ಮಂಗಳೂರು: ಮಲೆನಾಡು, ಕರಾವಳಿ ಹಾಗೂ ಪಶ್ಚಿಮ ಘಟ್ಟದ ಪರಿಸರದಲ್ಲಿ ಕೆಲವು ವರ್ಷಗಳಿಂದ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣವಾದ ಅಂಶಗಳು ಮತ್ತು ಭವಿಷ್ಯದಲ್ಲಿಇದನ್ನು ತಡೆಗಟ್ಟುವ ಕುರಿತಾಗಿ ಮಾರ್ಗೋಪಾಯಗಳ ಬಗ್ಗೆ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಡಿಸೆಂಬರ್ ತಿಂಗಳೊಳಗೆ ರಾಜ್ಯ ಸರಕಾರಕ್ಕೆ ಅಧ್ಯಯನ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ, ಪರಿಸರ, ಜೀವವೈವಿಧ್ಯತೆಯ ಕುರಿತು ಜಿಪಂ, ಜಿಲ್ಲಾಧಿಕಾರಿ, ಕೃಷಿ, ಅರಣ್ಯ ಅಧಿಕಾರಿಗಳ ಜತೆ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಮಿತಿಗೆ ತಾನು ಅಧ್ಯಕ್ಷನಾಗಿದ್ದು, ವಿವಿಧ ವಿಜ್ಞಾನ ಸಂಸ್ಥೆಗಳ ತಜ್ಞರು ಸೇರಿದಂತೆ 10 ಮಂದಿ ಸದಸ್ಯರಿದ್ದಾರೆ. ಮೂರು ತಿಂಗಳ ಹಿಂದೆಯೇ ಸಮಿತಿ ರಚನೆಯಾಗಿದ್ದು, ಕೊರೊನಾ ಕಾರಣದಿಂದ ಸ್ವಲ್ಪ ವಿಳಂಬವಾಗಿತ್ತು. ಈಗಾಗಲೇ ಪಶ್ಚಿಮಘಟ್ಟದ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳು, ಜನರ ಜತೆ ಸಮಾಲೋಚನೆ ನಡೆಸಲಾಗಿದ್ದು, ಇನ್ನೂ ಹಲವು ಪ್ರದೇಶಗಳಲ್ಲಿಅಧ್ಯಯನ, ಸಮಾಲೋಚನೆ ನಡೆಸಬೇಕಾಗಿದೆ. ಪರಿಸರ ತಜ್ಞರ ಅಭಿಪ್ರಾಯಗಳನ್ನೂ ಪಡೆದುಕೊಳ್ಳಲಾಗುವುದು ಎಂದರು. ಅಪರೂಪದ ತಾಣಗಳ ಸಂರಕ್ಷಣೆರಾಜ್ಯದಲ್ಲಿಅಪರೂಪದ ಜೀವವೈವಿಧ್ಯ ತಾಣಗಳನ್ನು ಗುರುತಿಸಿ ಸಂರಕ್ಷಿಸುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸ್ಥಳೀಯ ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಿ ತಾಣಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಇಂತಹ ಅಪರೂಪದ ತಾಣಗಳನ್ನು ಗುರುತಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ರಾಜ್ಯದ ಪಾರಂಪರಿಕ ವೃಕ್ಷ ಘೋಷಣೆ ಪ್ರಕ್ರಿಯೆಯೂ ನಡೆದಿದೆ. ಇನ್ನು ವಿಶಿಷ್ಟ ಜಾತಿಯ ಮೀನು ವೈವಿಧ್ಯತೆಯ ತಾಣಗಳನ್ನಾಗಿ ಶಿಶಿಲ ಮತ್ತು ಸೀತಾನದಿ ಪ್ರದೇಶಗಳನ್ನು ಘೋಷಣೆ ಮಾಡಲಾಗಿದ್ದು, ಇನ್ನಷ್ಟು ಮೀನು ವೈವಿಧ್ಯ ತಾಣಗಳನ್ನು ಗುರುತಿಸಲಾಗುವುದು. ಹೀಗೆ ಘೋಷಣೆ ಮಾಡುವುದರಿಂದ ನಶಿಸುತ್ತಿರುವ ಜೀವವೈವಿಧ್ಯತೆಗಳ ರಕ್ಷಣೆ, ಅಭಿವೃದ್ಧಿ ಸಾಧ್ಯವಾಗಲಿದೆ. ಸುಳ್ಯದ ಕೆಲವು ಗ್ರಾಮಗಳಲ್ಲಿಅಪರೂಪದ ರಾಮಪತ್ರೆ ಗಿಡ ಇದ್ದು, ಅದನ್ನು ಸಂರಕ್ಷಿಸಲು ಕೂಡಾ ಶಿಫಾರಸು ಮಾಡಲಾಗಿದೆ ಎಂದರು. ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಗಳಲ್ಲಿ ಅಡಕೆಗೆ ಹಳದಿ ರೋಗ ಅತಿಯಾಗಿ ಕಾಡುತ್ತಿದ್ದು, ಅದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧ್ಯಯನ ನಡೆಸುತ್ತಿದೆ. ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನಷ್ಟೇ ಸರಕಾರಕ್ಕೆ ಅಧ್ಯಯನ ವರದಿ ಸಲ್ಲಿಸಬೇಕಾಗಿದೆ. ಆ ಜಾಗದಲ್ಲಿ ಬದಲಿ ಬೆಳೆ ಬೆಳೆಸುವುದು ಅಥವಾ ಅವರಿಗೆ ಪರಿಹಾರ ಕೊಡಿಸುವ ನಿರ್ಧಾರವನ್ನು ಸರಕಾರ ಶೀಘ್ರ ಕೈಗೊಳ್ಳಬೇಕಾಗಿದೆ ಎಂದರು. ಕರಾವಳಿ ಪರಿಸರ ರಕ್ಷಣೆ, ಮಾಲಿನ್ಯ ತಡೆ, ಆಮೆಗಳು, ಡಾಲ್ಫಿನ್ಗಳಂತಹ ಅಪರೂಪದ ಜೀವಿಗಳ ರಕ್ಷಣೆಗೆ ವಿಶೇಷ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿರುವ ಅರಣ್ಯ, ಜೀವವೈವಿಧ್ಯ ಅಭಿವೃದ್ಧಿಯ ಕುರಿತಾಗಿ ಪಿಲಿಕುಳದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನಕ್ಕೆ ಪೂರಕವಾಗಿ ಭಾನುವಾರ ಕಡಬದಲ್ಲಿ ನದಿಪೂಜೆ ನೆರವೇರಿಸಲಾಗುವುದು ಎಂದರು. ಜಿಲ್ಲಾಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕ್ಕಲನ್, ಸಿಆರ್ಝಡ್ ಅಧಿಕಾರಿ ಡಾ. ದಿನೇಶ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಅಡವಿ ಜೇನು ರಾಜ್ಯ ಕೀಟ ವಿನಾಶದ ಅಂಚಿಗೆ ಸಾಗುತ್ತಿರುವ ಅಡವಿ ಜೇನನ್ನು 'ರಾಜ್ಯ ಕೀಟ' ಘೋಷಣೆ ಮಾಡಲು ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹಿಂದೆ ಭಾರೀ ಸಂಖ್ಯೆಯಲ್ಲಿದ್ದ ಅಡವಿ ಜೇನು ಈಗ ಬಹುತೇಕ ನಶಿಸುತ್ತಿರುವುದರಿಂದ ಅದರ ರಕ್ಷಣೆಗಾಗಿ ಈ ಘೋಷಣೆ ಅಗತ್ಯವಾಗಿದೆ ಎಂದು ಅನಂತ ಹೆಗಡೆ ಆಶೀಸರ ತಿಳಿಸಿದರು.
from India & World News in Kannada | VK Polls https://ift.tt/3jx9G2s