ಹೊಸದಿಲ್ಲಿ: ಪರ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಡಿದ ಅನ್ಕ್ಯಾಪ್ಡ್ ಆಟಗಾರರಲ್ಲಿ ಕೂಡ ಒಬ್ಬರು . ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಪಾಟಿದರ್, ನಂತರ ಆರ್ಸಿಬಿ ಪರ 4 ಪಂದ್ಯಗಳಲ್ಲಿ 71 ರನ್ ಗಳಿಸಿದ್ದರು. ವಿಶ್ವ ಶ್ರೀಮಂತ ಫ್ರಾಂಚೈಸಿ ಲೀಗ್ ಆಡುವುದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಬಯಕೆಯನ್ನು ಹೊಂದಿದ್ದೆ. ಬೆಂಗಳೂರು ಫ್ರಾಂಚೈಸಿಯ ಮೊಟ್ಟ ಮೊದಲ ಸೆಷನ್ನಲ್ಲಿ ನಾಯಕ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಬೇಟಿಯಾಗುವ ವೇಳೆ ಆತಂಕಕ್ಕೆ ಒಳಗಾಗಿದ್ದೆ ಎಂದ ಅಂಶವನ್ನು ಬಲಗೈ ಬ್ಯಾಟ್ಸ್ಮನ್ ಬಹಿರಂಗಪಡಿಸಿದ್ದಾರೆ. "ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರು ಇರುವ ಹಿನ್ನೆಲೆಯಲ್ಲಿ ನನಗೆ ಯಾವಾಗಲೂ ಆರ್ಸಿಬಿ ನನ್ನ ನೆಚ್ಚಿನ ತಂಡವಾಗಿದೆ. ಅದರಂತೆ ಅವರ ಜೊತೆ ಆಡುವ ಅದೃಷ್ಟ ನನಗೆ ಒಲಿಯಿತು. ಅವರನ್ನು ಮೊದಲನೇ ಬಾರಿ ಭೇಟಿಯಾಗುವ ವೇಳೆ ಆತಂಕಕ್ಕೆ ಒಳಗಾಗಿದ್ದೆ. ಆದರೆ, ತಂಡಕ್ಕೆ ಹೊಂದಾಣಿಕೆ ಸಾಧಿಸಿದ ಬಳಿಕ ನಾನು ತುಂಬಾ ಅಂಶಗಳನ್ನು ಇಷ್ಟಪಟ್ಟಿದ್ದೇನೆ," ಎಂದು ಪಾಟಿದರ್ ಆರ್ಸಿಬಿ ಸಂದರ್ಶನದಲ್ಲಿ ತಿಳಿಸಿದರು. ಅಹ್ಮದಾಬಾದ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಜತ್ ಪಾಟಿದರ್ ನಿರ್ಣಾಯಕ 31 ರನ್ ಗಳಿಸಿದ್ದರು. ಆ ಮೂಲಕ ಆರ್ಸಿಬಿಯ ಒಂದು ರನ್ ರೋಚಕ ಗೆಲುವಿಗೆ ನೆರವಾಗಿದ್ದರು. ಈ ಪಂದ್ಯದಲ್ಲಿ ಆರಂಭಿಕ ಎರಡು ವಿಕೆಟ್ಗಳು ಬಹುಬೇಗ ಉರುಳಿದ ಬಳಿಕ ಪಾಟಿದರ್, ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರೊಂದಿಗೆ ಜೊತೆಯಾಟವಾಡಿದ್ದರು. ಈ ವೇಳೆ ಸ್ಟಾರ್ ಆಟಗಾರರ ಬಳಿ ನಡೆಸಿದ್ದ ಸಂವಹನವನ್ನು ಹಂಚಿಕೊಂಡ ರಜತ್, "ನಾವು ಪಂದ್ಯದ ಸನ್ನಿವೇಶ ಹಾಗೂ ಯಾವ ಲೆಕ್ಕಾಚಾರದಲ್ಲಿ ಆಡಬೇಕು ಎಂಬ ಬಗ್ಗೆ ಮಾತನಾಡಿದ್ದೆವು. ನಾವು ಮಾಡುತ್ತಿರುವುದು ಸರಿಯಾಗಿದ್ದರೆ, ಖಂಡಿತಾ ಒತ್ತಡದಿಂದ ಹೊರಗೆ ಬರುತ್ತೇವೆ ಎಂಬುದು ನಮಗೆ ಗೊತ್ತಿತ್ತು. ಈ ಬಗ್ಗೆ ನಾವು ಕ್ರೀಸ್ನಲ್ಲಿ ಸಂವಹನ ನಡೆಸಿದ್ದೆವು," ಎಂದು ಯುವ ಬ್ಯಾಟ್ಸ್ಮನ್ ಬಹಿರಂಗಪಡಿಸಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಆಗುವ ಮುನ್ನ ರಜತ್ ಪಾಟಿದರ್ ಮೊದಲು ಸ್ಪಿನ್ನರ್ ಆಗಿದ್ದರು. ಆದರೆ, ಬ್ಯಾಟಿಂಗ್ನಲ್ಲಿ ಪ್ರತಿಭೆ ಇರುವ ಬಗ್ಗೆ ಕೋಚ್ಗಳು ಬಲಗೈ ಆಟಗಾರನಿಗೆ ತಿಳಿಸಿದ್ದರು. ನಾನು ಕ್ರಿಕೆಟ್ ಆಡಲು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕಾರಣ ಎಂಬುದನ್ನು ಈ ವೇಳೆ ಬಹಿರಂಗಪಡಿಸಿದರು. "ಒಂದು ಹಂತದಲ್ಲಿ ಸಚಿನ್ ತೆಂಡೂಲ್ಕರ್ ಅವರ ಒಂದು ಹೆಸರು ಮಾತ್ರ ಮುಂಚೂಣಿಯಲ್ಲಿತ್ತು. ಅವರ ಕಾರಣದಿಂದ ನನ್ನ ಕ್ರಿಕೆಟ್ ಪಯಣ ಆರಂಭವಾಯಿತು. ನಾನು ನಿಧಾನವಾಗಿ ಕ್ರಿಕೆಟ್ ಆರಂಭಿಸುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರನ್ನು ತುಂಬಾ ಅನುಸರಿಸಿದೆ ಹಾಗೂ ಈಗಲೂ ಅದನ್ನೇ ಮಾಡುತ್ತಿದ್ದೇನೆ. ಜತೆಗೆ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅನ್ನು ತುಂಬಾ ಇಷ್ಟಪಡುತ್ತೇನೆ, ವಿಭಿನ್ನ ಮಾದರಿಗೆ ವಿಭಿನ್ನ ಆಟಗಾರರು ನನಗೆ ಮಾದರಿಯಾಗಿದ್ದಾರೆ," ಎಂದು ರಜತ್ ಪಾಟಿದರ್ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3vGtGoZ