ಬೆಂಗಳೂರು: ಕೋವಿಡ್ ಸೋಂಕಿತನನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೃತಪಟ್ಟ ಬಳಿಕ ಚಿತಾಗಾರಕ್ಕೆ ಶವ ಸಾಗಿಸಲು 60 ಸಾವಿರ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇರೆಗೆ ಆಂಬ್ಯುಲೆನ್ಸ್ ಚಾಲಕ, ಮಾಲೀಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೈ ಹನುಮಾನ್ ಆಂಬ್ಯುಲೆನ್ಸ್ ಮಾಲೀಕ ಕಂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್ ನ್ಯಾಷನಲ್ ಆಂಬ್ಯುಲೆನ್ಸ್ನ ಹರೀಶ್ ಬಂಧಿತ ಆರೋಪಿಗಳು. ಏ.20ರಂದು ಮತ್ತಿಕೆರೆ ನಿವಾಸಿಯೊಬ್ಬರನ್ನು ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಹೀಗಾಗಿ, ಅಲ್ಲಿಂದ ಮತ್ತೊಂದು ಆಂಬ್ಯುಲೆನ್ಸ್ನಲ್ಲಿ ಶವವನ್ನು ಹೆಬ್ಬಾಳದ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಈ ವೇಳೆ ಒಟ್ಟು 60 ಸಾವಿರ ರೂ. ಶುಲ್ಕ ನೀಡಬೇಕು ಎಂದು ಹನುಮಂತಪ್ಪ ಮತ್ತು ಹರೀಶ್ ಬೇಡಿಕೆ ಮುಂದಿಟ್ಟಿದ್ದರು. ಹಣ ನೀಡದೆ ಇದ್ದರೆ ಶವವನ್ನು ಹೆಬ್ಬಾಳ ಫ್ಲೈ ಓವರ್ ಕೆಳಗೆ ಇಟ್ಟು ಹೋಗುತ್ತೇವೆ ಎಂದು ಆಂಬ್ಯುಲೆನ್ಸ್ ಮಾಲೀಕ, ಚಾಲಕ ಬೆದರಿಕೆ ಹಾಕಿದ್ದರು. ಅಷ್ಟು ಹಣ ಇಲ್ಲದ ಕಾರಣ ತಾಳಿಯನ್ನೇ ಅಡ ಇಡಲು ಮೃತರ ಪುತ್ರಿ ಮುಂದಾಗಿದ್ದರು. ಅಂತಿಮವಾಗಿ 13 ಸಾವಿರ ರೂ. ಪಾವತಿಸಿದ್ದರು. ನಿಗದಿಗಿಂತ ಹೆಚ್ಚು ಹಣ ಸುಲಿಗೆಗೆ ಯತ್ನಿಸಿದ್ದ ಆರೋಪದ ಮೇರೆಗೆ ಮೃತರ ಪುತ್ರಿ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ವಿಪತ್ತು ನಿರ್ವಹಣೆ ಕಾಯಿದೆ, ಸುಲಿಗೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
from India & World News in Kannada | VK Polls https://ift.tt/3xhnhlL