
ಬರೇಲಿ: ತವರಿಗೆ ಹೋಗುತ್ತೇನೆಂದ ಪತ್ನಿಯ ಮೇಲೆ ಕೋಪಗೊಂಡ ಪತಿ ಮಹಾಶಯ ಆಕೆಯ ಮೂಗನ್ನೇ ಕಚ್ಚಿ ಹಾಕಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೀಡಿತ ಮಹಿಳೆಯನ್ನು ಆರತಿ ಎಂದು ಗುರುತಿಸಲಾಗಿದ್ದ, ಆಕೆಯನ್ನೀಗ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಕಚ್ಚಿ ತುಂಡು ಮಾಡಿದ ಮೂಗಿನ ಭಾಗ ಲಭ್ಯವಾಗಿಲ್ಲ. ತುಂಡಾಗಿರುವ ಮೂಗನ್ನು ಸರ್ಜರಿ ಮೂಲಕ ಜೋಡಿಸಬಹುದಿತ್ತು. ಮತ್ತೀಗ ಆಕೆಗೆ ಕೃತಕ ಮೂಗನ್ನು ಅಳವಡಿಸಬೇಕಾಗಬಹುದು. ಅದು ಬಹಳ ದುಬಾರಿ ಪ್ರಕ್ರಿಯೆ. ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ಇದು ಲಭ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮದ್ಯ ವ್ಯಸನಿಯಾಗಿರುವ ಆತ ಸದಾ ಆಕೆಗೆ ಕಿರುಕುಳ ಕೊಡುತ್ತಲೇ ಇರುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ಮಹಿಳೆ ಪಕ್ಕದೂರಿನಲ್ಲಿ ವಾಸವಾಗಿರುವ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಪತಿಯಲ್ಲಿ ಹೇಳಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಸೋಮವಾರ ಮುಂಜಾನೆ ಜಗಳವಾಗಿದೆ. ಕೋಪದ ಭರದಲ್ಲಿ ಆಕೆಯ ಮೂಗನ್ನೇ ಕಚ್ಚಿ ಹಾಕಿದ ಆತ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ, ಎಂದು ನಗರದ ಹೆಚ್ಚುವರಿ ಎಸ್ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ.
from India & World News in Kannada | VK Polls https://ift.tt/31Vtxju