ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ: ಆರ್‌ಜೆಡಿಗೆ ಕಾಂಗ್ರೆಸ್‌ನಿಂದ ಅಂತಿಮ ಎಚ್ಚರಿಕೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಉಭಯ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆ ಕಸರತ್ತು ಮುಂದುವರೆದಿದೆ. ಕೊನೆ ಹಂತದ ಸೀಟು ಹಂಚಿಕೆ ಮಾತುಕತೆಯಲ್ಲಿ ಆರ್‌ಜೆಡಿಗೆ ತನ್ನ ಅಂತಿಮ ನಿರ್ಧಾರ ತಿಳಿಸಿದ್ದು, ಅಗತ್ಯ ಬಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟ ಸೂಚನೆಯನ್ನು ‘ಕೈ’ ನಾಯಕರು ನೀಡಿದ್ದಾರೆ. ಕಾಂಗ್ರೆಸ್‌ನ ಬಿಹಾರ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್ ನಮ್ಮ ಪಕ್ಷ ಯಾವುದೇ ಸಂಭವನೀಯತೆಗೆ ಸಿದ್ಧವಾಗಿದೆ ಎಂದು ತೇಜಸ್ವಿ ಯಾದವ್‌ ನೇತೃತ್ವದ ರಾಷ್ಟ್ರೀಯ ಜನತಾದಳಕ್ಕೆ ನೆನಪಿಸಿದ್ದು, ಅಗತ್ಯ ಬಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸಲು ಕಾಂಗ್ರೆಸ್‌ ತಯಾರಾಗಿದೆ ಎಂದು ಹೇಳಿದ್ದಾರೆ. ಬುಧವಾರ ಗೋಯಿಲ್‌, 70ಕ್ಕಿಂತ ಕಡಿಮೆ ಕ್ಷೇತ್ರಗಳನ್ನು ನೀಡುವುದಾದರೆ ಬೇಡವೇ ಬೇಡ ಎಂದು ಆರ್‌ಜೆಡಿಗೆ ಸ್ಪಷ್ಟವಾಗಿ ಹೇಳಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನ್‌ನ ಸೋಲಿನ ನಂತರ ನಿರಾಸೆ ಅನುಭವಿಸಿದೆ. ಮೈತ್ರಿಕೂಟದಲ್ಲಿ ತನ್ನ ಮಿತ್ರಪಕ್ಷಗಳಿಗೆ ಹೆಚ್ಚಿನ ಅವಕಾಶ ನೀಡದಿರಲು ಆರ್‌ಜೆಡಿ ನಿರ್ಧರಿಸಿದೆ. ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಕಾಂಗ್ರೆಸ್‌ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬಹುದು ಎಂದು ಆರ್‌ಜೆಡಿ ಭಾವಿಸಿದೆ. ಆದ್ದರಿಂದ ಕಾಂಗ್ರೆಸ್‌ಗೆ ಸ್ಪರ್ಧಿಸಲು ಕಡಿಮೆ ಸ್ಥಾನ ನೀಡಿ ಚುನಾವಣೆ ನಂತರ ಅದು ನಿರ್ಣಾಯಕವಾಗದಂತೆ ನೋಡಿಕೊಳ್ಳುವುದು ಆರ್‌ಜೆಡಿ ಯೋಜನೆಯಾಗಿದೆ. ಆರ್‌ಜೆಡಿಯ ಸೀಟು ಹಂಚಿಕೆಯ ನಿಲುವಿನಿಂದ ಬೇಸತ್ತು ಈಗಾಗಲೇ ಮಹಾಘಟಬಂಧನ್‌ನಿಂದ ಮಾಜಿ ಸಿಎಂ ಜಿತನ್‌ ರಾಮ್‌ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಮ್‌ ಮೋರ್ಚಾ ಮತ್ತು ಉಪೇಂದ್ರ ಖುಷ್ವಹಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ ಹೊರಬಂದಿವೆ. ಮಹಾಮೈತ್ರಿ ಭಾಗವಾಗಿದ್ದ ಎಡಪಕ್ಷ ಸಿಪಿಐ-ಎಂಎಲ್‌ ಕೂಡ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬುಧವಾರ ಹೇಳಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಆರ್‌ಜೆಡಿ 81 ಸ್ಥಾನಗಳನ್ನು ಹೊಂದಿದ್ದು, ಈ ಸಲದ ಚುನಾವಣೆಯಲ್ಲಿ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕೆಂಬ ರಣತಂತ್ರವನ್ನು ತೇಜಸ್ವಿ ಯಾದವ್‌ ಎಣೆಯುತ್ತಿದ್ದಾರೆ. ಅಕ್ಟೋಬರ್‌ 28, ನವೆಂಬರ್‌ 3 ಮತ್ತು 7ರಂದು ಒಟ್ಟು ಮೂರು ಹಂತಗಳಲ್ಲಿ ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಬರಲಿದೆ.


from India & World News in Kannada | VK Polls https://ift.tt/36rAKwu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...