ಇನ್ನೂ ಎಷ್ಟು ಆಕ್ಸಿಜನ್‌ ಇಲ್ಲದೆ ಜನ ಸಾಯಬೇಕು?: ಕೇಂದ್ರದ ವಿರುದ್ಧ ಕರ್ನಾಟಕ ಹೈ ಕೋರ್ಟ್ ಕಿಡಿ

ಬೆಂಗಳೂರು: ಇನ್ನೂ ಎಷ್ಟು ಜನ ಸಾಯಬೇಕು? ನಿಮಗೆ ಜನ ಸಾಯುವುದು ಬೇಕೆ? ನಿಮ್ಮ ವಿವರಣೆ ಬೇಕಿಲ್ಲ. ಕೂಡಲೇ ರಾಜ್ಯದ ಪಾಲು ಹೆಚ್ಚಳ ಮಾಡಿ. ಇಲ್ಲವಾದರೆ ಆದೇಶಿಸಬೇಕಾಗುತ್ತದೆ... ಇದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ. ಸೋಂಕು ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚು ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ, ಕರ್ನಾಟಕದಲ್ಲಿ ಎಷ್ಟೊಂದು ಪಾಸಿಟಿವ್‌ ಕೇಸ್‌ಗಳಿದ್ದರೂ ಏಕೆ ತಾರತಮ್ಯ ಎಂದು ತರಾಟೆಗೆ ಕೋರ್ಟ್‌ ತೆಗೆದುಕೊಂಡಿತು. ಬುಧವಾರ ಬೆಳಗ್ಗೆಯೊಳಗೆ ರಾಜ್ಯದ ಆಮ್ಲಜನಕ ಹಂಚಿಕೆ ಪಾಲನ್ನು ಹೆಚ್ಚಳ ಮಾಡದಿದ್ದರೆ ಆರ್ಡರ್‌ ಹೊರಡಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿತು. ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್‌. ಓಕ್‌ ಹಾಗೂ ಹಿರಿಯ ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ಪೀಠವು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯದಲ್ಲಿ ಎಷ್ಟು ಆಕ್ಸಿಜನ್‌ ಬೇಡಿಕೆ ಇದೆ, ಎಷ್ಟು ಕೊರತೆ ಇದೆ ಹಾಗೂ ಕೇಂದ್ರದಿಂದ ಪೂರೈಕೆಯಾಗುತ್ತಿರುವ ಪ್ರಮಾಣವೆಷ್ಟು ಎಂದು ಕೇಂದ್ರ, ರಾಜ್ಯದ ಪರ ವಕೀಲರನ್ನು ಪ್ರಶ್ನಿಸಿತು. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ''ಮೇ 5ರ ಅಂದಾಜಿನಂತೆ ರಾಜ್ಯಕ್ಕೆ 1700 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅಗತ್ಯವಿದೆ. ಸರಕಾರವೇ ಆಸ್ಪತ್ರೆಗಳ ಬೇಡಿಕೆ ಆಧರಿಸಿ ಆಕ್ಸಿಜನ್‌ ಪೂರೈಕೆ ಮಾಡುತ್ತಿದೆ,'' ಎಂದರು. ಕೇಂದ್ರದ ಪರ ವಾದಿಸಿದ ವಕೀಲ ಎಂ.ಎನ್‌. ಕುಮಾರ್‌ ''ಹಿಂದಿನ ವಿಚಾರಣೆ ವೇಳೆ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್‌ ಪೂರೈಕೆಗೆ ಕೇಂದ್ರಕ್ಕೆ ಸೂಚಿಸಧಿಲಾಗಿತ್ತು, ಅದರಂತೆ ಹಂಚಿಕೆ ಪ್ರಮಾಣವನ್ನು 802 ಮೆಟ್ರಿಕ್‌ ಟನ್‌ನಿಂದ 865 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲಾಗಿದೆ,'' ಎಂದರು. ಆಗ ನ್ಯಾಯಪೀಠ ''ರಾಜ್ಯದಲ್ಲಿ ಆಕ್ಸಿಜನ್‌ ಬೇಡಿಕೆ 1700 ಮೆ.ಟನ್‌ಗೆ ಏರಿಕೆಯಾಗಿದೆ. ಅದನ್ನು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸೋಂಕಿತರು ಆಕ್ಸಿಜನ್‌ ಸಿಗದೆ ಸಾಯುತ್ತಿದ್ದಾರೆ. ಈ ಸಂಬಂಧ ಕೇಂದ್ರದಿಂದ ಸ್ಪಷ್ಟನೆ ಪಡೆದು ಮಾಹಿತಿ ನೀಡಬೇಕು,'' ಎಂದು ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು. ಮಧ್ಯಾಹ್ನ ನಂತರ ವಿಚಾರಣೆ ಆರಂಭವಾದಾಗ ಕೇಂದ್ರ ಸರಕಾರಿ ವಕೀಲರು ''ರಾಜ್ಯಕ್ಕೆ ಹೆಚ್ಚಿನ ಆಕ್ಸಿಜನ್‌ ಪೂರೈಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ಬೇಕು,'' ಎಂದು ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ''ಚಾಮರಾಜನಗರ, ಕಲಬುರಗಿಯಲ್ಲಿ ಆಕ್ಸಿಜನ್‌ ಸಿಗದೆ ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್‌ ಸಿಗದೆ ಮತ್ತೆಷ್ಟು ಕೋವಿಡ್‌ ರೋಗಿಗಳು ಸಾವನ್ನಪ್ಪಬೇಕು,'' ಎಂದು ಪ್ರಶ್ನಿಸಿತು. ''ರಾಜ್ಯದಲ್ಲಿ ಕೋವಿಡ್‌ ಸೋಂಕು ಮಿತಿ ಮೀರುತ್ತಿದೆ. ಬೆಂಗಳೂರು ಬಿಟ್ಟು ಉಳಿದೆಲ್ಲೆಡೆ ದಿನಕ್ಕೆ 20 ಸಾವಿರಕ್ಕೂ ಅಧಿಕ ಪ್ರಕರಣಗಳಿಲ್ಲ. ಬೇರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿರುವ ಆಕ್ಸಿಜನ್‌ ಅನ್ನು ರಾಜ್ಯಕ್ಕೆ ಪೂರೈಸಬಹುದಲ್ಲವೆ'' ಎಂದು ಕೇಳಿತು. ಕೇಂದ್ರದ ವಕೀಲರು ''ಆಕ್ಸಿಜನ್‌ ಪೂರೈಕೆ ವಿಚಾರ ಒಂದೇ ಇಲಾಖೆ ನಿರ್ಧರಿಸುಧಿವುದಿಲ್ಲ. ಸಂಬಂಧಪಟ್ಟ ಇಲಾಖೆಗಳು ಹಾಗೂ ಪ್ರಾಧಿಕಾರಗಳು ಸಭೆ ನಡೆಸಿ ತೀರ್ಮಾನಿಸಬೇಕು. ಹಾಗಾಗಿ ಕಾಲಾವಕಾಶ ನೀಡಬೇಕು,'' ಎಂದು ಕೋರಿದರು. ಈ ನಡುವೆ ''ಬುಧವಾರ ಬೆಳಗ್ಗೆಯೊಳಗೆ ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆ ಹೆಚ್ಚಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಈ ಸಂಬಂಧ ಆದೇಶ ಹೊರಡಿಸಲಿದೆ. ಕೇಂದ್ರ ಸೂಕ್ತ ಕ್ರಮ ಕೈಗೊಳ್ಳಬೇಕು,'' ಎಂದು ನ್ಯಾಯಪೀಠ ತಾಕೀತು ಮಾಡಿ ವಿಚಾರಣೆಯನ್ನು ಮುಂದೂಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ''ಕೋಲಾರದಲ್ಲಿ ಜಿಲ್ಲಾನ್ಯಾಯಾಧೀಶರಿಗೇ ಆಕ್ಸಿಜನ್‌ ಬೆಡ್‌ ಲಭ್ಯವಾಗುತ್ತಿಲ್ಲ. ಬೆಂಗಳೂರು ನಗರದಲ್ಲಿ 10ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಸಮರ್ಪಕ ಆಕ್ಸಿಜನ್‌ ಪೂರೈಕೆ ಇಲ್ಲ,'' ಎಂದು ಆರೋಪಿಸಿದರು. ಬಿಬಿಎಂಪಿ ಪರ ವಕೀಲ ವಿ. ಶ್ರೀನಿವಾಸ್‌ ''ಪಾಲಿಕೆ ವ್ಯಾಪ್ತಿಯಲ್ಲಿಈಗಿರುವುದರ ಜತೆಗೆ 268 ಎಚ್‌ಡಿಯು ಬೆಡ್‌, 57 ಐಸಿಯು ಬೆಡ್‌, 54 ಐಸಿಯು ವೆಂಟಿಲೇಟರ್‌ ಬೆಡ್‌ಗಳನ್ನು ಹೆಚ್ಚಿಸಲಾಗಿದೆ,'' ಎಂದರು.


from India & World News in Kannada | VK Polls https://ift.tt/3eUsPdJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...