ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡ ಪ್ರಕಟಿಸಿದ ಹಾರ್ದಿಕ್‌ ಪಾಂಡ್ಯ, ರೋಹಿತ್‌ಗಿಲ್ಲ ನಾಯಕತ್ವ!

ಬೆಂಗಳೂರು: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಅಂದಹಾಗೆ ಈ ವರ್ಷ ಐಪಿಎಲ್‌ 2020 ನಡೆಯುವ ಎಲ್ಲಾ ಸಾಧ್ಯತೆಗಳು ಇದೀಗ ಕಾಣಿಸತೊಡಗಿದ್ದು, ಮಾನ್‌ಸೂನ್ ಮುಗಿದ ನಂತರ ದೇಶದಲ್ಲಿ ಕ್ರಿಕೆಟ್‌ ಚಟುವಟಿಕೆಗಳನ್ನು ಮರಳಿ ಪ್ರಾರಂಭಿಸುವ ಕಡೆಗೆ ಬಿಸಿಸಿಐ ಕಸರತ್ತು ನಡೆಸುತ್ತಿದೆ.ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಬೇಕಿದೆ. ಆದರೆ, ಕೋವಿಡ್‌-19 ಸೋಂಕಿನ ಪರಿಣಾಮ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ತನ್ನ ಅಂತಿಮ ನಿರ್ಧಾರವನ್ನು ಜೂನ್‌ 10ಕ್ಕೆ ಪ್ರಕಟಿಸುವುದಾಗಿ ಐಸಿಸಿ ಘೋಷಿಸಿದೆ.ಒಂದು ವೇಳೆ ಈ ವರ್ಷ ಐಪಿಎಲ್‌ ಟಿ20 ಟೂರ್ನಿ ಮುಂದೂಡಿದ್ದೇ ಆದರೆ ಸೆಪ್ಟೆಂಬರ್‌ 25ರಿಂದ ನವೆಂಬವರ್‌ 1ರವರೆಗೆ ಐಪಿಎಲ್‌ ಆಯೋಜಿಸಲು ಎದುರು ನೋಡುತ್ತಿರುವುದಾಗಿ ಬಿಸಿಸಿಐನ ಮೂಲಗಳು ಈಗಾಗಲೇ ಸ್ಪಷ್ಟಪಡಿಸಿವೆ. ಅಂದಹಾಗೆ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಕೂಡ ಐಪಿಎಲ್‌ ಆಯೋಜನೆಯ ವಿಶ್ವಾಸ ಹೊರಹಾಕಿದ್ದರು. ಇನ್ನು ಟೀಮ್‌ ಇಂಡಿಯಾ ಸೇರಿದಂತೆ ವಿದೇಶಿ ಕ್ರಿಕೆಟಿಗರು ಕೂಡ ವಿಶ್ವಕಪ್‌ಗೂ ಮೊದಲು ಐಪಿಎಲ್‌ ಆಡುವುದನ್ನೇ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಒಡಿಐ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳು!ಐಪಿಎಲ್‌ನಲ್ಲಿ ಕೇವಲ ಹಣದ ಹೊಳೆಯಷ್ಟೇ ಹರಿಯುವುದಿಲ್ಲ. ಗುಣಮಟ್ಟದ ಕ್ರಿಕೆಟ್‌ ವೀಕ್ಷಣೆ ಕೂಡ ಸಾಧ್ಯ. ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಬಲ್ಲ ರೋಚಕ ಪಂದ್ಯಗಳನ್ನು ಉಣಬಡಿಸುತ್ತದೆ. ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಟೂರ್ನಿಯೆಂದೇ ಕರೆಸಿಕೊಂಡಿರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ದಾಖಲೆಯ 4 ಬಾರಿ ಪ್ರಶಸ್ತಿ ಗೆದ್ದು ಯಶಸ್ವಿ ತಂಡ ಎನಿಸಿಕೊಂಡಿದೆ. ಇದೇ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಇದೀಗ ಐಪಿಎಲ್‌ ಕುರಿತಾಗಿ ಕ್ರಿಕ್‌ಬಝ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ XI ಆಯ್ಕೆ ಮಾಡಿದ್ದಾರೆ.

ಲಾಕ್‌ಡೌನ್‌ ದಿನಗಲ್ಲಿ ವಿಶ್ವದ ಬೆಸ್ಟ್‌ ತಂಡಗಳ ಆಯ್ಕೆ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದ್ದು, ಈಗಾಗಗಲೇ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ವಿವಿಧ ಮಾದರಿಗಳಲ್ಲಿನ ಬೆಸ್ಟ್‌ XI ಪ್ರಕಟಿಸಿಯಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಹಾರ್ದಿಕ್‌ ಪಾಂಡ್ಯ ನೆಚ್ಚಿನ ಐಪಿಎಲ್‌ ತಂಡವನ್ನು ಪ್ರಕಟಿಸಿದ್ದು, ಆ ತಂಡದಲ್ಲಿ ತಮ್ಮನ್ನು ತಾವೇ ಸೇರಿಸಿಕೊಳ್ಳುವ ಮೂಲಕ 7ನೇ ಕ್ರಮಾಂಕವನ್ನೂ ಕೊಟ್ಟಿದ್ದಾರೆ.

ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ವೆಸ್ಟ್‌ ಇಂಡೀಸ್‌ನ ದೈತ್ಯ ಕ್ರಿಸ್‌ ಗೇಲ್‌ ಇದ್ದು, ಅವರೊಟ್ಟೊಗೆ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಜೊತೆಯಾಗಲಿದ್ದಾರೆ. ಆದರೆ 4 ಬಾರಿ ಟ್ರೋಫಿ ಗೆದ್ದಿರುವ ಯಶಸ್ವಿ ನಾಯಕನಿಗೆ ಹಾರ್ದಿಕ್‌ ಕ್ಯಾಪ್ಟನ್ಸಿ ನೀಡದೇ ಇರುವುದು ಅಚ್ಚರಿ ಮೂಡಿಸಿದೆ. ತಂಡದ ಅಗ್ರ ಕ್ರಮಾಂಕ ಅತ್ಯಂತ ಬಲಿಷ್ಠವಾಗಿದ್ದು, 3ನೇ ಮತ್ತು 4ನೇ ಕ್ರಮಾಂಕದಲ್ಲಿ ಕ್ರಮವಾಗಿ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ'ವಿಲಿಯರ್ಸ್‌ ಇದ್ದಾರೆ.

ಹಾರ್ದಿಕ್‌ ತಮ್ಮ ನೆಚ್ಚಿನ ಐಪಿಎಲ್‌ ತಂಡದ ಮಧ್ಯಮ ಕ್ರಮಾಂಕಕ್ಕೆ ತಮ್ಮನ್ನು ಒಳಗೊಂಡಂತೆ ಇಬ್ಬರು ಭಾರತೀಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲಿಗೆ 5ನೇ ಕ್ರಮಾಂಕದಲ್ಲಿ ಐಪಿಎಲ್‌ ಇತಿಹಾಸದ 2ನೇ ಅತ್ಯಧಿಕ ರನ್‌ ಗಳಿಕೆಯ ಬ್ಯಾಟ್ಸ್‌ಮನ್‌ ಆಗಿರುವ ಸುರೇಶ್ ರೈನಾ ಅವರನ್ನು ಹೆಸರಿಸಿರುವ ಪಾಂಡ್ಯ, ಬಳಿಕ 6ನೇ ಕ್ರಮಾಂಕದಲ್ಲಿ ವಿಕೆಟ್‌ಕೀಪಿಂಗ್‌ ಜವಾಬ್ದಾರಿ ಹೊತ್ತಿರುವ ಎಂಎಸ್‌ ಧೋನಿ ಅವರಿಗೆ ನಾಯಕತ್ವವನ್ನೂ ನೀಡಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ 3 ಬಾರಿ ಪ್ರಶಸ್ತಿ ಗೆದ್ದು ಕೊಟ್ಟಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಧೋನಿ, ಸಿಎಸ್‌ಕೆ ತಂಡವನ್ನು ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ಸ್‌ಗೆ ಮುನ್ನಡೆಸಿದ್ದಾರೆ. ಇನ್ನು 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಮುಂದಾಗಿರುವ ಹಾರ್ದಿಕ್‌, ತಮ್ಮ ತಂಡದಲ್ಲಿನ 5ನೇ ಪರಿಣತ ಬೌಲರ್‌ ಕೂಡ ಆಗಿದ್ದಾರೆ.

ಹಾರ್ದಿಕ್‌ ತಮ್ಮ ತಂಡದ ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್‌ ಮತ್ತು ವೇಗದ ಸಮ್ಮಿಶ್ರಣ ನೀಡಿದ್ದಾರೆ. ತಂಡದಲ್ಲಿ ಇಬ್ಬರು ಪರಿಣತ ವೇಗಿಗಳನ್ನು ಆಯ್ಕೆ ಮಾಡಿದ್ದು, ಡೆತ್‌ ಓವರ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾಗಿರುವ ಶ್ರೀಲಂಕಾದ ಲಸಿತ್‌ ಮಾಲಿಂಗ ಮತ್ತು ಟೀಮ್‌ ಇಂಡಿಯಾದ ಜಸ್‌ಪ್ರೀತ್‌ ಬುಮ್ರಾ ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಂಡಿದ್ದಾರೆ. ಸ್ಪಿನ್ನರ್‌ಗಳ ಪೈಕಿ ವೆಸ್ಟ್‌ ಇಂಡೀಸ್‌ನ ಮಾಂತ್ರಿಕ ಆಫ್ ಸ್ಪಿನ್ನರ್‌ ಸುನಿಲ್‌ ನರೇನ್‌ ಅವರನ್ನು ತೆಗೆದುಕೊಂಡಿದ್ದು, ರಿಸ್ಟ್‌ ಸ್ಪಿನ್ನರ್‌ ಸಲುವಾಗಿ ಅಫಘಾನಿಸ್ತಾನದ ಲೆಗ್ಗೀ ರಶೀದ್‌ ಖಾನ್‌ ಅವರನ್ನು ತಂಡದಲ್ಲಿ ಹೆಸರಿಸಿದ್ದಾರೆ. ಒಟ್ಟಾರೆ 5 ವಿದೇಶಿಗರು ಮತ್ತು 6 ಮಂದಿ ಭಾರತೀಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ಹಾರ್ದಿಕ್‌ ಕಟ್ಟಿದ್ದಾರೆ.

1. ಕ್ರಿಸ್‌ ಗೇಲ್ (ಓಪನರ್‌)

2. ರೋಹಿತ್‌ ಶರ್ಮಾ (ಓಪನರ್)

3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)

4. ಎಬಿ ಡಿ'ವಿಲಿಯರ್ಸ್‌ (ಬ್ಯಾಟ್ಸ್‌ಮನ್)

5. ಸುರೇಶ್‌ ರೈನಾ (ಬ್ಯಾಟ್ಸ್‌ಮನ್)

6. ಎಂಎಸ್‌ ಧೋನಿ (ಕ್ಯಾಪ್ಟನ್/ವಿಕೆಟ್‌ಕೀಪರ್)

7. ಹಾರ್ದಿಕ್‌ ಪಾಂಡ್ಯ (ಆಲ್‌ರೌಂಡರ್)

8. ಸುನಿಲ್‌ ನರೇನ್ (ಆಫ್ ಸ್ಪಿನ್ನರ್)

9. ರಶೀದ್‌ ಖಾನ್ (ಲೆಗ್‌ ಸ್ಪಿನ್ನರ್‌)

10. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ)

11. ಲಸಿತ್‌ ಮಾಲಿಂಗ (ಬಲಗೈ ವೇಗಿ)

ಕ್ರಿಕ್‌ಬಝ್ ವೆಬ್‌ ಸೈಟ್‌ ಸಲುವಾಗಿ ಜನಪ್ರಿಯ ಕ್ರಿಕೆಟ್‌ ಕಾಮೆಂಟೇಟರ್ ಹರ್ಷ ಭೋಗ್ಲೆ ನಡೆಸಿಕೊಟ್ಟ ಸಂದರ್ಶನದಲ್ಲಿ ಹಾರ್ದಿಕ್‌ ಪಾಂಡ್ಯ ತಮ್ಮ ನೆಚ್ಚಿನ ಐಪಿಎಲ್‌ ತಂಡವನ್ನು ಆಯ್ಕೆ ಮಾಡಿದ್ದಾರೆ.



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3duu7KB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...