ಲಾಕ್‌ಡೌನ್‌ನಿಂದ ಕೊಳೆಯುತ್ತಿದೆ ಟನ್‌ಗಟ್ಟಲೆ ಬೆಳೆ: ರೈತರಿಗೆ ಮಾರ್ಕೆಟ್‌ ಇಲ್ಲ, ಗ್ರಾಹಕರಿಗೆ ಲಭ್ಯವಿಲ್ಲ..!

ಕೊರೊನಾ ವೈರಸ್‌ನಿಂದ ಸೃಷ್ಟಿಯಾಗಿರುವ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ಸೋಂಕು ನಿಗ್ರಹಕ್ಕೆ ಹೇರಲಾಗಿರುವ , ಆರ್ಥಿಕವಾಗಿ ಬಹುದೊಡ್ಡ ಹೊಡೆತವನ್ನೇ ನೀಡಿದೆ. ರೈತರಂತೂ ದಿಕ್ಕೇ ತೋಚದಂತಾಗಿದ್ದಾರೆ. ರೈತರು ಬೆಳೆ ಜಮೀನಿನಲ್ಲೇ ಕೊಳೆಯುವಂತಾಗಿದೆ. ಸಾಲ ಸೋಲ ಮಾಡಿ ಬೆಳೆ ಬೆಳೆದ ಅನ್ನದಾತ, ಇದೀಗ ದಿಕ್ಕೆಟ್ಟಿದ್ದಾನೆ. ಉತ್ತಮ ಮಳೆಯಿಂದಾಗಿ ಉತ್ತಮ ಬೆಳೆ ಬಂದಿದೆ. ಆದ್ರೆ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಯೇ ಇಲ್ಲದಂತಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಸಾಗಣೆ ಮಾಡೋದೇ ದುಸ್ತರವಾಗಿದೆ. ಹೇಗೋ ಹರಸಾಹಸ ಪಟ್ಟು ಕಟಾವು ಮಾಡಿ ಸಾಗಣೆ ಮಾಡಿದ್ರೂ ಕೂಡಾ ಮಾರುಕಟ್ಟೆಯಲ್ಲಿ ಸಾಗಣೆ ವೆಚ್ಚವೂ ಸಿಗದಂತಾಗಿದೆ. ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಇರುವ ರೈತರೇ ಸಿಗದೆ ಕಂಗಾಲಾಗಿರುವಾಗ ಕುಗ್ರಾಮಗಳ ರೈತರ ಪಾಡು ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರ ದೇವನಹಳ್ಳಿ ತಾಲ್ಲೂಕು, ಪುರ ಗ್ರಾಮದಲ್ಲಿ ಬರೋಬ್ಬರಿ 3 ಟನ್ ದ್ರಾಕ್ಷಿ ಬೆಳೆದಿರುವ ಪಿಳ್ಳೆಗೌಡ ಅವರು, ಇದೀಗ ಮಾರುಕಟ್ಟೆ ಇಲ್ಲದೆ ತಮ್ಮ ಬೆಳೆಯನ್ನು ಕಟಾವು ಕೂಡಾ ಮಾಡಲು ಸಾಧ್ಯವಾಗದೆ ಕಂಗೆಟ್ಟಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂಥಾ ಪರಿಸ್ಥಿತಿ ಅವರದ್ದಾಗಿದೆ. ಅನ್ನದಾತರ ಇಂಥಾ ಸಂಕಷ್ಟಕರ ಸನ್ನಿವೇಶಕ್ಕೆ ರಾಜ್ಯಾದ್ಯಂತ ಸಾವಿರ ಸಾವಿರ ಉದಾಹರಣೆಗಳಿವೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗಬೇಕು, ಅನ್ನದಾತ ಆರ್ಥಿಕ ಸಂಕಷ್ಟಕ್ಕೆ ಸಿಲುಕದೆ ಗೌರವಯುತವಾಗಿ ಬದುಕುವಂತಾಗಬೇಕು ಎಂಬ ಕಾರಣಕ್ಕೆ ರೈತ ಮುಖಂಡ ದಿವಂಗತ ನಂಜುಂಡಸ್ವಾಮಿ ಅವರ ಮಗ ಪಚ್ಚೆ ನಂಜುಂಡಸ್ವಾಮಿ ಅವರು ತಮ್ಮ ಗೆಳೆಯರ ಜೊತೆಗೂಡಿ 'ರೈತರಿಂದ ನೇರ ಗ್ರಾಹಕರಿಗೆ' ಎಂಬ ಫೇಸ್‌ಬುಕ್ ಪುಟ ಆರಂಭಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಮ್ಮ ಬೆಳೆಗೆ ಮಾರುಕಟ್ಟೆ ಸಿಗದ ಎಷ್ಟೋ ರೈತರು ಈ ಪುಟದಲ್ಲಿ ತಾವು ಬೆಳೆದ ಬೆಳೆಯ ವಿವರಗಳನ್ನು ನಮೂದಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲೇ ಗ್ರಾಹಕರನ್ನು ಹುಡುಕಿಕೊಳ್ಳುತ್ತಿದ್ದಾರೆ. ಈ ರೀತಿಯ ಹಲವು ಪೋಸ್ಟ್‌ಗಳು ಈ ಗ್ರೂಪ್‌ನಲ್ಲಿ ಲಭ್ಯವಾಗುತ್ತವೆ. ಹತ್ತಾರು ಎಕರೆ ಪ್ರದೇಶದಲ್ಲಿ ಹೂ, ಹಣ್ಣು, ತರಕಾರಿ ಬೆಳೆದವರು ಈ ಫೇಸ್‌ಬುಕ್ ಗ್ರೂಪ್‌ನಲ್ಲಿ ತಮ್ಮ ಬೆಳೆಯ ವಿವರವನ್ನು ನಮೂದಿಸಬಹುದಾಗಿದೆ. ಎಲ್ಲರಿಗೂ ಮಾರುಕಟ್ಟೆ ಲಭ್ಯವಾಗುತ್ತೆ ಎಂಬ ಭರವಸೆ ಕೊಡಲು ಸಾಧ್ಯವಿಲ್ಲವಾದ್ರೂ, ಧನಾತ್ಮಕ ಮನೋಭಾವದಿಂದ ಒಂದು ಪ್ರಯತ್ನ ಮಾಡಬಹುದು. ಇದೇ ರೀತಿಯ ಮತ್ತೊಂದು ಗ್ರೂಪ್‌ ಕೂಡಾ ರೈತರಿಗಾಗಿ ಇದೆ. 'ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ' ಎಂಬ ಫೇಸ್‌ಬುಕ್ ಪುಟ ಕೂಡಾ ಇದೇ ರೀತಿಯ ಕೆಲಸವನ್ನು ಮಾಡ್ತಿದೆ. ಈ ಪುಟದ ಮೂಲಕ ರೈತರು ತಮ್ಮ ಬೆಳೆಯ ವಿವರ ನೀಡಿ ಮಾರುಕಟ್ಟೆ ಹುಡುಕಿಕೊಳ್ಳಬಹುದಾಗಿದೆ. ಕಳೆದ ವರ್ಷ ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಈ ಪುಟದ ವ್ಯವಸ್ಥಾಪಕರು 'ಯುವಶಕ್ತಿ' ಎಂಬ ಸಂಘಟನೆ ಮೂಲಕ ನಗರ ಪ್ರದೇಶಗಳಲ್ಲಿ ಅಪಾರ್ಟ್‌ಮೆಂಟ್‌ ವಾಸಿಗಳನ್ನೇ ಗುರಿಯಾಗಿಸಿ ಮಾರುಕಟ್ಟೆ ಸೃಷ್ಟಿಸುವ ಕೆಲಸ ಮಾಡಿದ್ದನ್ನು ಸ್ಮರಿಸಬಹುದು. ಲಾಕ್‌ಡೌನ್‌ನಿಂದಾಗಿ ನಗರ ಪ್ರದೇಶದಲ್ಲಿ ಮನೆಯಲ್ಲೇ ಕುಳಿತಿರುವ ಜನರಿಗೆ, ಹಣ್ಣು-ತರಕಾರಿಗಳು ಸಿಗುತ್ತಿಲ್ಲ. ಪ್ರತಿಯೊಂದು ಹಣ್ಣು-ತರಕಾರಿಗೂ ದುಪ್ಪಟ್ಟು ಬೆಲೆ ನಿಗದಿಯಾಗಿದೆ. ಇತ್ತ ಗ್ರಾಮೀಣ ಭಾಗದಲ್ಲಿ ಕೃಷಿಕರು ಬೆಳೆದ ಬೆಳೆಗೆ ಮಾರುಕಟ್ಟೆಯೇ ಇಲ್ಲ. ಅತ್ತ ಗ್ರಾಹಕನಿಗೂ ಲಾಭವಿಲ್ಲ, ಇತ್ತ ಕೃಷಿಕನಿಗೂ ಹಣವಿಲ್ಲ. ಈ ರೀತಿಯ ಅತಂತ್ರ ಪರಿಸ್ಥಿತಿಗೆ ಕೂಡಲೇ ಮಾರ್ಗೋಪಾಯ ಕಂಡುಕೊಳ್ಳಬೇಕಾದ್ದು ಸದ್ಯದ ಅಗತ್ಯತೆ.


from India & World News in Kannada | VK Polls https://ift.tt/3vkA99y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...