ರಶೀದ್ ಬೆಳ್ಳಾರೆ ಮಂಗಳೂರು: ಅಂಚೆ ಕಚೇರಿಯಲ್ಲಿ ಕೋವಿಡ್-19 ಮಹಾಮಾರಿಯಿಂದಾಗಿ ಸ್ಥಗಿತಗೊಂಡಿದ್ದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಕಾರ್ಯವನ್ನು ಅ.6ರಿಂದ ಮತ್ತೆ ಆರಂಭಿಸಲಾಗುತ್ತಿದೆ. ಈವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಸಂಬಂಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. ಆದರೂ ದಿನಕಳೆದಂತೆ ಸಮಸ್ಯೆಗಳ ಸರಮಾಲೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅ.6ರಂದು ಮಹಾಮೇಳಕ್ಕೆ ಸಿದ್ಧತೆ ನಡೆಸಿದೆ. ಪುತ್ತೂರು ಅಂಚೆ ವಿಭಾಗ, ಸುಳ್ಯ ಉಪವಿಭಾಗ ವ್ಯಾಪ್ತಿಯ ಅಂಚೆ ಕಚೇರಿಗಳಲ್ಲಿ ಗರಿಷ್ಠ 150 ಜನರಿಗೆ ಆಧಾರ್ ಕಾರ್ಡ್ಗೆ ಸಂಬಂಧಿಸಿದ ಕೆಲಸ ಕಾರ್ಯ ಮಾಡಲು ನಿರ್ಧರಿಸಲಾಗಿದೆ. ಬಾಕಿಯಾದಲ್ಲಿ ಮರುದಿನವೂ ಮುಂದುವರಿಸುವ ಯೋಚನೆಯಿದೆ. ಆಧಾರ್ ಮಹಾಮೇಳ ಅ.6ರಂದು ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳಲಿದೆ. ಸಾರ್ವಜನಿಕರು ಏನು ಮಾಡಬೇಕು?
- ಸಾರ್ವಜನಿಕರು ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಮುಂಗಡವಾಗಿ ಟೋಕನ್ ಪಡೆದು ಯಾವೆಲ್ಲಅಗತ್ಯ ದಾಖಲೆ ತರಬೇಕೆಂದು ಮಾಹಿತಿಗಳನ್ನು ಪಡೆದುಕೊಳ್ಳುವುದು .
- ಆಧಾರ್ ಸಂಬಂಧಿ ಕೆಲಸಕ್ಕೆ ಬರುವಾಗ ಕೌಂಟರ್ನಲ್ಲಿ ನೂಕುನುಗ್ಗಲಿಗೆ ಅವಕಾಶ ಮಾಡಿಕೊಡದೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಈ ಹಿಂದಿನ ದಿನಗಳಲ್ಲಿಅಂಚೆ ಕಚೇರಿ ಸಹಯೋಗದೊಂದಿಗೆ ಸಂಘ ಸಂಸ್ಥೆಗಳು ಜತೆಗೂಡಿ ಏರ್ಪಡಿಸುತ್ತಿದ್ದ ಆಧಾರ್ ಶಿಬಿರಕ್ಕೆ ಸದ್ಯಕ್ಕೆ ಅನುಮತಿ ಇರುವುದಿಲ್ಲ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಮುಂದಿನ ಆದೇಶದವರೆಗೆ ಶಿಬಿರಕ್ಕೆ ಅನುಮತಿ ಇರುವುದಿಲ್ಲ.
- ಅಜೆಕಾರು, ಆಲಂಕಾರು, ಅರಂತೋಡು, ಬೈಲೂರು, ಬಜಗೋಳಿ, ಬೆಳ್ಳಾರೆ, ಬೆಳ್ತಂಗಡಿ, ಬೆಳುವಾಯಿ, ಬಂಟ್ವಾಳ, ದರ್ಬೆ, ಧರ್ಮಸ್ಥಳ, ಗುರುವಾಯನಕೆರೆ, ಗುತ್ತಿಗಾರು, ಹೆಬ್ರಿ, ಜೋಡುಮಾರ್ಗ, ಕಡಬ, ಕಾರ್ಕಳ ಬಝಾರ್, ಕಾರ್ಕಳ ಪ್ರಧಾನ ಅಂಚೆ ಕಚೇರಿ, ಕೋಡಂಗಲ್ಲು, ಕುಕ್ಕಂದೂರು, ಮಡಂತ್ಯಾರು, ಮಾಣಿ, ಮೂಡುಬಿದಿರೆ, ಮುಂಡಾಜೆ, ನಾರಾವಿ, ನೆಲ್ಯಾಡಿ, ಪಾಣೆಮಂಗಳೂರು, ಪುತ್ತೂರು ಪ್ರಧಾನ ಅಂಚೆ ಕಚೇರಿ, ಶಿರ್ತಾಡಿ, ಸುಬ್ರಹ್ಮಣ್ಯ, ಸುಳ್ಯ, ಉಜಿರೆ, ಉಪ್ಪಿನಂಗಡಿ, ವೇಣೂರು, ವಿಟ್ಲ ಹಾಗೂ ವಗ್ಗದಲ್ಲಿ ಮಹಾಮೇಳ ನಡೆಯಲಿದೆ.
from India & World News in Kannada | VK Polls https://ift.tt/2F1LTZG