ಚನ್ನಗಿರಿ: ಆಸ್ತಿಯ ಸಲುವಾಗಿ ಸೊಸೆಯೇ ಸುಪಾರಿ ನೀಡುವ ಮೂಲಕ ಮಾವನನ್ನು ಕೊಲೆ ಮಾಡಿಸಿ ಸಿಕ್ಕಿಬಿದ್ದು ಜೈಲು ಪಾಲಾದ ಘಟನೆ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಶ್ರೀನಿವಾಸಪುರ ಗ್ರಾಮದ ವಾಸಿ ನಿವೃತ್ತ ಶಿಕ್ಷಕ ಚಿಕ್ಕಾನಾಯ್ಕ (65) ಮೃತ ವ್ಯಕ್ತಿಯಾಗಿದ್ದು, ಇವರ ಕೊಲೆಗೆ ಸುಪಾರಿ ನೀಡಿದ ಸೊಸೆ ವನಜಾಕ್ಷಿ, ಪ್ರಿಯಕರ ಮೇಸ್ತ್ರಿ ಹನುಮಂತಪ್ಪ ಹಾಗೂ ನಾಗರಾಜ್ ಬಂಧಿತ ಆರೋಪಿಗಳಾಗಿದ್ದಾರೆ. ನಿವೃತ್ತಿಯ ನಂತರ ಚಿಕ್ಕನಾಯ್ಕ ಶ್ರೀನಿವಾಸಪುರದಲ್ಲಿ ತಮ್ಮ ಹೆಂಡತಿ ಮಕ್ಕಳು ಸೊಸೆಯವರೊಂದಿಗೆ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರ ಹಿರಿಯ ಪುತ್ರ ಮನೋಹರ್ ಎನ್ನುವವರಿಗೆ ಮನೆಯನ್ನು ಕಟ್ಟಿಸುತ್ತಿದ್ದು, ಅದೇ ರೀತಿ ಎರಡನೇ ಮಗನಾದ ಸುರೇಶ್ ನಾಯ್ಕನಿಗೂ ಸಹ ಮನೆ ಕಟ್ಟಿಸಿ ಕೊಡಬೇಕು ಎಂದು ತೀರ್ಮಾನಿಸಿದ್ದರು. ಈ ಸಮಯದಲ್ಲಿ ದೊಡ್ಡ ಮಗನ ಸೊಸೆಯಾದ ವನಜಾಕ್ಷಿ ಎಂಬುವರು ಮನೆ ನಿರ್ಮಾಣ ಮಾಡುವ ಮೇಸ್ತ್ರಿ ಹನುಮಂತಪ್ಪನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಸುರೇಶ್ ನಾಯ್ಕನಿಗೆ ಮನೆ ಕಟ್ಟಿಸಿಕೊಟ್ಟರೆ ತನಗೆ ಆಸ್ತಿಯಲ್ಲಿ ಯಾವುದೇ ಹಣ ಸಿಗುವುದಿಲ್ಲ ಎಂದು ತೀರ್ಮಾನಿಸಿ, ತನ್ನ ಪ್ರಿಯಕರ ಹನುಮಂತಪ್ಪ ಮತ್ತು ಆತನ ಜತೆ ಕೆಲಸ ಮಾಡುತ್ತಿದ್ದ ನಾಗರಾಜ್ ಎನ್ನುವವರಿಗೆ 6 ಲಕ್ಷ ಕೊಡುವುದಾಗಿ ಹೇಳಿ ಮಾವನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಅದರಂತೆ ಹನುಮಂತಪ್ಪನಿಗೆ 1 ಲಕ್ಷ ಮುಂಗಡವಾಗಿ ನೀಡಿದ್ದು, ಈತ ಏಪ್ರಿಲ್ 4 ರಂದು ಚಿಕ್ಕನಾಯ್ಕ್ನನ್ನು ಸೀರೆ ಕುಣಿಕೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
from India & World News in Kannada | VK Polls https://ift.tt/2Q5kprH