ಹೊಸದಿಲ್ಲಿ: ಕಳೆದ 12 ವರ್ಷಗಳಿಂದ ಮಂದಗತಿಯಲ್ಲಿದ್ದ ಮಾರುತ ಈ ಬಾರಿ ಸ್ವಲ್ಪ ತಡವಾಗಿ ಆರಂಭವಾದರೂ ಶೀಘ್ರವಾಗಿ 10 ರಾಜ್ಯಗಳಿಗೆ ವ್ಯಾಪಿಸಿದೆ. ಇನ್ನು ನಾಲ್ಕು ದಿನಗಳಲ್ಲಿ ಇನ್ನೂ ಎರಡು ರಾಜ್ಯಗಳಿಗೆ ವ್ಯಾಪಿಸಲಿದೆ ಎಂದು ತಿಳಿಸಿದೆ. ಮುಂಗಾರು ಮಾರುತಗಳು ಭಾನುವಾರ ಉತ್ತರ ಪ್ರದೇಶದ ವಾರಾಣಸಿ ಪ್ರವೇಶಿಸಿವೆ. ಉತ್ತರ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತವೂ ಸೇರಿದಂತೆ ಮುಂಗಾರು ಮಾರುತ ಬಲಗೊಂಡಿದ್ದು ನಾಲ್ಕು ದಿನಗಳಲ್ಲಿ 700 ಕಿ.ಮೀ ವ್ಯಾಪಿಸಿ ಉತ್ತರಪ್ರದೇಶಕ್ಕೆ ತಲುಪಿದೆ. ವಾಯುಭಾರ ಕುಸಿತದ ಬಲದೊಂದಿಗೆ ಮುಂಗಾರು ಮುಂಬಯಿ ತಲುಪುವ ಮೊದಲೇ ಉತ್ತರ ಪ್ರದೇಶ ತಲುಪಿರುವುದು ಅಸಾಮಾನ್ಯ ಘಟನೆಯಾಗಿದೆ. ಸಾಮಾನ್ಯವಾಗಿ ಜೂನ್ 10ರ ವೇಳೆಗೆ ಮುಂಬಯಿ ತಲುಪುತ್ತಿದ್ದ ಮುಂಗಾರು ಈ ಬಾರಿ ವಿಳಂಬವಾಗಿದೆ. 'ಹಾಗಿದ್ದರೂ ಇನ್ನು ಒಂದೆರಡು ದಿನಗಳಲ್ಲಿ ಮುಂಬಯಿ ಮತ್ತು ಮಹಾರಾಷ್ಟ್ರದ ಹಲವೆಡೆ ಮಳೆಯಾಗಲಿದೆ. ಆ ಬಳಿಕ ಸ್ವಲ್ಪ ದಿನ ಮಳೆ ಬಿಡುವು ತೆಗೆದುಕೊಳ್ಳಲಿದೆ' ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯ ಅಧಿಕಾರಿ ಡಿ. ಶಿವಾನಂದ ಪೈ ತಿಳಿಸಿದರು. ಉತ್ತರ ಭಾರತದಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಗಾಳಿ ಬೀಸುತ್ತಿದ್ದು ಮುಂಗಾರು ಆಗಮನದ ಮುನ್ಸೂಚನೆ ನೀಡಿದೆ. ಹಾಗಿದ್ದರೂ ಈ ತಿಂಗಳು ಕೊರತೆಯಾದ ಮಳೆ ಈಗ ಭರ್ತಿಯಾಗಬಹುದೆಂಬ ನಿರೀಕ್ಷೆಯಿಲ್ಲ. ಈ ತಿಂಗಳಲ್ಲಿ (ಜೂ 1ರಿಂದ 23) ಸಾಮಾನ್ಯಕ್ಕಿಂತ ಶೇ 38ರಷ್ಟು ಮಳೆ ಕೊರತೆಯಾಗಿದೆ. ಮಧ್ಯ ಮಹಾರಾಷ್ಟ್ರ, ಆಂಧ್ರ ಕರಾವಳಿ, ಛತ್ತೀಸ್ಗಢ, ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶ ಮತ್ತು ಇತರ ಉಪ ವಿಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿದೆ. ಕರ್ನಾಟಕ, ತೆಲಂಗಾಣ, ಪಶ್ಚಿಮ ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲೂ ಭಾನುವಾರ ಮಳೆಯಾಗಿದೆ. ಇನ್ನೊಂದು ಎರಡು ದಿನಗಳಲ್ಲಿ ಮಹಾರಾಷ್ಟ್ರದಾದ್ಯಂತ ಮುಂಗಾರಿ ವ್ಯಾಪಿಸಲಿದ್ದು, ಮಧ್ಯಪ್ರದೇಶ ಮತ್ತು ಗುಜರಾತ್ ಪ್ರವೇಶಿಸಲಿದೆ ಎಂದು ಪೈ ತಿಳಿಸಿದರು.
from India & World News in Kannada | VK Polls http://bit.ly/2ZLo4ds