ಸಂಜು ಸ್ಯಾಮ್ಸನ್‌ ಭಾರತ ತಂಡದಲ್ಲಿ ಆಡದೆ ಇರಲು ಕಾರಣ ತಿಳಿಸಿದ ಗವಾಸ್ಕರ್!

ಮುಂಬೈ: ಪಂಜಾಬ್‌ ಕಿಂಗ್ಸ್ ವಿರುದ್ಧ ಭರ್ಜರಿ ಶತಕದ ಮೂಲಕ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಫಾರ್ಮ್‌ಗೆ ಬಂದಿದ್ದ ರಾಜಸ್ಥಾನ್‌ ರಾಯಲ್ಸ್ ನಾಯಕ , ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕುರಿತು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಆವೃತ್ತಿಯ ಟೂರ್ನಿಯ ಆರಂಭಿಕ ಪಂದ್ಯದ ಬಳಿಕ ಆಡಿದ ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ ಕ್ರಮವಾಗಿ 4, 1 ಹಾಗೂ 21 ರನ್‌ ಗಳಿಸುವ ಮೂಲಕ ವೈಫಲ್ಯ ಅನುಭವಿಸಿದ್ದಾರೆ. ಸಂಜು ಸ್ಯಾಮ್ಸನ್‌ ಅವರ ವೈಯಕ್ತಿಕ ಪ್ರದರ್ಶನವಲ್ಲದೆ, ರಾಜಸ್ಥಾನ್‌ ರಾಯಲ್ಸ್ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಲು ಇದೂ ಒಂದು ಕಾರಣವಾಗಿದೆ. ಆರ್‌ಸಿಬಿ ವಿರುದ್ಧ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ ಕೇವಲ 18 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಸಂಜು ಸ್ಯಾಮ್ಸನ್‌, ಎರಡು ಬೌಂಡರಿ ಹಾಗೂ ವಾಷಿಂಗ್ಟನ್‌ ಸುಂದರ್‌ಗೆ ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಆ ಮೂಲಕ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು. ಆದರೆ, ಸಿಕ್ಸ್‌ ಹೊಡೆದ ಮುಂದಿನ ಎಸೆತದಲ್ಲಿಯೇ ಸಂಜು, ಕೊಹ್ಲಿಗೆ ಸುಲಭ ಕ್ಯಾಚ್‌ ನೀಡಿದರು. ಅತ್ಯಂತ ಕಡಿಮೆ ರನ್‌ಗಳಿಗೆ ಔಟ್‌ ಆಗುವ ಹಾಗೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿರುವ ಸಂಜು ಸ್ಯಾಮ್ಸನ್‌ ಅವರಿಗೆ ಮಾತ್ರವಲ್ಲ ರಾಜಸ್ಥಾನ್‌ ರಾಯಲ್ಸ್ ತಂಡಕ್ಕೂ ಭಾರಿ ಹಿನ್ನಡೆಯಾಗುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಹೇಳಿದ್ದಾರೆ. "ಮೊದಲನೇ ಅಂಶ ಏನೆಂದರೆ, ನಾಯಕನಾದವನು ತಾನೇ ಮುಂದೆ ನಿಂತು ಆಡಬೇಕು. ಮೊದಲನೇ ಪಂದ್ಯದಲ್ಲಿ ಈ ಆಟವನ್ನು ಅವರು ಮಾಡಿದ್ದರು. ಆದರೆ, ಅದನ್ನು ಮುಂದುವರಿಸುವ ಹಾಗೂ ಸ್ಥಿರ ಪ್ರದರ್ಶನ ತೋರುವ ವಿಚಾರದಲ್ಲಿ ಈತನಲ್ಲಿ ಸಮಸ್ಯೆ ಇದೆ. ಈ ಕಾರಣದಿಂದಲೇ ಸಂಜು ಸ್ಯಾಮ್ಸನ್‌ ಟೀಮ್‌ ಇಂಡಿಯಾದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿಸಿದರೆ ಸಾಲದು, ಅದನ್ನು ಪ್ರತಿಯೊಂದು ಪಂದ್ಯದಲ್ಲಿಯೂ ಮುಂದುವರಿಸಬೇಕು," ಎಂದು ಗವಾಸ್ಕರ್‌ ತಿಳಿಸಿದರು. ರಾಜಸ್ಥಾನ್‌ ರಾಯಲ್ಸ್ ಉತ್ತಮ ಮೊತ್ತ ಕಲೆ ಹಾಕುವ ಸಾಧ್ಯತೆಗಳಲ್ಲಿ ನಾಯಕ ಸಂಜು ಸ್ಯಾಮ್ಸನ್‌ ಅವರ ವೈಯಕ್ತಿಕ ರನ್‌ಗಳು ತುಂಬಾ ಮುಖ್ಯವಾಗಿವೆ. ಅಗ್ರ ಕ್ರಮಾಂಕದಲ್ಲಿ ತಂಡದ ನಾಯಕ ಕೀ ಆಟಗಾರ ಎಂಬುದನ್ನು ಮಾಜಿ ಆಟಗಾರ ಬಲವಾಗಿ ನಂಬಿದ್ದಾರೆ. ಬೆರಳು ಮುರಿದುಕೊಂಡು ಬೆನ್‌ ಸ್ಟೋಕ್ಸ್ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ. ಹಾಗಾಗಿ ರಾಯಲ್ಸ್‌ಗೆ ಈಗ ಉತ್ತಮ ಫಿನಿಷರ್‌ ಇಲ್ಲ. ಆದ್ದರಿಂದ ಸಂಜು ಎಷ್ಟು ರನ್‌ಗಳನ್ನು ಗಳಿಸಿದರೂ ತಂಡಕ್ಕೆ ಅದು ನಿರ್ಣಾಯಕವಾಗಲಿದೆ ಎಂಬುದು ಗವಾಸ್ಕರ್ ಅಭಿಪ್ರಾಯ. "ಆದ್ದರಿಂದ, ಸಂಜು ಸ್ಯಾಮ್ಸನ್‌ ಉದಾಹರಣೆಯಿಂದ ತಂಡವನ್ನು ಮುನ್ನಡೆಸಿದರೆ, ನಾಯಕನಾಗಿ ಸ್ಕೋರ್ ಮಾಡುತ್ತಾರೆ. ಏಕೆಂದರೆ ಅವರದು ತಂಡದಲ್ಲಿ ಒಂದು ವರ್ಗದ ಕಾರ್ಯ. ಹೌದು, ತಂಡದಲ್ಲಿ ಡೆವಿಡ್‌ ಮಿಲ್ಲರ್‌, ಕ್ರಿಸ್‌ ಮಾರಿಸ್ ಇದ್ದು, ಅವರು ಪಂದ್ಯವನ್ನು ಮುಗಿಸುತ್ತಾರೆ. ಆದರೆ, ಅಗ್ರ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಅವರಿಂದ ರನ್‌ಗಳು ಬರಬೇಕು. ಇಲ್ಲವಾದಲ್ಲಿ ನಂ.5, 6 ಹಾಗೂ 7ನೇ ಕ್ರಮಾಂಕದಲ್ಲಿ ಏನಾಯಿತು ಎಂಬುದನ್ನು ನೀವು ನೋಡಬಹುದು. ಇದನ್ನು ಅರಿತುಕೊಂಡು ಸಂಜು ಸ್ಯಾಮ್ಸನ್‌ ಕ್ಯಾಪ್ಟನ್‌ ಆಟ ಆಡಬೇಕು," ಎಂದು ಸುನೀಲ್‌ ಗವಾಸ್ಕರ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32GPip2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...