ಭೋಪಾಲ್: ಉತ್ತರಪ್ರದೇಶದ ಹತ್ರಾಸ್ ಗ್ಯಾಂಗ್ರೇಪ್ ಮತ್ತು ನಂತರ ನಡೆದ ಬೆಳವಣಿಗೆಗಳ ಭೀಕರತೆ ಇನ್ನೂ ಕಣ್ಣಳತೆಯಿಂದ ದೂರವಾಗಿಲ್ಲ. ಈ ಮಧ್ಯೆ ಮತ್ತೆ ಇಂತಹದೇ ಒಂದು ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ನರಸಿಂಗಪುರದಲ್ಲಿ ಐದು ದಿನಗಳ ಹಿಂದೆ 32 ವರ್ಷದ ದಲಿತ ಮಹಿಳೆಯೊಬ್ಬರ ಮೇಲೆ ಮೂವರು ಕಾಮುಕರು ನಡೆಸಿದ್ದರು. ಈ ಹೇಯ ಕೃತ್ಯ ನಡೆದ ಬಳಿಕ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಮುಂದಾಗದ ಕಾರಣ ನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ 28ರಂದು ತೋಟಕ್ಕೆ ಹುಲ್ಲು ತರಲು ಹೋಗಿದ್ದ ವಿವಾಹಿತ ಮಹಿಳೆ ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದರು. ಆದರೆ ನಿನ್ನೆ ಅಕ್ಟೋಬರ್ 2ರಂದು ಸಂತ್ರಸ್ತ ಮಹಿಳೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಮೃತ ಮಹಿಳೆಯ ಮನೆಯವರು ಪೊಲೀಸರ ವಿರುದ್ಧ ಆರೋಪ ಮಾಡಿದ್ದು ಪೊಲೀಸರು ದೂರು ದಾಖಲಿಸಿಕೊಳ್ಳದೆ ಕಿರುಕುಳ ನೀಡಿದ್ದರು. ಇದರಿಂದ ಆಕೆ ಮಾನಸಿಕವಾಗಿ ಕುಗ್ಗಿದ್ದಳು ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ಮೂವರು ಕಾಮುಕರ ಪೈಕಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಜೊತೆಗೆ ಕರ್ತವ್ಯ ಲೋಪದಡಿ ಮಹಿಳೆಯ ದೂರು ದಾಖಲಿಸಿಕೊಳ್ಳದ ಹಿನ್ನೆಲೆ ಚಿಚ್ಲಿ ಪೊಲೀಸ್ ಠಾಣೆಯ ಎಎಸ್ಐ ಮಿಶ್ರಿಲಾಲ್ ಕೊಡಪ್ಪ ಎಂಬಾತನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಗದರ್ವಾರಾ ಎಸ್ಡಿಒಪಿ ಎಸ್ಆರ್ ಯಾದವ್ ತಿಳಿಸಿದ್ದಾರೆ. ಅಮಾನತುಗೊಂಡಿರುವ ಎಎಸ್ಐ ಕೊಡಪ್ಪನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಈ ಹಿಂದೆ ಈತ ಪ್ರಕಣವೊಂದರಲ್ಲಿ ಸೆಕ್ಷನ್ 166ಎ ಅಡಿಯಲ್ಲಿ ಬಂಧಿಸಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಚಿಚ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೃತ ಮಹಿಳೆಯ ಪತಿ, ’ಜಾನುವಾರುಗಳಿಗೆ ಹುಲ್ಲು ತರಲು ತೋಟಕ್ಕೆ ಹೋಗಿದ್ದ ನನ್ನ ಪತ್ನಿಯ ಮೇಲೆ ಸೆಪ್ಟೆಂಬರ್ 28ರಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ನಾನು ಅವತ್ತೇ ರಾತ್ರಿ ಅವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸ್ ಸ್ಟೇಷನ್ಗೆ ಹೋಗಿದ್ದೆ. ಆದರೆ ಪೊಲೀಸರು ದೂರು ತೆಗೆದುಕೊಂಡು ಎಫ್ಐಆರ್ ದಾಖಲಿಸಿರಲಿಲ್ಲ. ಮರುದಿನ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಅವರು ನನಗೆ ಹೇಳಿದರು’ ಎಂದು ಹೇಳಿದ್ದಾರೆ. ಅಲ್ಲದೇ ಮರುದಿನ ನಾವು ಪೊಲೀಸ್ ಠಾಣೆಗೆ ಹೋದಾಗ ಅವರು ದೂರು ದಾಖಲಿಸಲಿಲ್ಲ. ಮತ್ತೆ ನಾವು ಬೇಸರದಿಂದ ಚಿಚ್ಲಿ ಪೊಲೀಸ್ ಠಾಣೆಗೆ ಹೋದೆವು. ಅಲ್ಲಿ ಪೊಲೀಸರು ನನ್ನನ್ನು ಮತ್ತು ಹೆಂಡತಿಯನ್ನು ನಿಂದಿಸಿದರು. ಆದರೆ ಈಗ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಣ್ಣೀರು ಸುರಿಸಿದ್ದಾರೆ.
from India & World News in Kannada | VK Polls https://ift.tt/3iou707