ಗುಳೇ ಹೋಗಿದ್ದ ಕಾರ್ಮಿಕರು ವಾಪಸ್: ರಾಯಚೂರಿನಲ್ಲಿ 'ಮಹಾ' ವಲಸಿಗರಿಂದ ಕೊರೊನಾ ಭೀತಿ..!

ಜಗನ್ನಾಥ ಆರ್‌.ದೇಸಾಯಿ ರಾಯಚೂರು: ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಅಲ್ಲಿನ ಸರಕಾರ ಲಾಕ್‌ಡೌನ್‌ ಘೋಷಿಸಿದೆ. ಮುಂಬಯಿ ಸೇರಿದಂತೆ ಇತರ ಮಹಾನಗರಗಳಿಗೆ ಗುಳೆ ಹೋದ ಜಿಲ್ಲೆಯ ಸಾವಿರಾರು ಕೂಲಿಕಾರರು ತವರಿಗೆ ಮರಳುತ್ತಿದ್ದು ಸೋಂಕಿತರ ಗುರುತು ಪತ್ತೆಯೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಗಡಿಯಲ್ಲಿ ತಪಾಸಣೆಯ ಕಟ್ಟುನಿಟ್ಟು ಮಾಯವಾಗಿರುವುದು ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ನಿತ್ಯ 70 ರಿಂದ 100ರ ವರೆಗೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಳೆದ ತಿಂಗಳ ಮಧ್ಯ ಭಾಗದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 15 ರಿಂದ 20 ಆಗಿತ್ತು. ಆದರೆ, ಏಪ್ರಿಲ್‌ ಮೊದಲ ವಾರದಿಂದ ಏರುಮುಖವಾಗಿ ಸಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ಶನಿವಾರದ ಹೊತ್ತಿಗೆ 672ಕ್ಕೆ ಬಂದು ಸೇರಿದ್ದು ಆತಂಕ ಹೆಚ್ಚಿಸಿದೆ. ಇದುವರೆಗೆ ಜಿಲ್ಲೆಯಲ್ಲಿ 15,308 ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 14,478 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮಸ್ಕಿ ಉಪಚುನಾವಣೆಯಿಂದಾಗಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳದ ಆತಂಕ ಇಮ್ಮಡಿಗೊಂಡಿದೆ. ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ್ದ ನಾಯಕರಲ್ಲಿ ಅನೇಕರು ಈಗಾಗಲೇ ಪಾಸಿಟಿವ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಚಾರ ಸಭೆಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು ಕೊರೊನಾ ಸೋಂಕು ಹರಡುವಿಕೆಯ ಆತಂಕ ತಂದೊಡ್ಡಿದೆ. ಇದರ ಬೆನ್ನಲ್ಲೇ ಇದೀಗ ನೆರೆಯ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಮತ್ತೆ ಕೆಲವೆಡೆ ಬಿಗಿ ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ಗುಳೆ ಹೋಗಿದ್ದ ಕಾರ್ಮಿಕರು ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಸಲ ಮಹಾರಾಷ್ಟ್ರದ ಮುಂಬಯಿ, ಪುಣೆ, ಸೊಲ್ಲಾಪುರ ಮತ್ತಿತರ ನಗರಗಳಿಂದ ಜಿಲ್ಲೆಯ ಕಾರ್ಮಿಕರು ವಾಪಸಾದ ನಂತರದಲ್ಲಿಯೇ ಸೋಂಕಿತರು ಮೊದಲ ಬಾರಿ ಪತ್ತೆಯಾಗಿದ್ದರು. ಕಾಣದ ಕಟ್ಟುನಿಟ್ಟು: ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ವಿಜಯಪುರ, ಕಲಬುರಗಿ, ಬೀದರ್‌ ಜಿಲ್ಲೆಗಳ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ ಪೋಸ್ಟ್‌ ಗಳಲ್ಲಿ ಬಿಗಿ ಕ್ರಮ ಪಾಲಿಸುತ್ತಿಲ್ಲ. ಇದರಿಂದ ಸೋಂಕಿತರು ಅಲ್ಲಿಂದ ಪಾರಾಗಿ ಜಿಲ್ಲೆಗೆ ಆಗಮಿಸುವ ಆತಂಕ ಹೆಚ್ಚಾಗಿದೆ. ಕಳೆದ ಬಾರಿ ಕಾರ್ಮಿಕರು ವಾಹನಗಳಲ್ಲಿ ನೇರವಾಗಿ ದೇವದುರ್ಗ, ಲಿಂಗಸುಗೂರು, ಮಸ್ಕಿ ಮತ್ತಿತರೆ ತಾಲೂಕಿನ ಗ್ರಾಮಗಳಿಗೆ ಆಗಮಿಸಿದ್ದರು. ಅದರಿಂದಾಗಿ ಎಲ್ಲರನ್ನೂ ಆರೋಗ್ಯದ ತಪಾಸಣೆಗೊಳಪಡಿಸಲು ಸಾಧ್ಯವಾಗಿತ್ತು. ಆದರೆ ಈ ಸಲ ಕಾರ್ಮಿಕರು ತಪಾಸಣೆ ಕೇಂದ್ರಗಳ ಕಣ್ತಪ್ಪಿಸಿ ಗ್ರಾಮಗಳತ್ತ ಧಾವಿಸುತ್ತಿರುವುದು ಜಿಲ್ಲಾಡಳಿತಕ್ಕೆ ಸಮಸ್ಯೆಯಾಗಿದೆ. ಅದರಲ್ಲೂಇಡೀ ಜಿಲ್ಲಾಯಂತ್ರಾಂಗವು ಮಸ್ಕಿ ಉಪಚುನಾವಣೆಯಲ್ಲಿಯೇ ತೊಡಗಿರುವುದರಿಂದ ಗಡಿಯತ್ತ ಗಮನಕೊಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಉಪಚುನಾವಣೆಯ ನಂತರ ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕ ಕೊರೊನಾ ಪತ್ತೆ ಕಾರ್ಯಾಚರಣೆ ನಡೆಸುವ ಜತೆಗೆ ಗಡಿಯಲ್ಲಿಯೂ ಆಡಳಿತ ತಪಾಸಣೆ ಚುರುಕುಗೊಳಿಸಲು ಚಿಂತನೆ ನಡೆಸಿದ್ದು, ಗುಳೆ ಹೋಗಿರುವ ಕಾರ್ಮಿಕರನ್ನು ತಪಾಸಣೆಗೊಳಪಡಿಸಿದ ನಂತರವೇ ಪ್ರವೇಶಿಸಲು ಅನುಮತಿ ನೀಡುವ ಸಾಧ್ಯತೆಯಿದೆ. 'ಕೊರೊನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಸೇರಿ ನಾನಾ ರೀತಿಯ ಬಿಗಿ ಕ್ರಮ ಜಾರಿಗೆ ತರಲಾಗಿದೆ. ಅಲ್ಲಿ ವಾಸವಾಗಿರುವ ಜಿಲ್ಲೆಯ ಕಾರ್ಮಿಕರು ವಾಪಸಾಗುತ್ತಿದ್ದಾರೆ. ಆದರೆ ಅವರು ವಾಹನಗಳಲ್ಲಿ ನೇರವಾಗಿ ಬಾರದೇ ಬೇರೆ ಬೇರೆ ಮಾರ್ಗಗಳಿಂದ ಜಿಲ್ಲೆಗೆ ಆಗಮಿಸುತ್ತಿರುವುದು ಸೋಂಕಿತರ ಪತ್ತೆಗೆ ತೊಂದರೆಯಾಗುತ್ತಿದೆ. ಉಪಚುನಾವಣೆಯ ನಂತರ ಈ ಬಗ್ಗೆ ಗಂಭೀರವಾಗಿ ಗಮನಹರಿಸಲಾಗುತ್ತದೆ' ಎಂದು ಡಿಸಿ ಆರ್‌. ವೆಂಕಟೇಶ್‌ ಕುಮಾರ್‌ ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/32lKBAO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...