ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣ ದಿಢೀರ್ ಅಚ್ಚರಿಯ ತಿರುವು ಪಡೆದುಕೊಂಡಿದೆ. ರಾಜ್ಯಾದ್ಯಂತ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗಿದ್ದ ಲೈಂಗಿಕ ಸಿ.ಡಿಯಲ್ಲಿರುವ ವ್ಯಕ್ತಿ ನಾನಲ್ಲ ಎಂದು ಪದೇ ಪದೇ ವಾದ ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಇದೀಗ ಉಲ್ಟಾ ಹೊಡೆದಿದ್ದಾರೆ. ಬದಲಾಗಿ ಯುವತಿ ಜೊತೆಗಿದ್ದ ಆ ವ್ಯಕ್ತಿ ನಾನೇ, ನಮ್ಮದು ಒಪ್ಪಿದ ಸಂಬಂಧ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೆ ಕೆಡವಿದ್ದಾರೆ. ಅಷ್ಟಕ್ಕೂ ರಮೇಶ್ ಈ ನಡೆಯ ಹಿಂದಿರುವ ಮರ್ಮವೇನು? ಎಂಬುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಲೈಂಗಿಕ ಕ್ರಿಯೆ ದೃಶ್ಯಾವಳಿಗಳನ್ನು ಹೊಂದಿದ್ದ ಸಿ.ಡಿ ಬಿಡುಗಡೆಯಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ತಮ್ಮ ಮೇಲಿರುವ ಆರೋಪವನ್ನು ನಿರಾಕರಣೆ ಮಾಡಿದ್ದರು. ಇದು ಫೇಕ್ ಸಿ.ಡಿ, ಹನಿಟ್ರ್ಯಾಪ್ ಎಂದೆಲ್ಲಾ ಹೇಳಿಕೆ ಕೊಟ್ಟರು. ಯಾವುದೇ ಕಾರಣಕ್ಕೂ ಆ ಸಿ.ಡಿಯಲ್ಲಿರುವ ದೃಶ್ಯಾವಳಿಗಳು ನನ್ನದಲ್ಲ, ತಂತ್ರಜ್ಞಾನ ಬಳಕೆ ಮಾಡಿ ನಕಲಿ ಸೃಷ್ಟಿ ಮಾಡಲಾಗಿದೆ ಎಂದೆಲ್ಲಾ ಹೇಳಿಕೆ ಕೊಟ್ಟರು. ಈ ನಡುವೆ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಅಲ್ಲದೆ ಎಸ್ಐಟಿ ಮುಂದೆಯೂ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಇದರಲ್ಲಿ ರಮೇಶ್ ಜಾರಕಿಹೊಳಿ ಉದ್ಯೋಗ ಕೊಡಿಸುವುದಾಗಿ ವಂಚಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಆದರೆ ಈ ಆರೋಪವನ್ನು ರಮೇಶ್ ನಿರಾಕರಿಸಿದ್ದರು. ಈ ನಡುವೆ ಕೋವಿಡ್ ಲಾಕ್ಡೌನ್ ಜಾರಿಗೊಂಡ ಹಿನ್ನೆಲೆಯಲ್ಲಿ ಸಿ.ಡಿ ಪ್ರಕರಣ ಸದ್ದು ಕಡಿಮೆಯಾಯಿತು. ಆದರೆ ತೆರೆಮರೆಯಲ್ಲಿ ತನಿಖೆಗಳು, ಬೆಳವಣಿಗೆಗಳು ನಡೆಯುತ್ತಲೇ ಇದ್ದವು. ಕೆಲವು ದಿನಗಳ ಹಿಂದೆ ಸಿ.ಡಿ ಯುವತಿ ಪ್ರಕರಣವನ್ನು ಹಿಂದಕ್ಕೆ ಪಡೆಯುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಸ್ವತಃ ಯುವತಿ ಹಾಗೂ ಅವರ ಪರವಾಗಿರುವ ವಕೀಲರು ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ದಿಢೀರ್ ಬೆಳವಣಿಗೆಗಳು ನಡೆದಿದ್ದು ಎಸ್ಐಟಿ ಮುಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿಯಲ್ಲಿರುವ ವ್ಯಕ್ತಿ ನಾನೇ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳು ಇರಬಹುದು. ಈಗಾಗಲೇ ಸಿ.ಡಿ ವಿಚಾರ ರಮೇಶ್ ಜಾರಕಿಹೊಳಿ ರಾಜಕೀಯ ಭವಿಷ್ಯಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ಸುದೀರ್ಘ ಸಮಯ ನಡೆಯಬಹುದು. ಇದು ಅವರ ರಾಜಕೀಯ ಭವಿಷ್ಯಕ್ಕೂ ಮಾರಕವಾಗಬಹುದು. ಒಂದು ವೇಳೆ ಅತ್ಯಾಚಾರ ಆರೋಪ ಸಾಬೀತಾದಲ್ಲಿ ರಾಜಕೀಯ ಭವಿಷ್ಯವೇ ಮುಕ್ತಾಯವಾಗಬಹುದು. ಈ ನಿಟ್ಟಿನಲ್ಲಿ ಪ್ರಕರಣವನ್ನು ಆದಷ್ಟು ಬೇಗ ಸಂಧಾನದ ಮೂಲಕ ಮುಕ್ತಾಯಗೊಳಿಸುವುದು ವಾಸಿ ಎಂಬ ಅಭಿಪ್ರಾಯ ರಮೇಶ್ ಜಾರಕಿಹೊಳಿ ಪರ ಕಾನೂನು ತಜ್ಞರು ನೀಡಿರುವ ಸಾಧ್ಯತೆ ಇದೆ. ಸದ್ಯ ಯುವತಿಯ ಹೇಳಿಕೆ ಅಧಿಕೃತವಾಗಿ ದಾಖಲಾಗಿರುವುದರಿಂದ ಇದನ್ನು ಫೇಕ್ ಸಿಡಿ ಎಂದು ಸುಲಭದಲ್ಲಿ ಹೇಳಿ ಬಿಡಲು ಸಾಧ್ಯವಿಲ್ಲ. ಈಗಾಗಲೇ ರಾಜಕೀಯವಾಗಿ ಈ ಪ್ರಕರಣ ತಿರುಪಡೆದುಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ನೇರವಾಗಿ ಆರೋಪ ಮಾಡಿದ್ದರಿಂದ ಪ್ರಕರಣ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಪರವಾಗಿ ತನಿಖಾ ವರದಿ ಬಂದರೆ ಅದು ರಾಜಕೀಯ ಚರ್ಚೆಗೆ ಗ್ರಾಸವಾಗಬಹುದು. ಈ ಎಲ್ಲಾ ನಿಟ್ಟಿನಲ್ಲಿ ಪ್ರಕರಣವನ್ನು ಸಂಧಾನದ ಮೂಲಕ ಮುಕ್ತಾಯಗೊಳಿಸುವ ಪ್ರಯತ್ನದ ಭಾಗವಾಗಿಯೇ ರಮೇಶ್ ಜಾರಕಿಹೊಳಿ ಈ ರೀತಿಯ ಹೇಳಿಕೆಯನ್ನು ನೀಡಿರುವ ಸಾಧ್ಯತೆ ಇದೆ. ಈ ಮೂಲಕ ಸಮ್ಮತಿ ಸಂಬಂಧ ಎಂದು ಇಬ್ಬರು ಒಪ್ಪಿಕೊಂಡಲ್ಲಿ ಪ್ರಕರಣ ಸುಖಾಂತ್ಯ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಯುವತಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ.
from India & World News in Kannada | VK Polls https://ift.tt/3oMAnUe