ಚಿತ್ರದುರ್ಗ: ರಾಜ್ಯ ಸರಕಾರ ಸಮಾಜಕ್ಕೆ 2ಎ ಮೀಸಲು ಪ್ರಕಟಿಸದ ಕಾರಣ ಶ್ರೀಮಠಕ್ಕೆ ನೀಡಿದ್ದ 25 ಲಕ್ಷ ರೂ. ಅನುದಾನವನ್ನು ಹಿಂತಿರುಗಿಸುವುದಾಗಿ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಅನುದಾನ ಬಿಡುಗಡೆ ಪತ್ರ ನೀಡಲಾಗುವುದು. ಇಲ್ಲವಾದಲ್ಲಿ ಗೋಡೆ ಮೇಲೆ ಅಂಟಿಸುವ ಮೂಲಕ ಸರಕಾರಕ್ಕೆ ಸಂದೇಶ ನೀಡಲಾಗುವುದು ಎಂದು ಹೇಳಿದರು. ಪಾದಯಾತ್ರೆಗೂ ಮುನ್ನ ಮುಖಂಡರ ಬಳಿ ಸಮಾಲೋಚಿಸಿದ ಬಳಿಕ ಅನುದಾನ ಹಿಂತಿರುಗಿಸುವ ಪತ್ರವನ್ನು ಸಮಾಜದ ಪದಾಧಿಕಾರಿಗಳು ಸಿಎಂ ನಿವಾಸಕ್ಕೆ ತಲುಪಿಸಲಿದ್ದಾರೆ ಎಂದರು. ಯಾರನ್ನೂ ಅನುದಾನ ಕೊಡಿ ಎಂದು ಕೇಳಿಲ್ಲ. ಪಂಚಮಸಾಲಿ ಸಮಾಜಕ್ಕೆ ನೆರವು ಕೇಳುವ ಅವಶ್ಯಕತೆ ಇಲ್ಲ. ಅನುದಾನ ಕೊಟ್ಟು ಮಠವನ್ನು ಕೊಂಡುಕೊಳ್ಳಲಾಗದು. ಅನುದಾನ ಪಡೆದು ಸರಕಾರದ ಋುಣದಲ್ಲಿ ಇರಲೂ ಬಯಸುವುದಿಲ್ಲ. ಸರಕಾರ ಹಿಂತಿರುಗಿಸಿರುವ ಅನುದಾನವನ್ನು ಪುನಃ ಗುಡಿ, ಗುಂಡಾರಗಳು, ಮಠಗಳಿಗೆ ಕೊಡದೇ ಸಂಕಷ್ಟದಲ್ಲಿರುವ ರೈತರು, ಜನರ ನೆರವಿಗೆ ಬಳಸಬೇಕು ಎಂದರು. ಹರಿಹರ ಗುರುಪೀಠದ ಶ್ರೀವಚನಾನಂದ ಶ್ರೀ ಮಾತನಾಡಿ, ಗೃಹ ಸಚಿವರ ಸಹಿತ ಸರಕಾರದ ಪ್ರತಿನಿಧಿಗಳು ದೂರವಾಣಿ ಮುಖೇನ ಮಾತನಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಹೊಸದಿಲ್ಲಿಗೆ ತೆರಳಿ ಸಂಬಂಧಿಸಿದವರೊಂದಿಗೆ ಚರ್ಚಿಸುವ ಭರವಸೆ ನೀಡಿದ್ದಾರೆ. ಲಿಂಗಾಯತರೆಲ್ಲರನ್ನು ಕೇಂದ್ರದ ಓಬಿಸಿಗೆ ಸೇರಿಸುವ ಹಾಗೂ ಪಂಚಮಸಾಲಿಗಳಿಗೆ 2ಎಗೆ ಮೀಸಲು ಪಡೆಯುವ ಹೋರಾಟಕ್ಕಾಗಿ ಲಿಂಗಾಯತರು ಒಗ್ಗೂಡಬೇಕು ಎಂದು ಮನವಿ ಮಾಡಿದರು. ಪಂಚಸಾಲಿ ರಾಜ್ಯಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ನೇತೃತ್ವದಲ್ಲಿ ಮಹಿಳೆಯರು ಒನಕೆ ಪ್ರದರ್ಶಿಸುವುದರೊಂದಿಗೆ ಶ್ರೀಗಳ ಪಾದಯಾತ್ರೆ ಕ್ಯಾದಿಗೆರೆ ಕಡೆಗೆ ಸಾಗಿತು. ಪಂಚಾಚಾರ್ಯ ಕಲ್ಯಾಣ ಮಂಟಪದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಮುದಾಯ ಜನ ಪಂಚಲಕ್ಷ ಪಾದಯಾತ್ರೆ ಆರಂಭಿಸುವಂತೆ ಒತ್ತಡ ತಂದರು. ನಂತರ ಪಾದಯಾತ್ರೆ ದುರ್ಗದಿಂದ ಆರಂಭವಾಯಿತು.
from India & World News in Kannada | VK Polls https://ift.tt/2MTfVCw