ರಮೇಶ್ ಜಾರಕಿಹೊಳಿ‌ಗೆ ಭರ್ಜರಿ ಕೊಡುಗೆ, ‘ಕತ್ತಿ’ ಮಸೆದವರಿಗೆ ಬಿಎಸ್‌ವೈ ಶಾಕ್

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಮುಖ ಕಾರಣಕರ್ತ ಹಾಗೂ ಅತೃಪ್ತ ಬಣದ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೊಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರ್ಜರಿಯಾಗಿಯೇ ಗಿಫ್ಟ್‌ ಕೊಡುತ್ತಿದ್ದಾರೆ. ಸಚಿವ ಸ್ಥಾನ, ಬೇಡಿಕೆ ಇಟ್ಟಿದ್ದ ಖಾತೆಯ ಜೊತೆಗೆ ಇದೀಗ ಬೆಳಗಾವಿ ಉಸ್ತುವಾರಿ ಭಾಗ್ಯವೂ ರಮೇಶ್ ಪಾಲಿಗೆ ದಕ್ಕಿದೆ. ಅಷ್ಟೇ ಅಲ್ಲ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ನೋವಿನಲ್ಲಿದ್ದ ರಮೇಶ್ ಆಪ್ತ ಮಹೇಶ್ ಕುಮಠಳ್ಳಿಗೂ ಕೊಳಗೇರಿ ನಿರ್ಮೂಲನಾ ಮಂಡಳಿಯ ಅಧ್ಯಕ್ಷ ಕ್ಯಾಬಿನೆಟ್‌ ಸ್ಥಾನಮಾನ ನೀಡುವ ಮೂಲಕ ವಲಸೆ ಬಂದವರ ಕೈಬಿಡುವುದಿಲ್ಲ ಎಂಬ ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ. ವಲಸಿಗರನ್ನು ಪಕ್ಷದಲ್ಲಿ ಗೌರವದಿಂದ ನೋಡಿಕೊಳ್ಳುತ್ತಿರುವ ಸಿಎಂ ಬಿಎಸ್‌ವೈ ನಡೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಆಕಾಂಕ್ಷಿಗಳಾದ ಮೂಲ ಬಿಜೆಪಿಗರಲ್ಲಿ ಮತ್ತಷ್ಟು ಅಸಮಾಧಾನವನ್ನು ಉಂಟುಮಾಡಿದೆ. ಒಂದು ಕಾಲದ ರಾಜಕೀಯ ವಿರೋಧಿಗಳು ಇದೀಗ ತಮ್ಮ ನೆಲೆಗಳಲ್ಲಿ ಮೆರೆದಾಡುತ್ತಿರುವುದು ಇವರಲ್ಲಿ ಅಸಹನೆಯನ್ನು ಉಂಟು ಮಾಡಿದೆ. ವಲಸಿಗರಿಗೆ ಮಣೆಹಾಕುತ್ತಿರುವ ಬಿಎಸ್‌ವೈ ವಿರುದ್ಧ ಈ ಕಾರಣದಿಂದಲೇ ಅತೃಪ್ತರು ಕತ್ತಿ ಮಸೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಜೊಳ್ಳೆ ಕುಟುಂಬ ಹಾಗೂ ಸಾಹುಕಾರ ಕುಟುಂಬದ ಅಬ್ಬರದ ನಡುವೆ ಉಮೇಶ್ ಕತ್ತಿ ಕುಟುಂಬಕ್ಕೆ ಸೂಕ್ತ ಸ್ಥಾನ ಮಾನ ಸಿಗದೇ ಇರುವುದು ಅಸಮಾಧಾನವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸದ್ಯ ಬಹಿರಂಗವಾಗಿ ಬಂಡಾಯದ ಮಾತುಗಳು ಅತೃಪ್ತರಿಂದ ಕೇಳಿ ಬರದೇ ಇದ್ದರೂ ಆಂತರಿಕವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸಚಿವ ಸ್ಥಾನಕ್ಕಾಗಿ ಉಮೇಶ್ ಕತ್ತಿ ತಮ್ಮ ಒತ್ತಡವನ್ನು ಮುಂದುವರಿಸಿದ್ದಾರೆ. ಈ ಬಾರಿ ಸಚಿವ ಸ್ಥಾನ ನೀಡದೇ ಇದ್ದರೆ ಬಂಡಾಯ ಏಳುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ಇದು ಸಿಎಂ ಪಾಲಿಗೂ ಸವಾಲಿನ ಸಂಗತಿಯಾಗಿದೆ. ಸಂಪುಟ ಸೇರಲು ಲಾಬಿ ನಡೆಸುತ್ತಿರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಇದನ್ನು ನಿಭಾಯಿಸುವುದು ಬಿಎಸ್‌ವೈ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಬೆಳಗಾವಿಯಲ್ಲಿ ಅಸ್ಥಿತ್ವ ಗಟ್ಟಿ ಮಾಡಿಕೊಳ್ಳುವ ಪ್ಲ್ಯಾನ್‌ಲ್ಲಿ ಉಮೇಶ್ ಕತ್ತಿ ಇದ್ದು ಅವರ ಸಚಿವ ಸ್ಥಾನದ ಜೊತೆಗೆ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್‌ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ಯಡಿಯೂರಪ್ಪ ಹೇಗೆ ಪರಿಗಣಿಸುತ್ತಾರೆ ಎಂಬುವುದರ ಮೇಲೆ ನಿಂತಿದೆ ಬಂಡಾಯ ಮುಂದಿನ ಹಂತ ಎಂಬ ಮಾತುಗಳು ಕೇಳಿಬರುತ್ತಿದೆ.


from India & World News in Kannada | VK Polls https://ift.tt/2XYqups

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...