ಬೆಂಗಳೂರು: ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದ ನಕಲಿ ಗನ್ ಮ್ಯಾನ್ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ನಾರಾಯಣ ರಾಮಚಂದ್ರ ಹೆಗಡೆ (30) ಬಂಧಿತ ಆರೋಪಿ. ಈತ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ ಪಿಸ್ತೂಲ್ನಂತಿರುವ ಸಿಗರೇಟ್ ಲೈಟರ್ ವಶಪಡಿಸಿಕೊಳ್ಳಲಾಗಿದೆ. ಧಾರವಾಡ ಶಾಸಕ ಅಮೃತ ಅಯ್ಯಪ್ಪ ದೇಸಾಯಿ ಅವರ ಗನ್ಮ್ಯಾನ್ ಎಂದು ಹೇಳಿಕೊಂಡಿದ್ದ ಆರೋಪಿ, ದಾವಣಗೆರೆ ಮೂಲದ ವೆಂಕಟೇಶ್ ಅವರಿಗೆ ಸಿಎಆರ್ನಲ್ಲಿ ಗಾರ್ಡನರ್ ಕೆಲಸ ಕೊಡಿಸುತ್ತೇನೆ. ಅದಕ್ಕೆ 30 ಸಾವಿರ ರೂ. ನೀಡಬೇಕೆಂದು ಕೇಳಿ 12 ಸಾವಿರ ರೂ. ಪಡೆದು ಮೋಸ ಮಾಡಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದರು. ಆರೋಪಿ ನಾರಾಯಣ, ಸಫಾರಿ ಬಟ್ಟೆ ಧರಿಸಿ, ಜೇಬಲ್ಲಿ ನಕಲಿ ಗನ್ ಇಟ್ಟುಕೊಂಡು, ಕ್ಲೀನ್ ಶೇವ್ ಮಾಡಿಕೊಂಡು ಮೀಸಲು ಪೊಲೀಸ್ ಕಚೇರಿ, ವಾಹನ ಮತ್ತು ಸಿಬ್ಬಂದಿ ಜತೆ ಫೋಟೊ ತೆಗೆಸಿಕೊಂಡಿದ್ದಾನೆ. ಅವುಗಳನ್ನು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದ. ಫೇಸ್ಬುಕ್ನಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅವರೊಂದಿಗೆ ಚಾಟ್ ಮಾಡಿ ಹಿನ್ನೆಲೆ ಮತ್ತು ವಿವರ ತಿಳಿದುಕೊಂಡು ನೌಕರಿ ಕೊಡಿಸುವ ಆಮಿಷ ಒಡ್ಡುತ್ತಿದ್ದ. ಸೋಮವಾರ(ಫೆ.1) ದಾವಣಗೆರೆಗೆ ತೆರಳಿ ವೆಂಕಟೇಶನ ಜತೆ ಮದ್ಯಪಾನ ಮಾಡಿ, ಆತನ ಮನೆಗೆ ಹೋಗಿ ಊಟ ಮಾಡಿದ್ದಾನೆ. ಕೆಲಸ ಕೊಡಿಸುತ್ತೇನೆ ಬಾ ಎಂದು ಬೆಂಗಳೂರಿಗೆ ಕರೆ ತಂದಿದ್ದ. ಲಾಡ್ಜ್ವೊಂದರಲ್ಲಿ ವೆಂಕಟೇಶನಿಂದ 12 ಸಾವಿರ ರೂ. ಪಡೆದ ಆರೋಪಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಸಂಬಂಧ ವೆಂಕಟೇಶ, ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಫೋನ್ ಟವರ್ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಐದಾರು ಜನರನ್ನು ವಂಚಿಸಿರುವ ಮಾಹಿತಿ ಇದೆ. ಯಾರೂ ದೂರು ನೀಡಿಲ್ಲಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
from India & World News in Kannada | VK Polls https://ift.tt/3czc7B9