
ಹೊಸದಿಲ್ಲಿ: ದೇಶದ ಭದ್ರತೆಗೆ ದಕ್ಕೆ ಬಂದರೆ ತನ್ನ ಭೂಪ್ರದೇಶದಲ್ಲಿ ಮಾತ್ರವಲ್ಲದೆ, ವಿದೇಶಿ ನೆಲದಲ್ಲೂ ಹೋರಾಡಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಲಡಾಖ್ ಗಡಿಯಲ್ಲಿ ಭಾರತ ಮತ್ತು ನಡುವೆ ಬಿಕ್ಕಟ್ಟು ಮುಂದುವರೆದಿರುವಾಗ ದೋವಲ್ ಹೇಳಿಕೆ ಮಹತ್ವ ಪಡೆದಿದೆ. ರಿಷಿಕೇಶದಲ್ಲಿ ಪರಮಾರ್ಥ್ ನಿಕೇತನ್ ಆಶ್ರಮದಲ್ಲಿ ಮಾತನಾಡಿದ ದೋವಲ್, ಇದುವರೆಗೂ ಭಾರತವು ಮೊದಲು ಯಾರ ಮೇಲೂ ದಾಳಿ ಮಾಡಿಲ್ಲವಾದರೂ, ಹೊಸ ಕಾರ್ಯತಂತ್ರದ ಭಾಗವಾಗಿ ಭದ್ರತಾ ಬೆದರಿಕೆಗಳನ್ನು ನಿವಾರಿಸಲು ನಾವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ. ನೀವು ಬಯಸುವ ಸ್ಥಳದಲ್ಲಿ ಮಾತ್ರ ಹೋರಾಡುವುದು ನಮಗೆ ಅನಿವಾರ್ಯವಲ್ಲ. ಎಲ್ಲಿಂದ ಬೆದರಿಕೆ ಬರುತ್ತದೆಯೋ ಅಲ್ಲಿಗೆ ಭಾರತ ಯುದ್ಧವನ್ನು ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. ದೋವಲ್ ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಲು ನಾವು ಎಂದಿಗೂ ಆಕ್ರಮಣಕಾರರಾಗಲಿಲ್ಲ. ನಾವೂ ಖಂಡಿತವಾಗಿಯೂ ನಮ್ಮ ನೆಲ ಹಾಗೂ ವಿದೇಶಿ ನೆಲದಲ್ಲಿ ಹೋರಾಡುತ್ತೇವೆ. ಅದು ಪರಮಾರ್ಥ ಆಧ್ಯಾತ್ಮಿಕತೆ ಹಿತದೃಷ್ಟಿಯಿಂದವಾಗಿರುತ್ತದೆಯೇ ಹೊರತು ನಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಅಲ್ಲ ಎಂದು ದೋವಲ್ ಹೇಳಿದ್ದಾರೆ. ನಮ್ಮದು ನಾಗರಿಕತೆಯ ರಾಷ್ಟ್ರ. ಭಾರತ ಯಾವುದೇ ಧರ್ಮ, ಭಾಷೆ ಅಥವಾ ಪಂಥವನ್ನು ಆಧರಿಸಿಲ್ಲ. ದೇಶದ ಅಡಿಪಾಯ ಯಾವುದು ಎಂದು ಗಮನಿಸಿದರೆ, ಅದು ನಮ್ಮ ಸಂಸ್ಕೃತಿ ಎಂದು ಅವರು ಹೇಳಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಿದ ಒಂದು ದಿನದ ಬಳಿಕ ದೋವಲ್ ಅವರು ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ.
from India & World News in Kannada | VK Polls https://ift.tt/37E76Vq