ಚೆನ್ನೈ: ಶ್ರೀಲಂಕಾ ಸ್ಪಿನ್ ದಂಕತೆ ಹಾಗೂ ತಂಡದ ಸ್ಪಿನ್ ಮೆಂಟರ್ ಆಗಿರುವ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅಪಧಮನಿಯನ್ನು ಅನಿರ್ಬಂಧಿಸಲು ಮಾಜಿ ಆಫ್-ಸ್ಪಿನ್ನರ್ಗೆ ಸ್ಟೆಂಟ್ ಅಳವಡಿಸಲಾಗಿದ್ದು, ಒಮ್ಮೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ಇಎಸ್ಪಿಎನ್ ಕ್ರಿನ್ಇನ್ಫೋ ವರದಿ ಮಾಡಿದೆ. "ಮುರಳಿಧರನ್ ಶ್ರೀಲಂಕಾದಲ್ಲಿ ಕೆಲವು ಸ್ಕ್ಯಾನ್ಗಳನ್ನು ಮಾಡಿಸಿಕೊಂಡಿದ್ದರು ಹಾಗೂ ಅವರು ಚೆನ್ನೈನಲ್ಲಿದ್ದಾಗ ಕೆಲವು ವೈದ್ಯರನ್ನು ಸಂಪರ್ಕಿಸಿದ್ದರು. ಕೆಲ ಕಾರ್ಯವಿಧಾನಕ್ಕೆ ಒಳಗಾಗಬೇಕೆಂದು ವೈದ್ಯರು ಸೂಚಿಸಿದ ಕಾರಣ ಸ್ಪಿನ್ ದಂತಕತೆ ಆಸ್ಪತ್ರೆಗೆ ದಾಖಲಾದರು," ಎಂದು ಎಸ್ಆರ್ಎಚ್ ಸಿಇಒ ಷಣ್ಮುಗಮ್ ಹೇಳಿರುವುದನ್ನು ಸ್ಪೋರ್ಟ್ಸ್ಸ್ಟಾರ್ ವರದಿ ಮಾಡಿದೆ. "ಅವರು ಖಂಡಿತವಾಗಿಯೂ ಆರೋಗ್ಯವಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ," ಎಂದು ಸಿಇಒ ತಿಳಿಸಿದ್ದಾರೆ. ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ವಾರ್ನರ್ ಪಡೆ ಸೋತು ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಏಪ್ರಿಲ್ 21 ರಂದು ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯವಾಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gmk66A