'ನೀವು ನಿಜವಾದ ಮ್ಯಾಚ್‌ ವಿನ್ನರ್‌' : ಪಂತ್‌ ಬ್ಯಾಟಿಂಗ್‌ ಕೊಂಡಾಡಿದ ಗಿಲ್ಲಿ!

ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವೃತ್ತಿ ಜೀವನದ ಮೂರನೇ ಶತಕ ಸಿಡಿಸಿದ ಭಾರತದ ಯುವ ಬ್ಯಾಟ್ಸ್‌ಮನ್ ಅವರನ್ನು ಆಸ್ಟ್ರೇಲಿಯಾ ಮಾಜಿ ಆಟಗಾರ ಗುಣಗಾನ ಮಾಡಿದ್ದಾರೆ. ಭಾರತ ತಂಡ 80 ರನ್‌ಗೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ರಿಷಭ್‌ ಪಂತ್‌, ಕೊಹ್ಲಿಯ ಪಡೆಯ ಮೇಲಿದ್ದ ಒತ್ತಡವನ್ನು ಹಂತ-ಹಂತವಾಗಿ ಕಡಿಮೆ ಮಾಡಿದರು. ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 118 ಎಸೆತಗಳನ್ನು ಎದುರಿಸಿದ ಅವರು, ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 101 ರನ್‌ ಚೆಚ್ಚಿದರು. ಆದರೆ, 85ನೇ ಓವರ್‌ನಲ್ಲಿ ಜೇಮ್ಸ್ ಅಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿದರು. ಎರಡನೇ ದಿನದ ಅಂತ್ಯಕ್ಕೆ ಟೀಮ್‌ ಇಂಡಿಯಾ 94 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 294 ರನ್‌ ಗಳಿಸಿದ್ದು, 89 ರನ್‌ ಮುನ್ನಡೆ ಪಡೆದಿದೆ. ವಾಷಿಂಗ್ಟನ್‌ ಸುಂದರ್(60*) ಹಾಗೂ ಅಕ್ಷರ್‌ ಪಟೇಲ್‌(11*) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ರಿಷಭ್‌ ಪಂತ್‌ ಬ್ಯಾಟಿಂಗ್‌ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ ಆಸ್ಟ್ರೇಲಿಯಾ ಮಾಜಿ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಆಡಮ್‌ ಗಿಲ್‌ಕ್ರಿಸ್‌, ಎಡಗೈ ಆಟಗಾರ ನಿಜವಾದ ಮ್ಯಾಚ್‌ ವಿನ್ನರ್‌ ಎಂದು ಬಣ್ಣಿಸಿದರು. "ನೀವು ಎಷ್ಟು ರನ್‌ಗಳನ್ನು ಗಳಿಸಿದ್ದೀರಿ ಎಂಬುದು ಮಾತ್ರವಲ್ಲ, ಆದರೆ, ಎದುರಾಳಿ ತಂಡವನ್ನು ಹೇಗೆ ನಿರ್ವಹಿಸಿದ್ದೀರಿ ಎಂಬುದು ಮುಖ್ಯ. ತಂಡಕ್ಕೆ ಅಗತ್ಯವಿದ್ದಾಗ ನೀವು ಆಸರೆಯಾಗುತ್ತೀರಿ, ನೀವು ನಿಜವಾಗಲೂ ಮ್ಯಾಚ್‌ ವಿನ್ನರ್‌. ನಿಮ್ಮನ್ನು ವೀಕ್ಷಿಸುತ್ತಿರುತ್ತೇನೆ," ಎಂದು ಗಿಲ್‌ಕ್ರಿಸ್ಟ್ ಟ್ವೀಟ್‌ ಮಾಡಿದರು. ಆಡಮ್‌ ಗಿಲ್‌ಕ್ರಿಸ್ಟ್ ಗುಣಗಾನ ಮಾಡಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ರಿಷಭ್‌ ಪಂತ್‌, "ನಿಮ್ಮಿಂದ ದೊಡ್ಡ ಅಭಿನಂದನೆ ಬರುತ್ತಿದೆ, ಗಿಲ್ಲಿ! ಹಿಂದೆ ಹಲವು ವರ್ಷಗಳು ನಿಮ್ಮ ಬ್ಯಾಟಿಂಗ್‌ ನೋಡುವ ಮೂಲಕ ತುಂಬಾ ಕಲಿತಿದ್ದೇನೆ," ಎಂದು ಪಂತ್‌ ಟ್ವೀಟ್‌ ಮಾಡಿದರು. ವೃತ್ತಿ ಜೀವನದ ಮೂರನೇ ಶತಕ ಸಿಡಿಸುವ ಜೆತಗೆ ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌ ಅವರೊಂದಿಗೆ ಮುರಿಯದ 7ನೇ ವಿಕೆಟ್‌ಗೆ 113 ರನ್‌ ಗಳಿಸಿದ್ದಾರೆ. ಆ ಮೂಲಕ ಭಾರತ ಮುನ್ನಡೆ ಸಾಧಿಸಲು ನೆರವಾದರು. ಎರಡನೇ ದಿನದ ಬಳಿಕ ಪಂತ್‌ ತಮ್ಮ ಬ್ಯಾಟಿಂಗ್ ಪ್ಲಾನ್‌ ರಿವೀಲ್‌ ಮಾಡಿದ್ದರು. "ನಾನು ಕ್ರೀಸ್‌ಗೆ ಬಂದಾಗ ರೋಹಿತ್‌ ಶರ್ಮಾ ಅವರೊಂದಿಗೆ ಪಾಲುದಾರಿಕೆ ಬೆಳೆಸುವುದು ನನ್ನ ಯೋಜನೆಯಾಗಿತ್ತು; ಈ ಒಂದೇ ಒಂದು ಅಂಶ ನನ್ನ ಮನಸ್ಸಿನಲ್ಲಿತ್ತು. ಪಿಚ್‌ ಅನ್ನು ಅರ್ಥಮಾಡಿಕೊಂಡು ನಂತರ ಅದಕ್ಕೆ ತಕ್ಕಂತೆ ಶಾಟ್‌ಗಳನ್ನು ಹೊಡೆಯುತ್ತಿದ್ದೆ. ಒಂದು ವೇಳೆ ಬೌಲರ್‌ಗಳು ಉತ್ತಮ ಎಸೆತಗಳನ್ನು ಹಾಕುತ್ತಿದ್ದರೆ, ಅದಕ್ಕೆ ಗೌರವ ನೀಡಿ ಸಿಂಗಲ್ಸ್ ತೆಗೆದುಕೊಳ್ಳುತ್ತಿದ್ದೆ. ಇದು ನನ್ನ ಮನಸ್ಸಿನಲ್ಲಿತ್ತು," ಎಂದು ಪಂತ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sRRYeq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...