
ಹೊಸದಿಲ್ಲಿ: 2019ರ ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನಕ್ಕೆ ತನ್ನ ವಾಯುಸೀಮೆಯ ಬಳಕೆಗೆ ನಿರ್ಬಂಧ ವಿಧಿಸಿದ್ದ ಭಾರತ ಇದೀಗ, ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಅನುಮತಿ ನೀಡಿದೆ. ಮಂಗಳವಾರದಿಂದ ಪಾಕ್ ಪ್ರಧಾನಿ ಶ್ರೀಲಂಕಾಗೆ ಎರಡು ದಿನಗಳ ಪ್ರವಾಸ ಮಾಡಲಿದ್ದು, ಈ ವೇಳೆ ತನ್ನ ವಾಯುಸೀಮೆಯ ಮೂಲಕ ಹಾದು ಹೋಗಲು ಭಾರತ ಅನುಮತಿ ನೀಡಿದೆ. ತನ್ನ ಎರಡು ದಿನಗಳ ಭೇಟಿ ವೇಳೆ ಅಲ್ಲಿನ ಅಧ್ಯಕ್ಷ ಗೋಟಬಯ ರಾಜಪಕ್ಸ ಹಾಗೂ ಪ್ರಧಾನಿ ಮಹಿಂದ ರಾಜಪಕ್ಸ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ, ವ್ಯಾಪಾರ, ಹೂಡಿಕೆ, ಆರೋಗ್ಯ, ಶಿಕ್ಷಣ, ಕೃಷಿ , ತಂತ್ರಜ್ಞಾನ ಹಾಗೂ ರಕ್ಷಣೆ ಸಂಬಂಧ ಹಲವು ಮಹತ್ವದ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಇಮ್ರಾನ್ ಖಾನ್ ಅವರೊಂದಿಗೆ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹಾಗೂ ಉನ್ನತ ಮಟ್ಟದ ಉದ್ಯಮಿಗಳನ್ನೊಳಗೊಂಡ ನಿಯೋಗ ಶ್ರೀಲಂಕಾಗೆ ತೆರಳಲಿದೆ. ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, ಇಮ್ರಾನ್ ಖಾನ್ ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ ಅವರಿಗೆ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ನೀಡಲಿದ್ದಾರೆ. ಇದೇ ವೇಳೆ ಶ್ರೀಲಂಕಾ ಸಂಸತ್ನಲ್ಲಿ ನಿಗದಿಯಾಗಿದ್ದ ಇಮ್ರಾನ್ ಖಾನ್ ಭಾಷಣವನ್ನು ಶ್ರೀಲಂಕಾ ರದ್ದುಗೊಳಿಸಿದೆ. ಒಂದು ವೇಳೆ ಇಮ್ರಾನ್ ಭಾಷಣ ಮಾಡಿದರೆ, ಭಾರತದೊಂದಿಗೆ ವಿರೋಧ ಕಟ್ಟಿಕೊಳ್ಳಬೇಕಾಗಬಹುದು ಎನ್ನುವ ಭೀತಿ ಶ್ರೀಲಂಕಾಗೆ ಕಾಡಿತ್ತು ಎನ್ನಲಾಗಿದೆ.
from India & World News in Kannada | VK Polls https://ift.tt/37DwhXn