ಬೆಂಗಳೂರು: ಜಮಖಂಡಿ ತಾಲೂಕಿನಲ್ಲಿ ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರನ್ನು ಕಲ್ಲು ಹೊಡೆದು ಹತ್ಯೆ ಮಾಡಿದ ಘಟನೆ ಅತ್ಯಂತ ಹೇಯಕರ ಎಂದು ಸಚಿವ ಖಂಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ರೊಬ್ಬರನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ ಎಂದಿದ್ದಾರೆ. ಜಮಖಂಡಿ ತಾಲ್ಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕ ನಬಿ ರಸೂಲ್ ಆವಟಿ(59) ಎಂಬುವವರನ್ನು ಅಪರಿಚಿತ ದುಷ್ಕರ್ಮಿಗಳು ಕಲ್ಲು ಹೊಡೆದು ಸಾಯಿಸಿದ್ದಾರೆ. ಮುಷ್ಕರದ ನಡುವೆಯೂ ಮೇಲಾಧಿಕಾರಿಗಳ ಕರೆಗೆ ಓಗೊಟ್ಟು ನಬಿ ರಸೂಲ್ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದರಿಂದ ಆಕ್ರೋಶಿತಗೊಂಡ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದೆ. ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣಾ ಬಾಜಪೇಯಿ ಜಮಖಂಡಿಯಲ್ಲಿರುವ ಮೃತಪಟ್ಟ ಚಾಲಕನ ಕುಟುಂಬದವರನ್ನು ಭೇಟಿ ಮಾಡಿ, ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತ ಚಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ 30 ಲಕ್ಷ ಪರಿಹಾರ ನೀಡಿದ್ದಾರೆ.
from India & World News in Kannada | VK Polls https://ift.tt/3dmrHzX