ಗ್ಯಾಲ್ವಾನ್ ಕಣಿವೆ ಪ್ರದೇಶದಲ್ಲಿ ಹಿಂದಕ್ಕೆ ಸರಿದ ಚೀನಾ ಸೇನೆ

ಹೊಸದಿಲ್ಲಿ: ಭಾರತ ಹಾಗೂ ಚೀನಾ ಗಡಿಯಲ್ಲಿ ಉಂಟಾಗಿರುವ ಸಂಘರ್ಷ ಪರಿಸ್ಥಿತಿಗೆ ಸಂಬಂಧಿಸಿದಂತೆ ಜೂನ್ 6 ಶನಿವಾರದಂದು ಮಿಲಿಟರಿ ಹಂತದ ಉನ್ನತ ಮಾತುಕತೆ ನಡೆಯಲಿರುವಂತೆಯೇ ವಿವಾದಿತ ಗ್ಯಾಲ್ವಾನ್ ಪ್ರದೇಶದಲ್ಲಿ ಚೀನಾ ಸೇನೆಯು ಕೆಲವು 100 ಯಾರ್ಡ್‌ಗಳಷ್ಟು ಹಿಂದಕ್ಕೆ ಸರಿದಿದೆ.ಇದನ್ನು ಉತ್ತಮ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಭಾರತ ಹಾಗೂ ಚೀನಾ ಮಿಲಿಟರಿ ನಡುವೆ ಲೆಫ್ಟಿನೆಂಟ್ ಜನರಲ್ ರ‍್ಯಾಂಕ್ ಹಂತದ ಮಾತುಕತೆ ಶನಿವಾರ ನಡೆಯಲಿದೆ. ಗ್ಯಾಲ್ವಾನ್ ಕಣಿವೆಯ ಒಂದು ಪ್ರದೇಶದಲ್ಲಿ ಚೀನಾ ಸೇನೆಯು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ನೂರು ಯಾರ್ಡ್‌ಗಳಷ್ಟು ಹಿಂದಕ್ಕೆ ಸರಿದಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.

ಸಿಕ್ಕಿಂನಲ್ಲಿ ಭಾರತೀಯ ಸೈನಿಕರೊಂದಿಗೆ ಮಾರಾಮಾರಿ ಮಾಡಿಕೊಂಡ ಬೆನ್ನಲ್ಲೇ ಚೀನಾ ಲಡಾಕ್‌ನಲ್ಲಿ ಭಾರತದ ಗಡಿಯೊಳಗೆ ಹೆಲಿಕಾಪ್ಟರ್ ಹಾರಿಸಿ ಸಂಘರ್ಷದ ವಾತಾವರಣ ಸೃಷ್ಟಿ ಮಾಡಿತ್ತು. ಇದಾದ ಬೆನ್ನಲ್ಲೇ ಗ್ಯಾಲ್ವಾನ್ ಸೇರಿದಂತೆ ವಿವಾದಿತ ಗಡಿ ಪ್ರದೇಶದಲ್ಲಿ ಇತ್ತ ದೇಶಗಳ ಸೈನ್ಯ ಬಲವೃದ್ಧಿಸಿಕೊಂಡಿತ್ತು. ಚೀನಾದ ಪ್ರತಿಯೊಂದು ಚಲನೆಯ ಮೇಲೂ ಭಾರತ ಹದ್ದಿನ ಕಣ್ಣಿಟ್ಟಿತ್ತು.

ಭಾರತ ಗಡಿಯಲ್ಲಿ ಅಸ್ಥಿರತೆ ಇಲ್ಲ, ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಬೇಡ ಎಂದ ಚೀನಾ

ಸಂಘರ್ಷ ವಾತಾವರಣವನ್ನು ಶಾಂತಗೊಳಿಸಲು ಮೇ ತಿಂಗಳಿಂದ ಹಲವು ಸುತ್ತಿನ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಗಳು ನಡೆಸಿದರೂ ಫಲಪ್ರದವೆನಿಸಿಲ್ಲ. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಗಡಿಯಲ್ಲಿ 5000ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು.

ಶನಿವಾರ ನಡೆಯಲಿರುವ ಮಾತುಕತೆಯಲ್ಲಿ ಧನಾತ್ಮಕ ಬೆಳವಣಿಗೆಗಳನ್ನು ನಿರೀಕ್ಷಿಸಲಾಗುತ್ತಿದೆ. ಇದರ ಮುನ್ಸೂಚನೆಯಂತೆ ಚೀನಾ ಸೇನೆಯು ಕೆಲವು 100 ಯಾರ್ಡ್‌ಗಳಷ್ಟು ಹಿಂದಕ್ಕೆ ಸರಿದಿದೆ.

ಪಶ್ಚಿಮ ಹಾಗೂ ಪೂರ್ವ ವಲಯಗಳ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ವೃದ್ಧಿ ಮಾಡಿರುವುದು ಚೀನಾ ಅಸಮಾಧಾನಕ್ಕೆ ಕಾರಣವಾಗಿತ್ತು. ಅತ್ತ ಭಾರತದ ಗಡಿ ಸಮೀಪದಲ್ಲಿ ಚೀನಾ ಕೂಡಾ ಇದಕ್ಕೆ ಸಮಾನವಾಗಿ ಮೂಲಸೌಕರ್ಯವನ್ನು ವೃದ್ಧಿಸಿಕೊಂಡಿದೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಚೀನಾಗೆ ಭಾರಿ ಮುಖಭಂಗ ಎದುರಾಗಿದೆ. ಅಲ್ಲದೆ ಜಾಗತಿಕ ವ್ಯವಹಾರವು ಭಾರತದತ್ತ ವಾಲಿದಿರುವುದು ಚೀನಾ ಆಕ್ರೋಶಕ್ಕೆ ಕಾರಣವಾಗಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಹಾಗೂ ಚೀನಾ 3488 ಕೀ.ಮೀ. ಉದ್ದ ಗಡಿಯನ್ನು ಹಂಚಿಕೊಳ್ಳುತ್ತಿದೆ. ಗಡಿಗೆ ಸಂಬಂಧಿಸಿದಂತೆ ನಿಖರ ರೇಖೆಗಳು ಇಲ್ಲದಿರುವುದು ಗಸ್ತು ತಿರುಗುವ ವೇಳೆ ಪದೇ ಪದೇ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ.

ಪಾಕ್‌‌ ಜೊತೆಗೂಡಿ ಚೀನಾ ಮೊಂಡಾಟ; ಪಿಒಕೆಯಲ್ಲಿ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಮುಂದು

ಗ್ಯಾಲ್ವಾನ್ ಸರೋವರದ ಬಳಿಕ ಚೀನಾ ತನ್ನ ಸೈನ್ಯದ ಚಟುವಟಿಕೆಗಳನ್ನು ವೃದ್ಧಿಸಿರುವುದು ಮತ್ತಷ್ಟು ಆಂತಕ ಸೃಷ್ಟಿಯಾಗಲು ಕಾರಣವಾಗಿತ್ತು. 1962ರ ಭಾರತ ಹಾಗೂ ಚೀನಾ ಯುದ್ಧ ಸಂದರ್ಭದಲ್ಲೂ ಗ್ಯಾಲ್ವಾನ್ ಪ್ರದೇಶ ಫ್ಲ್ಯಾಶ್ ಪಾಯಿಂಟ್ ಆಗಿ ಪರಿಣಮಿಸಿತ್ತು. 2017ರಲ್ಲಿ ಪೂರ್ವ ಹಿಮಾಲಯದ ಡೋಕ್ಲಾಮ್ ಮುಖಾಮುಖಿಯಾದ ಬೆನ್ನಲ್ಲೇ ಇದೇ ರೀತಿಯಾಗಿ ಮಾತುಕತೆಯ ಮೂಲಕ ವಿವಾದ ಇತ್ಯರ್ಥಗೊಳಿಸಲಾಗಿತ್ತು.



from India & World News in Kannada | VK Polls https://ift.tt/305Cusb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...