ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹಾಗೂ ಅದರಲ್ಲೂ ಎಂಎಸ್ ಧೋನಿ ಕ್ರೀಸ್ನಲ್ಲಿದ್ದಾಗ ಕೊನೆಯ ಓವರ್ ಭಾರತದ ಯುವ ವೇಗಿ ಅಬ್ದುಲ್ ಸಮದ್ಗೆ ನೀಡಿದ್ದೇಕೆಂದು ಸನ್ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕಾರಣ ಬಹಿರಂಗ ಪಡಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ 13ನೇ ಆವೃತ್ತಿಯ 14ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 7 ರನ್ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿತು. ಆ ಮೂಲಕ ಟೂರ್ನಿಯ ಎರಡನೇ ಗೆಲುವನ್ನು ಬಳಗ ಪಡೆಯಿತು. ಪಂದ್ಯದ ಎರಡನೇ ಇನಿಂಗ್ಸ್ನ 19ನೇ ಓವರ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಎರಡನೇ ಎಸೆತ ಪ್ರಯತ್ನದಲ್ಲಿ ಗಾಯಕ್ಕೆ ಒಳಗಾಗಿದ್ದು ಪಂದ್ಯಕ್ಕೆ ತಿರುವು ನೀಡಿತು. ಅಂತಿಮವಾಗಿ ಭುವಿ ಬೌಲಿಂಗ್ ಮಾಡಲು ಅಶಕ್ತರಾದಾಗ, ಈ ಓವರ್ ಯಾರಿಗೆ ನೀಡಬೇಕೆಂಬ ಒತ್ತಡಕ್ಕೆ ಡೇವಿಡ್ ವಾರ್ನರ್ ಒಳಗಾದರು. ಈ ವೇಳೆ ಬುದ್ದಿ ಉಪಯೋಗಿಸಿದ ನಾಯಕ, ಇನ್ನುಳಿದ 5 ಎಸೆತಗಳನ್ನು ಖಲೀಲ್ ಅಹ್ಮದ್ಗೆ ಹಾಗೂ ಕೊನೆಯ ಓವರ್ ಅಬ್ದುಲ್ ಸಮದ್ಗೆ ನೀಡಿದರು. ಕಠಿಣ ಸನ್ನಿವೇಶದಲ್ಲಿ ಡೇವಿಡ್ ವಾರ್ನರ್ ತೆಗೆದುಕೊಂಡ ನಿರ್ಧಾರ ಅಂತಿಮವಾಗಿ ಫಲ ನೀಡಿತು. ಪಂದ್ಯದ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಅವರು, ಕೊನೆಯ ಓವರ್ ಖಲೀಲ್ ಅಹ್ಮದ್ ಅವರ ಬದಲು ಯುವ ವೇಗಿ ಅಬ್ದುಲ್ ಸಮದ್ಗೆ ನೀಡಲು ಕಾರಣವನ್ನು ಬಹಿರಂಗಪಡಿಸಿದರು. "ಅಬ್ದುಲ್ ಸಮದ್ಗೆ ಬೌಲಿಂಗ್ ನೀಡುವುದು ಬಿಟ್ಟು ಬೇರೆ ಆಯ್ಕೆಗಳಿರಲಿಲ್ಲ, ಹಾಗಾಗಿ, ಅವರನ್ನು ಕೊನೆಯಲ್ಲಿ ಬೆಂಬಲಿಸಬೇಕಾಗಿತ್ತು. ನಾವು ಖಲೀಲ್ ಅಹ್ಮದ್ ಅವರ ಮೂಲಕ ಐದು ಎಸೆತಗಳ 19ನೇ ಓವರ್ನಲ್ಲಿಯೇ ಪಂದ್ಯ ಮುಗಿಸುವ ಯೋಜನೆ ಹಾಕಿಕೊಂಡಿದ್ದೆವು. ಅಭಿಷೇಕ್ ಶರ್ಮಾ ಅವರಿಗೂ ನೀಡಬಹುದಿತ್ತು, ಆದರೆ ಸಮದ್ ಎತ್ತರವಾಗಿರುವುದರಿಂದ ಎದುರಾಳಿಯನ್ನು ನಿಯಂತ್ರಿಸಬಹುದೆಂಬ ಕಾರಣದಿಂದ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು, " ಎಂದು ಡೇವಿಡ್ ವಾರ್ನರ್ ತಿಳಿಸಿದರು. "ಕಳೆದ ಬಾರಿ ಹೋಲಿಕೆ ಮಾಡಿದರೆ ಇದು ಸ್ವಲ್ಪ ಉತ್ತಮವಾಗಿತ್ತು. ಇಲ್ಲಿ ಸ್ವಲ್ಪ ಸ್ಪರ್ಧಾತ್ಮಕವಾಗಿ ಕೂಡಿತ್ತು, ಚೆಂಡು ಸ್ವಿಂಗ್ ಆಗುವುದನ್ನು ನೋಡಲು ಚೆನ್ನಾಗಿತ್ತು. ಯುವ ಆಟಗಾರರು ಕ್ರೀಸ್ಗೆ ತೆರಳಿ ಹೆಚ್ಚು ರನ್ಗಳನ್ನು ಗಳಿಸುವಂತೆ ಹೇಳುವುದು ನನ್ನ ಸಂದೇಶವಾಗಿದೆ," ಎಂದು ಡೇವಿಡ್ ವಾರ್ನರ್ ತಿಳಿಸಿದರು. "ಇಲ್ಲಿನ ವಾತಾವರಣ ಹಾಗೂ ವಿಕೆಟ್ಗೆ ಹೊಂದಿಕೊಂಡು ಪ್ರಿಯಮ್ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಚೆನ್ನಾಗಿ ಆಡಿದರು. ಅವರಿಂದ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಯುವ ಆಟಗಾರರು ತುಂಬಾ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಯಾರ್ಕರ್, ನಿಧಾನಗತಿಯ ಎಸೆತಗಳನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆ. ಈ ಇಬ್ಬರೂ ಆಡಿದ ಆಟದಿಂದ ನಮಗೆ ಪಂದ್ಯದಲ್ಲಿ ಇನ್ನಷ್ಟು ಭರವಸೆ ಹೆಚ್ಚಾಯಿತು," ಎಂದು ಇಬ್ಬರು ಯುವ ಆಟಗಾರರನ್ನು ವಾರ್ನರ್ ಶ್ಲಾಘಿಸಿದರು. ಇದುವರೆಗೂ ಆಡಿದ ನಾಲ್ಕು ಪಂದ್ಯಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಎರಡನೇ ಗೆಲಲು ಇದಾಗಿದೆ. ಆ ಮೂಲಕ ಹೈದರಾಬಾದ್ ಫ್ರಾಂಚೈಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ನಾಲ್ಕು ಪಂದ್ಯಗಳಿಂದ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/30p7p1Z