ಜೈಪುರ: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಸಾಲ ಮನ್ನಾ ಭರವಸೆ ಈಗ ಪಕ್ಷದ ಪಾಲಿಗೆ ದುಸ್ವಪ್ನವಾಗಿ ಕಾಡಲಾರಂಭಿಸಿದೆ. ಶ್ರೀಗಂಗಾನಗರ ಜಿಲ್ಲೆಯ ತಕ್ರಿ ಗ್ರಾಮದ 45 ವರ್ಷ ವಯಸ್ಸಿನ ರೈತರೊಬ್ಬರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ವೀಡಿಯೋ ಮಾಡಿಕೊಂಡು, ಎರಡು ಪುಟಗಳ ಪತ್ರವನ್ನೂ ಬರೆದಿಟ್ಟು ತಮ್ಮ ಸಾವಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಚುನಾವಣೆಗೆ ಮುನ್ನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಈಗ ಮೋಸ ಮಾಡಿದ್ದಾರೆ ಎಂದು ಆ ರೈತ ಆರೋಪಿಸಿದ್ದಾರೆ. ಸೋಹನ್ ಲಾಲ್ ಕಡೇಲ್ ಎಂಬ ರೈತ ಮೊಬೈಲ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಸರಕಾರ ಸಾಲ ಮನ್ನಾ ಮಾಡದೆ ಮೋಸ ಮಾಡಿದೆ, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೀಡಿಯೋ ಸರಕಾರದ ಗಮನಕ್ಕೆ ಬಂದು ರೈತನನ್ನು ಸಂಪರ್ಕಿಸುವ ಹೊತ್ತಿಗೆ ಆಗಲೇ ಆತ ಆತ್ಮಹತ್ಯೆಗೆ ಶರಣಾಗಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ವರದಿಗಳು ತಿಳಿಸಿವೆ. ರೈತ ಸೋಹಲ್ ಕಡೇಲ್ ತಮ್ಮ ಡೆತ್ನೋಟ್ನಲ್ಲಿ, ಗೆಹ್ಲೋಟ್ ಮತ್ತು ಪೈಲಟ್ ಹೆಸರನ್ನು ಉಲ್ಲೇಖಿಸಿದ್ದಾರೆ. ರೈತರ ಸಾಲ ಮನ್ನಾ ಭರವಸೆಯನ್ನು ರಾಜಸ್ಥಾನದ ಕಾಂಗ್ರೆಸ್ ಸರಕಾರ ಈಡೇರಿಸದ ಕಾರಣ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿಯೇ ಉಳಿದಿಲ್ಲ ಎಂದು ಕಡೇಲ್ ಹೇಳಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ರೆಕಾರ್ಡ್ ಮಾಡಿದ ವೀಡಿಯೋದಲ್ಲಿ ತಮ್ಮ ದುರಂತಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯೇ ಕಾರಣ ಎಂದು ದೂರಿದ್ದಾರೆ. ಶ್ರೀಗಂಗಾನಗರ ಜಿಲ್ಲೆಯ ನಿವಾಸಿಯಾಗಿರುವ ಕಡೇಲ್, ಆರು ಬಿಘಾ ಭೂಮಿ ಹೊಂದಿದ್ದಾರೆ. ಕೃಷಿ ಸಾಲವಾಗಿ ಸಿಂಡಿಕೇಟ್ ಬ್ಯಾಂಕಿನಿಂದ 1.23 ಲಕ್ಷ ರೂ ಸಾಲ ಪಡೆದಿದ್ದರು ಎಂದು ವರದಿ ತಿಳಿಸಿದೆ. ರಾಹುಲ್ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಮುನ್ನ ರೈತರ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. ತಾನು ಅಧಿಕಾರಕ್ಕೆ ಬಂದರೆ ಮೊದಲ 10 ದಿನಗಳಲ್ಲೇ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದರ ಫಲವಾಗಿ 99 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದ ಅಶೋಕ್ ಗೆಹ್ಲೋಟ್ ಸರಕಾರ, ಸಹಕಾರಿ ಬ್ಯಾಂಕುಗಳ ಸಾಲ ಮನ್ನಾದ ಪ್ರಕ್ರಿಯೆ ಆರಂಭಿಸಿತ್ತು. ಹಾಗಿದ್ದರೂ ಕೇಂದ್ರದ ಅಧೀನದ ಸಿಂಡಿಕೇಟ್ ಬ್ಯಾಂಕಿನಂತಹ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಸಾಧ್ಯವಾಗಲಿಲ್ಲ. 'ಒಬ್ಬ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸಾಲ ಮನ್ನಾದ ಭರವಸೆ ನೀಡಿದ್ದರು. ಆದರೆ ಈಡೇರಿಸಲಿಲ್ಲ. ರೈತರಿಗೆ ನ್ಯಾಯ ಸಿಗದ ಹೊರತು ಮೃತಪಟ್ಟ ರೈತನ ಶವ ತೆಗೆಯಲು ಬಿಡಬಾರದು. ಆತ್ಮಹತ್ಯೆ ಮಾಡಿಕೊಂಡ ರೈತನೇ ಸಾಯುವ ಮುನ್ನ ವೀಡಿಯೋ ಮತ್ತು ಡೆತ್ನೋಟ್ ಬರೆದಿಟ್ಟಿದ್ದಾರೆ. ಆ ಪತ್ರ ಈಗ ಪೊಲೀಸರ ವಶದಲ್ಲಿದೆ. ನಮಗೆ ನೀಡಿದ್ದ ಭರವಸೆ ಈಡೇರಿಸಲು ಪೊಲೀಸರು ನೆರವಾಗಬೇಕು' ಎಂದು ಘಟನೆ ಕುರಿತು ಮಾತನಾಡಿದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
from India & World News in Kannada | VK Polls http://bit.ly/2FwZZ2b