್ಪಿನ್ ಅಸ್ತ್ರವನ್ನು ಯುಜ್ವೇಂದ್ರ ಚಹಲ್ ಮುನ್ನಡೆಸಲಿದ್ದಾರೆ. ವೇಗಿಗಳ ಪಡೆಯಲ್ಲಿ ದೀಪಕ್ ಚಹರ್ ಹಾಗೂ ಖಲೀಲ್ ಅಹ್ಮದ್ ಪರಿಣಾಮಕಾರಿ ಎನಿಸಿಕೊಳ್ಳಬೇಕಿದೆ. ಇನ್ನು ತಂಡದಲ್ಲಿರುವ ಶಾರ್ದೂಲ್ ಠಾಕೂರ್ ಹಾಗೂ ರಾಹುಲ್ ಚಹರ್ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಇನ್ನೊಂದೆಡೆ ಬಾಂಗ್ಲಾದೇಶ ಚಾರಿತ್ರಿಕ ಸಾಧನೆ ಮಾಡುವ ಹೊಸ್ತಿಲಲ್ಲಿದೆ. ಭಾರತವನ್ನು ಭಾರತದ ನೆಲದಲ್ಲೇ ಮಣಿಸುವ ಅಪೂರ್ವ ಅವಕಾಶವನ್ನು ಪಡೆದಿದೆ. ಈ ನಿಟ್ಟಿನಲ್ಲಿ ಮಹಮುದುಲ್ಲಾ ಪಡೆಯು ತಮ್ಮ ಶ್ರೇಷ್ಠ ಪ್ರದರ್ಶನವನ್ನೇ ಹೊರಗೆಡವಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ನಾಯಕ ಮಹಮುದುಲ್ಲಾ ಜತೆಗೆ ಮುಷ್ಫಿಕರ್ ರಹೀಂ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಮುಸ್ತಾಫಿಜುರ್ ರಹ್ಮಾನ್ ಸೇರಿದಂತೆ ತಂಡದೆಲ್ಲ ಆಟಗಾರರು ಸಾಂಘಿಕ ಪ್ರದರ್ಶನ ನೀಡಿದ ಭಾರತಕ್ಕೆ ಆಘಾತ ನೀಡುವ ಇರಾದೆಯಲ್ಲಿದೆ. ಈ ಮಧ್ಯೆ ಪಂದ್ಯಕ್ಕೆ ಚಂಡಮಾರುತ ಭೀತಿ ಕಾಡುತ್ತಿದೆ. ಕನಿಷ್ಠ ಜೋರಾಗಿ ಮಳೆ ಸುರಿದರೂ ಭಾರತದ ಸರಣಿ ಗೆಲುವಿನ ಗುರಿಗೆ ಹಿನ್ನಡೆಯಾಗಲಿದೆ. ಒಟ್ಟಿನಲ್ಲಿ ದಿಲ್ಲಿಗೆ ಹೋಲಿಸಿದರೆ ರಾಜ್‌ಕೋಟ್‌ನಲ್ಲಿ ಹೈ ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗುತ್ತಿದೆ. ಪಂದ್ಯಾರಂಭ: ರಾತ್ರಿ 7ಕ್ಕೆ ತಂಡಗಳು ಇಂತಿದೆ: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಕೃುಣಾಲ್ ಪಾಂಡ್ಯ, ಶಿವಂ ದುಬೆ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಬ್ ಪಂತ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ರಾಹುಲ್ ಚಹರ್, ದೀಪಕ್ ಚಹರ್, ಖಲೀಲ್ ಅಹ್ಮದ್ ಮತ್ತು ಶಾರ್ದೂಲ್ ಠಾಕೂರ್ ಬಾಂಗ್ಲಾದೇಶ: ಮಹಮುದುಲ್ಲಾ (ನಾಯಕ), ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಅಫಿಪ್ ಹುಸೇನ್, ಮೊಸದೆಕ್ ಹುಸೇನ್, ಅಮಿನುಲ್ ಇಸ್ಲಾಂ, ಅಬು ಹೈದರ್ ರೋನಿ, ಲಿಟನ್ ದಾಸ್, ಮುಷ್ಫಿಕರ್ ರಹೀಂ (ವಿಕೆಟ್ ಕೀಪರ್), ಮೊಹಮ್ಮದ್ ಮಿಥುನ್, ಅರಾಫತ್ ಸನ್ನಿ, ಅಲ್ ಅಮಿನ್ ಹುಸೇನ್, ಮುಸ್ತಾಫಿಜುರ್ ರಹ್ಮಾನ್, ಶಫಿಯುಲ್ ಇಸ್ಲಾಂ ಮತ್ತು ತೈಜುಲ್ ಇಸ್ಲಾಂ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Nmw1SJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...