ಹೊಸದಿಲ್ಲಿ: ಬೆಡ್‌ ಸಿಗದೆ ಕಾರಿನಲ್ಲೇ ನರಳಿ ಪ್ರಾಣಬಿಟ್ಟ ಸೋಂಕಿತೆ, 3 ಗಂಟೆ ಆಸ್ಪತ್ರೆ ಹೊರೆಗೆ ಕಾದು ಕುಳಿತರು ಸಿಕ್ಕಿಲ್ಲ ಬೆಡ್‌!

ಹೊಸದಿಲ್ಲಿ: ಕೊರೊನಾ ಸೋಂಕಿತರಿಗೆ ಸಕಾಲಕ್ಕೆ ಬೆಡ್‌, ಸಿಗದೆ ಆಸ್ಪತ್ರೆ ಮುಂಭಾಗವೇ ನರಳಾಡಿ ಪ್ರಾಣಬಿಡುವ ಕರುಣಾಜನಕ ಕಥೆಗಳ ಸಾಲಿಗೆ ನೋಯ್ಡಾದ ಘಟನೆ ಸೇರ್ಪಡೆಯಾಗಿದೆ. ನೋಯ್ಡಾದಲ್ಲಿಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಜಾಗೃತಿ ಗುಪ್ತಾ ಅವರು ಇಲ್ಲಿನ ಜಿಐಎಂಎಸ್‌ ಆಸ್ಪತ್ರೆಯಲ್ಲಿ ಸಿಗದ ಕಾರಣ ಕಾರಿನಲ್ಲಿಯೇ ಮೂರು ಗಂಟೆ ಕಾದು ಕೊನೆಗೆ ಕುಳಿತಲ್ಲೇ ಪ್ರಾಣಬಿಟ್ಟಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಜಾಗೃತಿ ಗುಪ್ತಾ ಅವರ ಜತೆಗಿದ್ದ ಕೇರ್‌ಟೇಕರ್‌ ಆಸ್ಪತ್ರೆಗೆ ದೌಡಾಯಿಸಿ ನಮ್ಮವರು ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ದಯವಿಟ್ಟು ಬೆಡ್‌ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಸಿಬ್ಬಂದಿ, ''ನಾವು ಅಸಹಾಯಕರಾಗಿದ್ದೇವೆ,'' ಎಂದು ಕೈಚಲ್ಲಿದರು. ಕೆಲ ಹೊತ್ತಿನ ಬಳಿಕ ಕೇರ್‌ ಟೇಕರ್‌ ಕಾರಿನತ್ತ ಬಂದು ನೋಡಿದಾಗ, ಜಾಗೃತಿ ಗುಪ್ತಾ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅದಾಗಿ ಸ್ವಲ್ಪ ಹೊತ್ತಿನ ಬಳಿಕ ಆಸ್ಪತ್ರೆ ಸಿಬ್ಬಂದಿ ಬಂದು ಪರೀಕ್ಷಿಸುವ ಹೊತ್ತಿಗೆ ಅವರು ಪ್ರಾಣಬಿಟ್ಟಿದ್ದರು. ಜಾಗೃತಿ ಅವರ ಪತಿ ಹಾಗೂ ಇಬ್ಬರು ಮಕ್ಕಳು ಮಧ್ಯಪ್ರದೇಶದಲ್ಲಿದ್ದು, ಸಾವಿನ ಕೊನೆ ಕ್ಷಣದಲ್ಲಿ ಕುಟುಂಬದ ಒಬ್ಬ ಸದಸ್ಯರೂ ಅವರ ಜತೆಗಿರಲಿಲ್ಲ. ಪ್ರಾಣವಾಯುವಿಗೇ ಪ್ರಾಣ ಬಲಿ ಹೊಸದಿಲ್ಲಿ: ಆಕ್ಸಿಜನ್‌ ಸಿಗದೇ ಕೋವಿಡ್‌ ಸೋಂಕಿತರು ಪ್ರಾಣ ಕಳೆದುಕೊಳ್ಳುವ ದುರಂತಗಳ ಸರಮಾಲೆ ದಿಲ್ಲಿಯಲ್ಲಿ ಮುಂದುವರಿದಿದೆ. ಪ್ರಾಣವಾಯು ಕೊರತೆಯಿಂದ ದಕ್ಷಿಣ ದಿಲ್ಲಿಯ ಬಾತ್ರಾ ಆಸ್ಪತ್ರೆಯಲ್ಲಿಒಬ್ಬ ತಜ್ಞ ವೈದ್ಯರು ಸೇರಿ 12 ಸೋಂಕಿತರು ಶನಿವಾರ ಮೃತಪಟ್ಟಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸೂಕ್ತ ಸಮಯಕ್ಕೆ ಆಮ್ಲಜನಕ ಪೂರೈಕೆ ಆಗದಿರುವುದೇ ಈ ದುರಂತಕ್ಕೆ ಕಾರಣವೆಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. ದಿಲ್ಲಿಯ ಆಸ್ಪತ್ರೆಗಳಲ್ಲಿಆಕ್ಸಿಜನ್‌ ಸಿಗದೇ ಪೂರೈಕೆಯಲ್ಲಿನ ವ್ಯತ್ಯಾಸದಿಂದ ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ದುರ್ಘಟನೆಗಳಿಂದ ಮೃತಪಟ್ಟವರ ಸಂಖ್ಯೆ 60ರ ಗಡಿ ದಾಟಿದೆ. ಏ. 33ರಂದು ಗಂಗಾರಾಮ್‌ ಆಸ್ಪತ್ರೆಯಲ್ಲಿ 25, ಏಪ್ರಿಲ್‌ 24ರಂದು ಜೈಪುರ ಗೋಲ್ಡನ್‌ ಆಸ್ಪತ್ರೆಯಲ್ಲಿ 22 ಮಂದಿ ಸೋಂಕಿತರು ಆಕ್ಸಿಜನ್‌ ಸಿಗದೇ ಪ್ರಾಣ ಕಳೆದುಕೊಂಡಿದ್ದರು. ಈಗ ಇಂತಹ ದುರಂತಕ್ಕೆ ಬಾತ್ರಾ ಆಸ್ಪತ್ರೆ ಸೇರ್ಪಡೆಯಾಗಿದೆ. ಮೃತಪಟ್ಟವರಲ್ಲಿಆರು ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಳಿದವರು ಸಾಮಾನ್ಯ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆಯ ಪ್ರಯತ್ನಗಳ ನಡುವೆಯೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲಎಂದು ಡಾ. ಆರ್‌.ಕೆ. ಹಿಮಂತನಿ ಅವರು ಬಿಕ್ಕಟ್ಟಿನ ಸ್ಥಿತಿ ತೆರೆದಿಟ್ಟರು. ''ಶನಿವಾರ ಬೆಳಗ್ಗೆಯೇ ನಾವು ಆಸ್ಪತ್ರೆ ಸಂಗ್ರಹಾಗಾರದಲ್ಲಿ 2,500 ಲೀಟರ್‌ ಆಕ್ಸಿಜನ್‌ ಮಾತ್ರ ಇದ್ದು, ತುರ್ತಾಗಿ ಹೆಚ್ಚುವರಿ ಆಕ್ಸಿಜನ್‌ ಪೂರೈಸಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ 12.30ರ ಹೊತ್ತಿಗೆ ಬಹುತೇಕ ಆಕ್ಸಿಜನ್‌ ಖಾಲಿಯಾಗಿಬಿಟ್ಟಿತು. ಇದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿ ಸೋಂಕಿತರು ಪ್ರಾಣ ಕಳೆದುಕೊಳ್ಳುವಂತಾಯಿತು. ಮಧ್ಯಾಹ್ನ 1.35ರ ಹೊತ್ತಿಗೆ ಆಕ್ಸಿಜನ್‌ ಟ್ಯಾಂಕರ್‌ ಆಸ್ಪತ್ರೆಗೆ ಬಂದ ಬಳಿಕ ಪರಿಸ್ಥಿತಿ ಹತೋಟಿಗೆ ಬಂತು,'' ಎಂದು ಅವರು ವಿವರಿಸಿದರು. ಫೋರ್ಟಿಸ್‌ ಆಸ್ಪತ್ರೆ, ಸೆಹಗಲ್‌ ನಿಯೋ ಹಾಸ್ಪಿಟಲ್‌ ಹೀಗೆ ದಿಲ್ಲಿಯ ಬಹುತೇಕ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ-ಗಳಲ್ಲಿಆಕ್ಸಿಜನ್‌ ಕೊರತೆ ಶುರುವಾಗಿದೆ. ಪ್ರಾಣವಾಯು ಪೂರೈಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಪರಿಸ್ಥಿತಿ ಮಾತ್ರ ಇನ್ನೂ ಹತೋಟಿಗೆ ಬಂದಿಲ್ಲ.


from India & World News in Kannada | VK Polls https://ift.tt/3udjm7F

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...