ಹೊಸದಿಲ್ಲಿ: ಉತ್ತರ ಪ್ರದೇಶದ ಅಧಿಕೃತವಾಗಿ ಮುರಿದು ಬಿದ್ದಿದೆ. ಸಮಾಜವಾದಿ ಪಕ್ಷ ಜತೆಗಿನ ಮೈತ್ರಿ ಮುರಿದಿರುವುದನ್ನು ಬಿಎಸ್ಪಿ ನಾಯಕಿ ವಿಧ್ಯಕ್ತವಾಗಿ ಘೋಷಿಸಿಕೊಂಡಿದ್ದಾರೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸೋಮವಾರ ಪ್ರಕಟಿಸಿದರು. ಸರಣಿ ಟ್ವೀಟ್ಗಳಲ್ಲಿ ಅಖಿಲೇಶ್ ನೇತೃತ್ವದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಯಾವತಿ, ಎಸ್ಪಿ ನಾಯಕರ ಜತೆ ಮುಂದುವರಿದರೆ ಬಿಜೆಪಿಯನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. 'ಲೋಕಸಭಾ ಚುನಾವಣೆ ಬಳಿಕ ಸಮಾಜವಾದಿ ಪಕ್ಷದ ನಾಯಕರ ವರ್ತನೆ ಗಮನಿಸಿದಾಗ ಮೈತ್ರಿ ಮುಂದುವರಿಸಿದರೆ ಭವಿಷ್ಯದಲ್ಲಿ ಬಿಜೆಪಿಯನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬ ಆತಂಕ ಮೂಡುತ್ತದೆ. ಆದ್ದರಿಂದ ಪಕ್ಷದ ಹಿತಾಸಕ್ತಿ ಕಾಪಾಡಲು ಮೈತ್ರಿ ಮುರಿಯುವುದು ಅನಿವಾರ್ಯವಾಗಿದೆ. ಇನ್ನು ಮುಂದೆ ಸಣ್ಣ ಮತ್ತು ದೊಡ್ಡ ಚುನಾವಣೆಗಳಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ' ಎಂದು ಮಾಯಾವತಿ ಹೇಳಿದ್ದಾರೆ. 'ಹಳೆಯದನ್ನೆಲ್ಲ ಮರೆತು ಸಮಾಜವಾದಿ ಪಾರ್ಟಿ ಜತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮೈತ್ರಿ ಧರ್ಮಕ್ಕೆ ನಾವು ಬದ್ಧರಾಗಿದ್ದೆವು' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಲಖನೌದಲ್ಲಿ ಭಾನುವಾರ ಎರಡೂವರೆ ಗಂಟೆಗಳ ಕಾಲ ನಡೆದ ಬಿಎಸ್ಪಿಯ ಅಖಿಲ ಭಾರತ ಸಭೆಯ ಬಳಿಕ ಮಾಯಾವತಿ ಈ ನಿರ್ಧಾರ ಪ್ರಕಟಿಸಿದ್ದಾರೆ. ತಾಜ್ ಕಾರಿಡಾರ್ ಪ್ರಕರಣದಲ್ಲಿ ತಮ್ಮ ವಿರುದ್ಧ ಹಗೆ ಸಾಧಿಸಲು ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಬಿಜೆಪಿ ಜತೆ ರಹಸ್ಯವಾಗಿ ಕೈಜೋಡಿಸಿದ್ದಾರೆ ಎಂದು ಮಾಯಾವತಿ ಆರೋಪಿಸಿದರು. ಲೋಕಸಭೆ ಚುನಾವಣೆಗೆ ಮುನ್ನ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 62ರಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮಹಾಘಟಬಂಧನ ನೆಲಕಚ್ಚಿತ್ತು.
from India & World News in Kannada | VK Polls http://bit.ly/2WVwkFH