ಹೊಸದಿಲ್ಲಿ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಕೊರೊನಾ ಹಾಟ್ಸ್ಪಾಟ್ ಆಗಿ ಬದಲಾಗಿದೆ ಎನ್ನುವ ಆರೋಪಗಳ ಮಧ್ಯೆಯೇ ಇದೀಗ ಸ್ವತಃ ಪ್ರಧಾನಿ ಮೋದಿಯೇ ಕುಂಭಮೇಳದ ಸಂಬಂಧ ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಾರ್ಷಿಕ ಕುಂಭಮೇಳ ಸಾಂಕೇತಿಕವಾಗಿ ನಡೆಯಬೇಕು. ಇದು ಕೊರೊನಾದ ವಿರುದ್ಧ ಹೋರಾಟಕ್ಕೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಸಂಬಂಧ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಜೀ ಅವರೊಂದಿಗೆ ಫೋನ್ ಮೂಲಕ ಸಂಭಾಷಣೆ ನಡೆಸಿರುವುದಾಗಿ ತಿಳಿಸಿದ್ದಾರೆ. ಸ್ವಾಮಿ ಅವಧೇಶಾನಂದ ಗಿರಿ ಜೀ ಅವರೊಂದಿಗೆ ಇಂದು ಫೋನ್ ಮೂಲಕ ಮಾತನಾಡಿದ್ದಾನೆ. ಈ ವೇಳೆ ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಕುಂಭಮೇಳ ಹಾಗೂ ಕೊರೊನಾ ನಿಮಯಗಳ ಪಾಲನೆ ನಡೆಸಲು ಎಲ್ಲಾ ಸಂತರು ಅಲ್ಲಿನ ಆಡಳಿತ ವಿಭಾಗಕ್ಕೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ ಎಂದು ಮಾತುಕತೆ ನಡೆಸಿರುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೇ ನಾನು ಸ್ವಾಮೀಜಿ ಜೊತೆ ವಿನಂತಿ ಮಾಡಿಕೊಂಡಿದ್ದು, ಈಗಾಗಲೇ ಎರಡು ಸಾಹಿ ಸ್ನಾನಗಳು ನಡೆದಿದೆ. ಕೊರೊನಾದ ಸಂಕಟ ಸಮಯದಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಿಕೊಳ್ಳಿ ಎಂದು ಫೋನ್ ಮೂಲಕ ಮನವಿ ಮಾಡಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮನವಿಗೆ ಸ್ವಾಮೀಜಿ ಪ್ರತಿಕ್ರಿಯೆ! ಇನ್ನು ಕುಂಭಮೇಳದ ಸಂಬಂಧ ಪ್ರಧಾನಿ ಮೋದಿ ಮಾಡಿರುವ ಮನವಿಗೆ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಜೀ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಮಂತ್ರಿಯ ಮನವಿಯನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೋವಿಡ್ 19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿ ಸ್ನಾನಕ್ಕೆ ಬರದಂತೆ ನಾನು ವಿನಂತಿಸುತ್ತೇನೆ ಮತ್ತು ಎಲ್ಲಾ ನಿಯಮಗಳನ್ನು ಎಲ್ಲರು ಪಾಲಿಸುವಂತೆ ವಿನಂತಿಸುತ್ತೇನೆ ಎಂದಿದ್ದಾರೆ. ಹರಿದ್ವಾರ ಕುಂಭಮೇಳ ಕೊರೊನಾ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆ ಎನ್ನುವ ಆರೋಪವಿದೆ. ಕಳೆದ ಕೆಲವು ದಿನಗಳಿಂದ ಲಕ್ಷಾಂತರ ಜನರು ಹದರಿದ್ವಾರಕ್ಕೆ ಆಗಮಿಸಿದ್ದು ಸಾಮೂಹಿಕ ಸಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ಸಾಧು ಸಂತರಿಗೆ ಕೊರೊನಾ ದೃಢಪಟ್ಟಿದೆ. ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಕೋವಿಡ್ -19 ಪ್ರಕರಣಗಳು ಕಂಡು ಬಂದಿವೆ. ಅಲ್ಲದೇ ಈಗಾಗಲೇ ಒಬ್ಬರು ಸಾಧು ಕೊರೊನಾಗೆ ಬಲಿಯಾಗಿದ್ದಾರೆ.
from India & World News in Kannada | VK Polls https://ift.tt/2Qx7nTw