ಕಸಾಪ ಚುನಾವಣೆಗೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮತಗಟ್ಟೆ..!

ಎಚ್‌ಪಿ ಪುಣ್ಯವತಿ ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದರೆ ಈ ಬಾರಿ ಬಸವನಗುಡಿಗೆ ಬರಬೇಕಿಲ್ಲ. ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೆ ಮತ ಚಲಾಯಿಸುವ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಹಾಲಿ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರ ಪ್ರಯತ್ನದಿಂದಾಗಿ (ಕಸಾಪ) ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮತ ಚಲಾವಣೆಯ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ಕಸಾಪದ ಬೈಲಾದಲ್ಲಿ ತಿದ್ದುಪಡಿಯನ್ನೂ ತರಲಾಗಿದೆ. ಈ ಹಿಂದೆ ನಗರ ಜಿಲ್ಲೆಯ ಎಲ್ಲ ಮತದಾರರು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನಕ್ಕೇ ಬಂದು ಮತ ಚಲಾಯಿಸಬೇಕಿತ್ತು. 2016ರ ಚುನಾವಣೆ ವೇಳೆ ಇತರೆ ಜಿಲ್ಲೆಗಳಲ್ಲಿ ಶೇ.85-88ರಷ್ಟು ಮತದಾನ ನಡೆದಿದ್ದರೆ, ನಗರ ಜಿಲ್ಲೆಯಲ್ಲಿ ಶೇ.36.5 ರಷ್ಟು ಮಾತ್ರ ಮತದಾನ ಆಗಿತ್ತು. ದೂರದ ಪ್ರದೇಶಗಳಲ್ಲಿ ಇದ್ದವರು ಟ್ರಾಫಿಕ್‌ ಕಿರಿಕಿರಿ ಇತ್ಯಾದಿ ಕಾರಣದಿಂದ ಏಕೈಕ ಮತಗಟ್ಟೆ ಬಸವನಗುಡಿಯ ನ್ಯಾಷನಲ್‌ ಕಾಲೇಜು ಆವರಣಕ್ಕೆ ಬರಲು ಹಿಂದೇಟು ಹಾಕಿದ್ದರು. ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಐದು ವರ್ಷಗಳ ಹಿಂದೆ (2016 ಫೆಬ್ರವರಿ-28) ನಡೆದ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ 30 ಜಿಲ್ಲೆಗಳು, ಐದು ಗಡಿನಾಡು ಘಟಕಗಳು ಸೇರಿ ಸುಮಾರು 1.87 ಲಕ್ಷ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಎಲ್ಲ ಘಟಕಗಳಲ್ಲಿ ಹೊಸದಾಗಿ 1.24 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿಯಾಗಿದ್ದು, 3.35 ಲಕ್ಷ ಸದಸ್ಯರ ಸದಸ್ಯತ್ವ ಪಡೆದಂತಾಗಿದೆ. ಈ ಪೈಕಿ 3.06 ಲಕ್ಷ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷರು, 30 ಜಿಲ್ಲಾಧ್ಯಕ್ಷರು, 4 ಗಡಿನಾಡ ಘಟಕಗಳ ಅಧ್ಯಕ್ಷರೂ ಸೇರಿದಂತೆ 35 ಸ್ಥಾನಗಳಿಗೆ ಮೇನಲ್ಲಿ ಚುನಾವಣೆ ನಡೆಯಲಿದೆ. ಮತದಾನಕ್ಕೆ ಯಾರು ಅರ್ಹರು? 18 ವರ್ಷ ತುಂಬಿದ ಕನ್ನಡ ಬಲ್ಲ ಯಾರು ಬೇಕಾದರೂ 500 ರೂ. ಸದಸ್ಯತ್ವ ಶುಲ್ಕ ಪಾವತಿಸಿ ಕಸಾಪದ ಸದಸ್ಯರಾಗಬಹುದು. ಸದಸ್ಯರಾದ ಮೂರು ವರ್ಷಗಳ ನಂತರ ಅವರಿಗೆ ಮತದಾನದ ಹಕ್ಕು ದೊರೆಯಲಿದೆ. 2018 ಹಾಗೂ ಅದಕ್ಕಿಂತ ಮುಂಚಿತವಾಗಿ ಸದಸ್ಯತ್ವ ಪಡೆದ ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ. ಸ್ಪರ್ಧಾ ಕಣದಲ್ಲಿ ಯಾರ್ಯಾರು?2021ರ ಮಾರ್ಚ್ 3ಕ್ಕೆ ಕಸಾಪ ಹಾಲಿ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ರಾಜ್ಯಮಟ್ಟದ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಕಣದಲ್ಲಿದ್ದವರ ಪೈಕಿ ಮಹಾದೇವ ಪ್ರಕಾಶ್‌ ಮತ್ತು ಡಾ. ಸಿ. ಸೋಮಶೇಖರ್ ಸ್ಪರ್ಧಿಸುತ್ತಿಲ್ಲ ಎಂಬ ಬಗ್ಗೆ ಮಾಹಿತಿ ಬಂದಿದೆ. ಉಳಿದಂತೆ ವ.ಚ. ಚನ್ನೇಗೌಡ, ಶೇಖರಗೌಡ ಮಾಲೀ ಪಾಟೀಲ್‌, ಡಾ. ಮಹೇಶ್‌ ಜೋಶಿ, ಸಿ.ಕೆ. ರಾಮೇಗೌಡ ಮತ್ತು ಸಂಗಮೇಶ ಬಾದವಾಡಗಿ ಅವರು ಕಣದಲ್ಲಿದ್ದಾರೆ. ನಗರ ಘಟಕ : ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಿಮ್ಮಯ್ಯ, ಪ್ರಕಾಶ್‌ ಮೂರ್ತಿ, ಕುವೆಂಪು ಪ್ರಕಾಶ್‌, ಕಾಂತರಾಜಪುರ ಸುರೇಶ್‌, ದಯಾನಂದ, ತಿಪ್ಪೇರುದ್ರ ಸ್ಪರ್ಧಿಸುತ್ತಿದ್ದಾರೆ.


from India & World News in Kannada | VK Polls https://ift.tt/3cEh37I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...