ಸುನಿಲ್ ಪೊನ್ನೇಟಿ ಮಡಿಕೇರಿ ಮಡಿಕೇರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕೊಡಗಿನ ಅಣೆಕಟ್ಟೆ ಹಿನ್ನೀರು ಪ್ರದೇಶದಲ್ಲಿನ ಅರಣ್ಯ ಇಲಾಖೆ ಜಾಗದಲ್ಲಿ ಸಾಕಾನೆಗಳ ಶಿಬಿರ ಆರಂಭಿಸಲು ಇಲಾಖೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ದುಬಾರೆಯಲ್ಲಿ ಆನೆಗಳ ಒತ್ತಡ ಕಡಿಮೆ ಮಾಡುವ ಸಲುವಾಗಿ ತಜ್ಞರ ಸಲಹೆಯಂತೆ ರಾಜ್ಯದ 9ನೇ ಶಿಬಿರಕ್ಕೆ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳ ಅಸ್ವಾಭಾವಿಕ ಸಾವಿನ ಬಗ್ಗೆ ತನಿಖೆ ನಡೆಸಲು ರಚನೆಯಾಗಿದ್ದ ತಜ್ಞರ ಸಮಿತಿ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಮರಿಗಳು ಸೇರಿದಂತೆ 32 ಆನೆಗಳು ಇರುವುದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಒಂದು ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರುವಂತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಹೊಸ ಆರಂಭಿಸಲು ಯೋಜನೆ ರೂಪಿಸಿದ್ದಾರೆ. ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದ ಬಳಿ ನಿರ್ಮಿಸಲು ಉದ್ದೇಶಿಸಿರುವ ವೃಕ್ಷೋದ್ಯಾನದ ಬಳಿಯಲ್ಲೇ ಹೊಸ ಆನೆ ಶಿಬಿರಕ್ಕೆ ಅರಣ್ಯ ಇಲಾಖೆ ಜಾಗ ಗುರುತಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಜಾಗ ಪರಿಶೀಲನೆ ನಡೆಸಿದ್ದು, ಅಗತ್ಯವಾದ ಸೌಕರ್ಯಗಳು ಇಲ್ಲಿ ಇರುವುದರ ಬಗ್ಗೆ ಗಮನಹರಿಸಲಾಗಿದೆ. ಇಲ್ಲಿ ನೀರಿನ ಸೌಲಭ್ಯ, ಆನೆಗಳ ಆಹಾರಕ್ಕೆ ಅತ್ತೂರು ಮೀಸಲು ಅರಣ್ಯವೂ ಇದೆ. 3 ವರ್ಷದ ಹಿಂದೆಯೂ ಚಿಂತನೆ ನಡೆದಿತ್ತು ದುಬಾರೆ ಶಿಬಿರದ ಮೇಲಿನ ಒತ್ತಡ ತಗ್ಗಿಸಲು ಮತ್ತೊಂದು ಶಿಬಿರ ಆರಂಭಿಸುವ ಚಿಂತನೆ ಅರಣ್ಯ ಇಲಾಖೆಯಲ್ಲಿ 3 ವರ್ಷದ ಹಿಂದೆಯೂ ನಡೆದಿತ್ತು. ಆಗ ಡಿಎಫ್ಒ ಆಗಿದ್ದ ಸೂರ್ಯಸೇನ್ ಇದಕ್ಕಾಗಿ ರಂಗಸಮುದ್ರದಲ್ಲಿರುವ ಚಿಕ್ಲಿಹೊಳೆ ಜಲಾಶಯದ ಬಳಿಯ ಅರಣ್ಯ ಇಲಾಖೆ ಜಾಗವನ್ನು ಗುರುತಿಸಿ ಶಿಬಿರ ಆರಂಭಕ್ಕೆ ಸರಕಾರದಿಂದ ಒಪ್ಪಿಗೆಯನ್ನೂ ಪಡೆದುಕೊಂಡಿದ್ದರು. ದುಬಾರೆ ಆನೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಆನೆಗಳ ಸಾಮಾನ್ಯ ಜೀವನಕ್ಕೆ ಕಿರಿಕಿರಿ ಆಗುತ್ತಿದೆ ಎನ್ನುವ ಕಾರಣದಿಂದಲೂ ಚಿಕ್ಲಿಹೊಳೆ ಆನೆ ಶಿಬಿರ ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಪ್ರತಿ ತಿಂಗಳು ತಲಾ 10 ಆನೆಗಳನ್ನು ಈ ಶಿಬಿರಕ್ಕೆ ಕರೆತಂದು ಸಹಜ ವಾತಾವರಣದಲ್ಲಿ ಸಲಹುವ ಯೋಚನೆಯೂ ಇತ್ತು. ಇಲಾಖೆಯವರು ಹೊರತುಪಡಿಸಿ ಬೇರೆಯವರ ಪ್ರವೇಶ ನಿರ್ಬಂಧಿಸಲೂ ನಿರ್ಧರಿಸಲಾಗಿತ್ತು. ಆದರೆ ಸ್ಥಳೀಯರ ವಿರೋಧದ ಕಾರಣದಿಂದ ಇಲ್ಲಿ ಆನೆ ಶಿಬಿರ ಆರಂಭ ಆಗಿರಲಿಲ್ಲ. ದುಬಾರೆ ಆನೆ ಶಿಬಿರದಲ್ಲಿ 32 ಆನೆಗಳಿವೆ. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಆನೆಗಳು ಅಲ್ಲಿವೆ. ಹಾಗಾಗಿ ಮತ್ತೊಂದು ಆನೆ ಶಿಬಿರ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ. ಹೀರಾಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಹಾರಂಗಿ ಅಣೆಕಟ್ಟೆ ಪ್ರವೇಶದ್ವಾರದಿಂದ ಸುಮಾರು 1 ಕಿಮೀ ದೂರದಲ್ಲಿ ಹೊಸ ಆನೆ ಶಿಬಿರ ಆರಂಭಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿಯೇ ಟ್ರೀಪಾರ್ಕ್, ಹಾರಂಗಿ ಉದ್ಯಾನವನ ಇರುವುದರಿಂದ ಪ್ರವಾಸೋದ್ಯಮಕ್ಕೂ ಅನುಕೂಲ ಆಗುವ ನಿರೀಕ್ಷೆ ಇದೆ. ಅನನ್ಯಕುಮಾರ್, ವಲಯ ಅರಣ್ಯಾಧಿಕಾರಿ, ಕುಶಾಲನಗರ
from India & World News in Kannada | VK Polls https://ift.tt/2FT7iV9