ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್‌.ವಿ. ರಮಣ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್‌.ವಿ. ರಮಣ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಕೊರೊನಾ ಕಾರಣಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಇವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಿವೃತ್ತ ಎಸ್‌.ಎ. ಬೊಬ್ಡೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ನ್ಯಾ. ರಮಣ, "ನಾವು ಕೊರೊನಾದೊಂದಿಗೆ ಹೋರಾಡುತ್ತಿದ್ದು, ಸವಾಲಿನ ಸಂದರ್ಭವನ್ನು ಎದುರಿಸುತ್ತಿದ್ದೇವೆ. ವಕೀಲರು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿ ವೈರಸ್‌ನಿಂದ ತೊಂದರೆಗೀಡಾಗಿದ್ದಾರೆ. ವೈರಾಣು ಹರಡುವಿಕೆ ತಡೆಗಟ್ಟಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ನಾವು ಒಟ್ಟಾಗಿ ಮಾತ್ರ ಈ ಬಿಕ್ಕಟ್ಟನ್ನು ಎದುರಿಸಬಹುದು,” ಎಂದು ಅವರು ಹೇಳಿದ್ದರು. ಇದಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ 6 ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡುವ ಸವಾಲು ಕೂಡ ನೂತನ ಮುಖ್ಯ ನ್ಯಾಯಮೂರ್ತಿ ಮುಂದಿದೆ. ನ್ಯಾ. ಬೊಬ್ಡೆ ಅವಧಿಯಲ್ಲಿ ಯಾವುದೇ ಹೊಸ ನೇಮಕಗಳೂ ನಡೆದಿರಲಿಲ್ಲ. ನ್ಯಾ. ರಮಣ ಅವರು ಆಂಧ್ರ ಪ್ರದೇಶ ಮೂಲದವರಾಗಿದ್ದು, 1957 ಆಗಸ್ಟ್‌ 27ರಂದು ಕೃಷ್ಣ ಜಿಲ್ಲೆಯ ಕೃಷಿ ಕುಟುಂಬವೊಂದರಲ್ಲಿ ಇವರು ಜನಿಸಿದರು. 4 ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಇವರು ಆಂಧ್ರ ಪ್ರದೇಶ ಹೈಕೋರ್ಟ್‌, ಕೇಂದ್ರ ಮತ್ತು ಆಂಧ್ರ ಪ್ರದೇಶದ ಆಡಳಿತ ನ್ಯಾಯಾಧೀಕರಣಗಳಲ್ಲಿ ವಾದ ಮಂಡಿಸಿದ ಇತಿಹಾಸ ಹೊಂದಿದ್ದಾರೆ. ಜತೆಗೆ ಸುಪ್ರೀಂ ಕೋರ್ಟ್‌ನಲ್ಲಿಯೂ, ಸಿವಿಲ್‌, ಕ್ರಿಮಿನಲ್‌, ಕಾರ್ಮಿಕ, ಸೇವೆ, ಸಂವಿಧಾನ ಹಾಗೂ ಚುನಾವಣಾ ಸಂಬಂಧ ಹಲವು ಪ್ರಕರಣಗಳಲ್ಲಿ ಹಾಜರಾಗಿದ್ದರು. ಸಂವಿಧಾನ, ಕ್ರಿಮಿನಲ್‌, ಸೇವೆ ಮತ್ತು ಅಂತಾರಾಜ್ಯ ಜಲ ಕಾನೂನುಗಳಲ್ಲಿಯೂ ಇವರಿಗೆ ವಿಶೇಷ ಪರಿಣತಿಯಿದೆ. ಜೂನ್‌ 27, 2000ನೇ ಇಸವಿಯಲ್ಲಿ ಇವರನ್ನು ಆಂಧ್ರ ಪ್ರದೇಶ ಹೈಕೋರ್ಟ್‌ನ ಶಾಶ್ವತ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. 2013ರ ಮಾರ್ಚ್‌ 10ರಿಂದ ಮೇ 10ರವರೆಗೆ ಇವರು ಆಂಧ್ರ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿದ್ದರು. ನಂತರ 2013ರಲ್ಲಿ ದಿಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಇವರಿಗೆ ಪದೋನ್ನತಿ ನೀಡಲಾಯಿತು. ಬಳಿಕ 2014ರಲ್ಲಿ ಬಳಿಕ 2014ರಲ್ಲಿ ನ್ಯಾಯಮೂರ್ತಿಯಾಗಿ ನ್ಯಾ. ರಮಣ ನೇಮಕಗೊಂಡರು. 63 ವರ್ಷ ವಯಸ್ಸಿನ ನ್ಯಾ. ರಮಣ ಅವರು ಸುಪ್ರೀಂ ಕೋರ್ಟ್‌ನಲ್ಲಿದ್ದಾಗ ಹಲವು ಮಹತ್ವದ ಆದೇಶ ಹೊರಡಿಸಿದ ಪೀಠಗಳ ಭಾಗವಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್‌ ರದ್ದುಗೊಳಿಸಿದ್ದನ್ನು ತಕ್ಷಣವೇ ಮರು ಪರಿಶೀಲನೆ ಮಾಡಬೇಕು ಎಂದು ಆದೇಶ ಹೊರಡಿಸಿದ ಪೀಠದಲ್ಲೂ ಇವರಿದ್ದರು. ಸಿಜೆಐ ಕಚೇರಿ ಆರ್‌ಟಿಐ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆದೇಶ ನೀಡಿದ ಪೀಠದಲ್ಲೂ ನ್ಯಾ. ರಮಣ ಒಬ್ಬರಾಗಿದ್ದರು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೇರುವ ಮೂಲಕ ಈ ಹುದ್ದೆ ಅಲಂಕರಿಸಿದ ಆಂಧ್ರ ಪ್ರದೇಶದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಎನ್‌.ವಿ. ರಮಣ ಪಾತ್ರರಾಗಿದ್ದಾರೆ. ಈ ಹಿಂದೆ ಆಂಧ್ರದ ಜಸ್ಟೀಸ್‌ ಕೆ. ಸುಬ್ಬ ರಾವ್‌ 1966 ರಿಂದ 67ನೇ ಅವಧಿಗೆ ಸಿಜೆಐ ಆಗಿದ್ದರು. ನ್ಯಾಯಮೂರ್ತಿ ಅವರು ಆಗಸ್ಟ್‌ 26, 2022ರವರೆಗೆ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಇರಲಿದ್ದು, ಒಂದು ವರ್ಷ ನಾಲ್ಕು ತಿಂಗಳ ಕಾಲ ಸಿಜೆಐ ಹುದ್ದೆ ನಿಭಾಯಿಸಲಿದ್ದಾರೆ.


from India & World News in Kannada | VK Polls https://ift.tt/2QvWTEn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...