ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ '' ಅಭಿಯಾನದಿಂದ ದೇಶದ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೆ ವಾರ್ಷಿಕ 53 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಈ ಮೊತ್ತವು ಆರೋಗ್ಯದ ಮೇಲೆ ಮಾಡುತ್ತಿದ್ದ ವೆಚ್ಚದಲ್ಲಿನ ಇಳಿಕೆ, ಸಮಯದ ಉಳಿತಾಯ, ಆಸ್ತಿ ಮೌಲ್ಯ ವೃದ್ಧಿ, ಉಳಿ ತಾಯವಾದ ಹಣದಿಂದ ಹೂಡಿಕೆ ಮತ್ತಿತರ ಮಾರ್ಗಗಳ ಮೂಲಕ ಬಂದ ಆದಾಯಗಳನ್ನು ಒಳಗೊಂಡಿದೆ. ಅಭಿಯಾನದ ಅಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ. ಇದರ ಫಲವಾಗಿ ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಿವೆ. ಇದರಿಂದ ಆರೋಗ್ಯ ವೆಚ್ಚದ ಮೇಲೆ ಭಾರಿ ಉಳಿತಾಯವಾಗಿದೆ. ಜತೆಗೆ, ಮನೆಯಲ್ಲೇ ಶೌಚಾಲಯ ಇರುವುದರಿಂದ ಈ ಉದ್ದೇಶಕ್ಕಾಗಿ ಊರ ಹೊರಗೆ ಹೋಗಿ ಬರುತ್ತಿದ್ದ ಸಮಯವೂ ಉಳಿದಿದೆ ಎಂದು 'ಸ್ವಚ್ಛ ಭಾರತ ಮಿಷನ್-ಗ್ರಾಮೀಣ' ಹೆಸರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ. 'ಸೈನ್ಸ್ ಡೈರೆಕ್ಟ್ ಜರ್ನಲ್'ನ ಅಕ್ಟೋಬರ್ ಸಂಚಿಕೆಯಲ್ಲಿ ಸಮೀಕ್ಷೆಯ ವಿವರಗಳು ಪ್ರಕಟವಾಗಿವೆ. ಸ್ವಚ್ಛ ಭಾರತ ಅಭಿಯಾನದಿಂದ ಆಗಿರುವ ಆರ್ಥಿಕ ಲಾಭಗಳ ಕುರಿತು ನಡೆಸಿದ ಮೊದಲ ಸಮೀಕ್ಷೆಯೂ ಇದಾಗಿದೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಆಂಧ್ರಪ್ರದೇಶ, ಅಸ್ಸಾಂ ಸೇರಿದಂತೆ 12 ರಾಜ್ಯಗಳ 10,051 ಮನೆಗಳಲ್ಲಿ 2017ರ ಜುಲೈ 20ರಿಂದ ಆಗಸ್ಟ್ 11ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಬಹಿರ್ದೆಸೆ ಮುಕ್ತ ಭಾರತದ ಸಂಕಲ್ಪದೊಂದಿಗೆ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. 2019ರ ಅ.2ರಂದು ದೇಶದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾಗಿದೆ ಎಂದು ಸರಕಾರ ತಿಳಿಸಿದೆ.
from India & World News in Kannada | VK Polls https://ift.tt/3dSCH6X