
ಹೊಸದಿಲ್ಲಿ: ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ ಕುರಿತು ಉತ್ತರಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತ ಕಾಂಗ್ರೆಸ್ ನಾಯಕರು 'ಜಾಮೀನಿನ ಮೇಲೆ ಜೈಲಿನಿಂದ' ಹೊರಗಿರುವ ಸ್ವಾತಂತ್ರ್ಯವನ್ನು ಅನುಭವಿಸಬಹುದು ಎಂದು ಕುಟುಕಿದರು. ಹೇರಿಕೆಯ 44ನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಜನತೆಯ ಮೂಲಭೂತ ಹಕ್ಕುಗಳನ್ನು ಕಸಿಯಲಾಗಿತ್ತು. ಸರಕಾರದ ವಿರುದ್ಧ ಮಾತನಾಡುವವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಿ ಹಿಂಸಿಸಲಾಗುತ್ತಿತ್ತು. ಸದನದಲ್ಲಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಉತ್ತರಿಸುತ್ತ, ಬಿಜೆಪಿ ಕುರಿತು ನೀವು ಮಾಡಿದ ಆರೋಪಗಳು ನಿಜವಾಗಿದ್ದರೆ 2ಜಿ ಮತ್ತು ಕಲ್ಲಿದ್ದಲು ಹಗರಣದಂತಹ ಯುಪಿಎ ಅವಧಿಯ ಹಗರಣದಲ್ಲಿ ಭಾಗಿಯಾದವರು ಇಂದು ಮುಕ್ತವಾಗಿ ಓಡಾಡಲು ಸಾಧ್ಯವಿತ್ತೆ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. ಯಾರು ಜೈಲಿನಲ್ಲಿರಬೇಕು, ಯಾರು ಬೇಲ್ ಮೇಲೆ ಓಡಾಡಬೇಕು ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಕೋರ್ಟ್ಗಳಿಗೆ ಅಂತಹ ಅಧಿಕಾರವಿತ್ತೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಂಗಳವಾರ ರಾಜಕೀಯ ಟೀಕಾಕಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವಾಗ, ಹಲವು ಕೋರ್ಟ್ ಕೇಸುಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮೌನವಾಗಿ ಕುಳಿತಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧುರಿ ಸೋಮವಾರ ಸದನದಲ್ಲಿ ಮಾತನಾಡುತ್ತ, ಎನ್ಡಿಎ ಸರಕಾರ 'ಕಳ್ಳರಂತೆ ಬಿಂಬಿಸುತ್ತಿರುವ' ತಮ್ಮ ಪಕ್ಷದ ನಾಯಕರನ್ನು ಇದುವರೆಗೂ ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದರು. 17ನೇ ಲೋಕಸಭೆಯಲ್ಲಿ ಮೊದಲ ಬಾರಿಗೆ ಮಂಗಳವಾರ ಪ್ರಮುಖ ಭಾಷಣ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ವಾಸ್ತವವನ್ನು ಸಂಪೂರ್ಣ ಮರೆತಿದ್ದಾರೆ; ಅವರ ಕಾಲುಗಳು ನೆಲದ ಮೇಲೆ ಇಲ್ಲ, ಆಗಸದಲ್ಲೇ ಹಾರಾಡುವಂತಿದೆ ಅವರ ಮನಸ್ಥಿತಿ. ಚುನಾವಣೆಯಲ್ಲಿ ಜನರು ನೀಡಿದ ತೀರ್ಪಿನ ಬಳಿಕವೂ ವಾಸ್ತವವನ್ನು ಗ್ರಹಿಸುವ ಶಕ್ತಿ ಅವರಲ್ಲಿ ಇಲ್ಲವಾಗಿದೆ ಎಂದು ಹೇಳಿದರು. 'ದೇಶದ ಜನತೆ ತಮ್ಮ ಐದು ವರ್ಷದ ಆಡಳಿತಕ್ಕೆ ಮನ್ನಣೆ ನೀಡಿ ಮೊದಲಿಗಿಂತಲೂ ಹೆಚ್ಚಿನ ಶಕ್ತಿ ತುಂಬಿ ಮರಳಿ ಆಯ್ಕೆ ಮಾಡಿರುವುದೇ ಅತಿ ದೊಡ್ಡ ಬಹುಮಾನ. ಇದಕ್ಕಿಂತ ದೊಡ್ಡ ತೃಪ್ತಿ ಬೇರೆ ಇಲ್ಲ' ಎಂದು ಮೋದಿ ಹೇಳಿದರು. ಹಿಂದಿನ ನಾಯಕರ ಕೊಡುಗೆಗಳನ್ನು ಕಡೆಗಣಿಸಿರುವುದಾಗಿ ಪ್ರತಿಪಕ್ಷ ನಾಯಕರ ಟೀಕೆಗಳಿಗೆ ಬಲವಾಗಿ ಉತ್ತರಿಸಿದ ಪ್ರಧಾನಿ, ದುವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಯುಪಿಎ ಎಂದಾದರೂ ಒಳ್ಳೆಯ ಮಾತಾಡಿದ್ದಕ್ಕೆ ಸಾಕ್ಷಿ ಇದೆಯೇ? ಎಂದು ಪ್ರಶ್ನಿಸಿದರು. 'ನಮ್ಮ ನಾಯಕರನ್ನು ಬಿಡಿ, ನಿಮ್ಮ ಪಕ್ಷದವರೇ ಆದ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರಂತಹ ನಾಯಕರ ಕೊಡುಗೆಗಳನ್ನು ನೀವು ಗೌರವಿಸಿದ್ದೀರಾ? ಗಾಂಧಿ ಕುಟುಂಬದ ಹೊರತಾಗಿ ಬೇರೆ ಯಾರನ್ನಾದರೂ ನೀವು ಹೆಸರಿಸುತ್ತೀರಾ?' ಎಂದು ಪ್ರಶ್ನಿಸಿದರು. 'ನವ ಭಾರತ ಎಂಬುದು ಒಂದು ಪಕ್ಷವು ಬಿಂಬಿಸುವ ಚಿತ್ರಣವಲ್ಲ. ಅದು ದೇಶದ ಯುವ ಪೀಳಿಗೆಯ ಆಶೋತ್ತರ. ಚುನಾವಣೆಯಲ್ಲಿ ಪಕ್ಷಗಳು ಕಾದಾಡುವುದು ಸಹಜ. ಆದರೆ ಆ ಪ್ರಕ್ರಿಯೆಗಳು ಮುಗಿದ ಬಳಿಕ ದೇಶದ ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸುವತ್ತ ಒಗ್ಗೂಡಿ ಶ್ರಮಿಸಬೇಕಾಗಿದೆ' ಎಂದು ಮೋದಿ ಹೇಳಿದರು. ತ್ರಿವಳಿ ತಲಾಖ್ ನಿಷೇಧ ಮತ್ತು ಶಿಕ್ಷೆ ವಿಧಿಸುವ ವಿಧೇಯಕದಂತಹ ಪ್ರಮುಖ ವಿಷಯಗಳನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಕಾಂಗ್ರೆಸ್ ಏಕರೂಪ ನಾಗರಿಕ ಸಂಹಿತೆಯ ಬದಲು ಹಿಂದೂ ಕೋಡ್ ವಿಧೇಯಕ ರಚಿಸಲು ಮುಂದಾಯಿತು. ಅಲ್ಲದೆ ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೇ ನಿಷ್ಕ್ರಿಯಗೊಳಿಸುವಂತೆ ಸಂವಿಧಾನ ತಿದ್ದುಪಡಿಯನ್ನೂ ಮಾಡಿತು. ಅಂತಹ ತಪ್ಪುಗಳನ್ನು ಮತ್ತೆ ಪುನರಾವರ್ತಿಸಬಾರದು ಎಂದು ಪ್ರಧಾನಿ ಸಲಹೆ ನೀಡಿದರು. 'ಹಿಂದೆ ಮಾಡಿದ ತಪ್ಪು ತಿದ್ದಿಕೊಳ್ಳಲು ಕಾಂಗ್ರೆಸ್ಗೆ ಈಗ ಮತ್ತೊಂದು ಅವಕಾಶ ದೊರೆತಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ವಿಧೇಯಕವನ್ನು ನಾವು ತಂದಿದ್ದೇವೆ. ಇದನ್ನು ಯಾವುದೇ ಸಮುದಾಯದ ವಿರುದ್ಧ ಎಂದು ಭಾವಿಸಬೇಕಿಲ್ಲ' ಎಂದು ಮೋದಿ ಹೇಳಿದರು. 'ಕಾಂಗ್ರೆಸ್ ವಾಸ್ತವದಿಂದ ಬಹುದೂರ ಸಾಗಿದೆ. ಅದಕ್ಕೀಗ ವಾಸ್ತವಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೇ ಹೊರಟುಹೋಗಿದೆ. ಅವರ ದೃಷ್ಟಿ ಮೇಲಕ್ಕೆ ನೆಟ್ಟಿದೆಯೇ ಹೊರತು ನೆಲದಲ್ಲಿ ಏನಿದೆ ಎಂಬುದು ಕಾಣಿಸುತ್ತಿಲ್ಲ' ಎಂದು ಪ್ರಧಾನಿ ನುಡಿದರು.
from India & World News in Kannada | VK Polls https://ift.tt/2X98U4w