ಭಾರತ-ಕಿವೀಸ್‌ ನಡುವೆ ಡಬ್ಲ್ಯುಟಿಸಿ ಫೈನಲ್‌ ಗೆಲ್ಲುವ ತಂಡ ಹೆಸರಿಸಿದ ಪಣೇಸರ್‌!

ಹೊಸದಿಲ್ಲಿ: ಇಂಗ್ಲೆಂಡ್‌ನ ಸೌತಾಮ್ಟನ್‌ನಲ್ಲಿ ಜೂನ್‌ 18 ರಿಂದ 22ರವರೆಗೆ ನಡೆಯುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಸೆಣಸಲಿವೆ. ಈ ಹಿನ್ನೆಲೆಯಲ್ಲಿ ಡಬ್ಲ್ಯುಟಿಸಿ ಫೈನಲ್‌ ಗೆಲ್ಲುವ ನೆಚ್ಚಿನ ತಂಡವನ್ನು ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಮಾಂಟಿ ಪಣೇಸರ್ ಹೆಸರಿಸಿದ್ದಾರೆ. ಭಾರತ ತಂಡ ಕಳೆದ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡನೇ ಬಾರಿ ಟೆಸ್ಟ್‌ ಸರಣಿ ಮುಡಿಗೇರಿಸಿಕೊಂಡಿತ್ತು. ನಂತರ, ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿಯೂ ಕೊಹ್ಲಿ ಪಡೆ ಜಯ ಸಾಧಿಸಿತ್ತು. ಹಾಗಾಗಿ, ಭಾರತ ಟೆಸ್ಟ್ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಯಣ ಅದ್ಭುತವಾಗಿದೆ. ಎಲ್ಲಾ ತಂಡಗಳಿಗಿಂತಲೂ ಭಾರತ ಟೆಸ್ಟ್ ತಂಡ ಅದ್ಭುತ ಫಾರ್ಮ್‌ನಲ್ಲಿದೆ. ಹಾಗಂತ ಕೇನ್‌ ವಿಲಿಯಮ್ಸನ್‌ ನಾಯಕತ್ವದ ನ್ಯೂಜಿಲೆಂಡ್‌ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ, ನಾಯಕತ್ವದ ಟೀಮ್‌ ಇಂಡಿಯಾ, ನ್ಯೂಜಿಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-2 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಈ ಎರಡೂ ಪಂದ್ಯಗಳಲ್ಲಿ ಭಾರತ ಕೇವಲ 5 ದಿನಗಳಲ್ಲಿಯೇ ಸೋತಿತ್ತು ಎನ್ನುವುದು ಬೇಸರದ ಸಂಗತಿ. ಇಂಗ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆದ್ದರೆ ನ್ಯೂಜಿಲೆಂಡ್‌ ಡಬ್ಲ್ಯುಟಿಸಿ ಫೈನಲ್‌ಗೆ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದೆ. ಆದರೆ, ಟೀಮ್‌ ಇಂಡಿಯಾ ಈ ಹಿಂದೆ ಸತತ ಎರಡು ಟೆಸ್ಟ್ ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಕೊಹ್ಲಿ ಪಡೆಗೆ ಇದು ಲಾಭದಾಯಕವಾಗಿದೆ ಎಂಬುದು ಪಣೇಸರ್ ಅಭಿಪ್ರಾಯ . "ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಟೆಸ್ಟ್ ಸರಣಿ ಗೆದ್ದರೆ, ಭಾರತದ ವಿರುದ್ಧ ಟೆಸ್ಟ್ ಚಾಂಪಿಯನ್‌ಷಿಪ್‌ ಪೈನಲ್‌ ಗೆಲ್ಲುವ ನೆಚ್ಚಿನ ತಂಡವಾಗಿ ಕಿವೀಸ್‌ ಮಾರ್ಪಡಲಿದೆ. ಒಂದು ವೇಳೆ ಇಂಗ್ಲೆಂಡ್‌ ಟೆಸ್ಟ್‌ ಸರಣಿ ಗೆದ್ದರೆ, ನ್ಯೂಜಿಲೆಂಡ್‌ ವಿಶ್ವಾಸ ಕುಗ್ಗಲಿದೆ. ಇದು ಟೀಮ್‌ ಇಂಡಿಯಾ ಪಾಲಿಗೆ ಒಳ್ಳೆಯ ಸಂಗತಿ," ಎಂದು ಪಣೇಸರ್ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದರು. "ಹಿರಿಯ ವೇಗಿಗಳಾದ ಜೇಮ್ಸ್ ಅಂಡರ್ಸನ್‌ ಹಾಗೂ ಸ್ಟುವರ್ಟ್ ಬ್ರಾಡ್‌ ಅವರು ಈ ವರ್ಷ ಅತ್ಯಂತ ಪರಿಣಾಮಕಾರಿಯಾಗಿದ್ದಾರೆ. ಆದರೆ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ ಇಸಿಬಿ ಇಂಗ್ಲೆಂಡ್‌ ಬಿ ತಂಡವನ್ನು ಆಯ್ಕೆ ಮಾಡಿದೆ. ಹಲವು ಹಿರಿಯ ಆಟಗಾರರ ಅನಪಸ್ಥಿತಿಯಲ್ಲಿ ಇಂಗ್ಲೆಂಡ್‌ ಪ್ರದರ್ಶನ ಹೇಗಿರಲಿದೆ ಎಂಬು ನೋಡುವುದು ತುಂಬಾ ಕುತೂಹಲ ಕೆರಳಿಸಿದೆ," ಎಂದು ತಿಳಿಸಿದರು. "ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಇನ್ನು ಒಂದು ವಾರ ಸಮಯವಿದೆ ಎಂದು ನೀವು ಹೆಳಿದರೆ, ನಾನು ಟೀಮ್‌ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿ ಆಯ್ಕೆ ಮಾಡುತ್ತೇನೆ. ಯಾವುದೇ ಸನ್ನಿವೇಶದಲ್ಲಿ ಗೆಲ್ಲುವ ಸಾಮರ್ಥ್ಯ ಭಾರತಕ್ಕಿದೆ. ಆದರೆ, ನ್ಯೂಜಿಲೆಂಡ್‌ಗೂ ಇದೇ ಸಾಮರ್ಥ್ಯವಿದೆ. ಆದರೆ, ಭಾರತ ತಂಡದಂತೆ ಕಠಿಣ ಪಂದ್ಯಗಳಲ್ಲಿ ಕಿವೀಸ್‌ ಗೆದ್ದಿಲ್ಲ," ಎಂದು ಪಣೇಸರ್ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yAiA7d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...