
ಬೆಂಗಳೂರು: ಆಯುಧ ಪೂಜೆಯಂದು ದೇಶದ ಸಂವಿಧಾನದ ಗ್ರಂಥಕ್ಕೆ ಪೂಜೆ ಸಲ್ಲಿಸಿದ ಶಾಸಕಿ ಸೌಮ್ಯಾ ರೆಡ್ಡಿ ನಡೆಗೆ ಬಿಜೆಪಿ ವಕ್ತಾರೆ ಆಕ್ಷೇಪ ಎತ್ತಿದ್ದಾರೆ. ಶಾಸಕಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಯುಧ ಪೂಜೆಯ ಚಿತ್ರಗಳನ್ನು ಹಂಚಿಕೊಂಡಿದ್ದರು. ಜೊತೆಗೆ ಜಯನಗರದ ಶಾಸಕರ ಕಛೇರಿಯಲ್ಲಿ, ನನ್ನ ತಂದೆ ಬಿಟಿಎಂ ಶಾಸಕರಾದ ರಾಮಲಿಂಗ ರೆಡ್ಡಿ ಜೊತೆ ಆಯುಧ ಪೂಜೆ ನೆರವೇರಿಸಿ, ಪವಿತ್ರ ಸಂವಿಧಾನ ಗ್ರಂಥಕ್ಕೆ ಪೂಜೆ ಸಲ್ಲಿಸಲಾಯಿತು ಎಂಬ ಒಕ್ಕಣೆಯನ್ನು ಸೇರಿಸಿಕೊಂಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಮಾಳವಿಕಾ ಅವಿನಾಶ್, ಹಾಗಿದ್ದರೆ, ಮುಂದಿನ ಕ್ರಿಸ್ಮಸ್ ಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಈದ್ ಗೆ ಗಣಹೋಮ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಮಾಳವಿಕಾ ಟ್ವೀಟ್ಗೆ ಗರಂ ಆಗಿರುವ ಸೌಮ್ಯಾ ರೆಡ್ಡಿ, ನೀವು ಕೋವಿಡ್ ಟಾಸ್ಕ್ ಫೋರ್ಸ್ ಸರಿಯಾಗಿ ನೋಡಿಕೊಳ್ಳಿ ಮೊದಲು, 8 ಲಕ್ಷಕ್ಕೂ ಹೆಚ್ಚು ಸೋಂಕಿತರು ಇದ್ದಾರೆ, 10,905 ಸಾವು ಸಂಭವಿಸಿದೆ ನಾಚಿಕೆಯಾಗುವುದಿಲ್ಲವೇ ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ನೀವೆಲ್ಲರೂ ಜನರನ್ನು ವಿಭಜಿಸಲು ಮತ್ತು ದ್ವೆಷವನ್ನು ಹರಡಲು ಇಲ್ಲಿ ಕೇವಲ ಬಿಜೆಪಿ ಟ್ರೋಲ್ಗಳಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ಜನರ ಮತ್ತು ನಮ್ಮ ರಾಷ್ಟ್ರದ ಸೇವೆ ಮಾಡಲು ಅಲ್ಲ ಎಂದು ಕಿಡಿಕಾರಿದ್ದಾರೆ. ಸೌಮ್ಯ ರೆಡ್ಡಿ ಹಾಕಿರುವ ಟ್ವಿಟ್ಟರ್ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಟ್ವಿಟ್ಟರ್ನಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/34sOghQ